ಕರಾವಳಿ

ಕೊಡಿಯಾಲ ತೇರು : ಮಂಗಳೂರಿನಲ್ಲಿ ಓಕುಳಿ ಹಬ್ಬದ ಸಡಗರ – ಸಾವಿರಾರು ಮಂದಿಯಿಂದ ಬಣ್ಣ ಎರಚಿ ಸಂಭ್ರಮ

Pinterest LinkedIn Tumblr

ಮಂಗಳೂರು: ನಗರದ ರಥಬೀದಿಯ ವೆಂಕರಮಣ ದೇವಸ್ಥಾನದ ಆವರಣದಲ್ಲಿ ಗುರುವಾರ ಕೊಡಿಯಾಲ ತೇರು ಪ್ರಯುಕ್ತ ಓಕುಳಿ ಹಬ್ಬ ನಡೆಯಿತು. ಓಕುಳಿ ಹಬ್ಬದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಬಣ್ಣಗಳ ಸಂಭ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ವೆಂಕಟರಮಣ ದೇವಸ್ಥಾನದ ವರ್ಷಾವಧಿ ರಥೋತ್ಸವ ಕಾರ್ಯಕ್ರಮದ ಕೊನೆಯ ದಿನದಂದು ಓಕುಳಿ ಹಬ್ಬವನ್ನು ಆಚರಿಸಲಾಗುತ್ತದೆ. ಬಹುತೇಕವಾಗಿ ಜಿಎಸ್ಬಿ ಸಮುದಾಯದವರು ಭಾಗವಹಿಸುವ ಈ ಓಕುಳಿ ಹಬ್ಬದಲ್ಲಿ ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತಾ ಸಂತಸ ಹಂಚಿಕೊಳ್ಳುವ ಮೂಲಕ ಪ್ರೀತಿ, ಸಹೋದರತ್ವ, ಬಾಂಧವ್ಯವನ್ನು ವ್ಯಕ್ತಪಡಿಸುತ್ತಾರೆ.

ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ವೇದಿಕೆಯನ್ನು ಹಾಕಲಾಗಿದ್ದು, ಕೆಳಗಡೆ ಸಾವಿರಾರು ಮಂದಿ ಬಣ್ಣಗಳನ್ನು ಪರಸ್ಪರ ಹಚ್ಚಿಕೊಳ್ಳುತ್ತಾ ಸಂಗೀತ ಲಯಕ್ಕೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಒಂದೆಡೆ ಯುವಕರು ಬಣ್ಣಗಳ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಅಲ್ಲಲ್ಲಿ ಮಕ್ಕಳು ಪಿಚಕಾರಿಗಳಲ್ಲಿ ಬಣ್ಣ ನೀರು ತುಂಬಿಸಿ, ಪರಸ್ಪರ ಚಿಮ್ಮಿಸುತ್ತಾ ಖುಷಿ ಪಟ್ಟರು. ಸಣ್ಣ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಈ ಓಕುಳಿ ಸಂಭ್ರಮದಲ್ಲಿ ಪಾಲ್ಗೊಂಡರು.ಮತ್ತೆ ಹಲವರು ದೂರದಲ್ಲಿ ಈ ಸಂಭ್ರಮದ ಓಕುಳಿ ಹಬ್ಬವನ್ನು ಕಣ್ಣು ತುಂಬಿಸಿದರು.

ಬೆಳಗ್ಗೆ ದೇವರ ಮೂರ್ತಿಯ ರಥಯಾತ್ರೆ ಆರಂಭಗೊಳ್ಳುತ್ತಿರುವಂತೆಯೇ ಆರಂಭಗೊಂಡ ಈ ಓಕುಳಿ ಹಬ್ಬ ಸಂಜೆಯವರೆಗೆ ನಡೆಯಿತು.

Comments are closed.