ಕರಾವಳಿ

ಕಾಂಗ್ರೆಸ್ ಮುಖಂಡರ ಆರೋಗ್ಯ ವಿಚಾರಿಸಿದ ಬಿಜೆಪಿ ಸಂಸದ ನಳಿನ್ ಕುಮಾರ್ – ಆಶೀರ್ವಾದ ಮಾಡಿದ ಪೂಜಾರಿ

Pinterest LinkedIn Tumblr

ಮಂಗಳೂರು, ನವೆಂಬರ್ 19: : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್‌‌ನ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರ ಬಳಿ ತೆರಳಿ ಅವರ ಆರೋಗ್ಯ ವಿಚಾರಿಸಿದ್ದು, ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ತಲೆ ಸವರಿದ ಜನಾರ್ಧನ್ ಪೂಜಾರಿ ಆಶೀರ್ವಾದ ಮಾಡಿದ ಘಟನೆ ಇಂದು ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲ್ ಮುಖಾಮುಖಿಯಾಗಿದ್ದರು. ಹಾಗಂತ ಅವರಿಬ್ಬರ ಮಧ್ಯೆ ಯಾವುದೇ ದ್ವೇಷವಿಲ್ಲ. ಎಲ್ಲೇ ಸಿಗಲಿ ನಳಿನ್ ಪೂಜಾರಿಯವರ ಆಶೀರ್ವಾದ ತೆಗೆದುಕೊಳ್ಳದೆ ಮುಂದೆ ಹೋಗುವುದಿಲ್ಲ. ಈ ಬಾರಿಯೂ ಇಂಥದ್ದೇ ಒಂದು ಸನ್ನಿವೇಶ ಎದುರಾಯಿತು.

ಇಂದು ದಕ್ಷಿಣ ಕನ್ನಡ ಜಿಲ್ಲಾ ಬಿಲ್ಲವ ಸಂಘದಿಂದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೊಡಿ ಮರ ಸಲ್ಲಿಸುವ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲು ಆಗಮಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪೂಜಾರಿಯವರನ್ನು ಕಂಡು ತಕ್ಷಣ ಪೂಜಾರಿಯವರ ಬಳಿ ಹೋಗಿ ತಮ್ಮ ಆರೋಗ್ಯ ಹೇಗಿದೆ ಎಂದು ವಿಚಾರಿಸಿದರು. ಈ ವೇಳೆ ಪೂಜಾರಿಯವರು ನಳಿನ್ ಕುಮಾರ್ ಅವರ ತಲೆ ಸವರಿ ಆಶೀರ್ವಾದ ಮಾಡಿದರು. ಬಳಿಕ ಇಬ್ಬರೂ ಪರಸ್ಪರ ಕುಶಲೋಪರಿ ಮಾತುಗಳನ್ನಾಡಿದರು.

ಈ ಹಿಂದೆ ಕೂಡ ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆದ ಮಂಗಳೂರು ದಸರಾ ಸಂದರ್ಭ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಳಿನ್‌, ಪೂಜಾರಿಯವರ ಆಶೀರ್ವಾದ ಪಡೆದುಕೊಂಡಿದ್ದರು.

ವಿಪರ್ಯಾಸವೆಂದರೆ ಅನಾರೋಗ್ಯದಿಂದ ಬಳಲಿದ ಕಾಂಗ್ರೆಸ್ ನಾಯಕನನ್ನು ವಿಚಾರಿಸಲು ಕಾಂಗ್ರೆಸ್‌ನ ಇತರ ನಾಯಕರುಗಳೇ ಬಂದಿಲ್ಲ. ಎರಡೆರಡು ಬಾರಿ ಮಂಗಳೂರಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯರೂ ಪೂಜಾರಿಯವರನ್ನು ವಿಚಾರಿಸಿಲ್ಲ ಎಂಬ ಅಸಮಾಧಾನ ಪಕ್ಷದ ಕಾರ್ಯಕರ್ತರಲ್ಲೇ ಇತ್ತು.

ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಂಟ್ವಾಳಕ್ಕೆ ಆಗಮಿಸಿದ್ದರು. ಕಾಂಗ್ರೆಸ್‌ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಅನಾರೋಗ್ಯದಿಂದ ಬಳಲುತ್ತಿರುವ ಮಾಹಿತಿ ಇದ್ದರೂ ಸಿ.ಎಂ, ಸಮೀಪದಲ್ಲೇ ಇದ್ದ ಪೂಜಾರಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿರಲಿಲ್ಲ. ಈ ಬಗ್ಗೆ ಕಾಂಗ್ರೆಸ್ ಪಕ್ಷದಿಂದಲೇ ಭಾರೀ ಅಸಮಾಧಾನ ಕೇಳಿ ಬಂದಿತ್ತು. ಮಂಗಳೂರು ತನಕ ಬಂದೂ ಹಿರಿಯ ಕಾಂಗ್ರೆಸ್ ರಾಜಕಾರಣಿಯೊಬ್ಬರ ಆರೋಗ್ಯ ವಿಚಾರಿಸಲೂ ಹಿಂದೇಟು ಹಾಕಿದ್ದ ಸಿದ್ದರಾಮಯ್ಯನವರ ಮೇಲೆ ಕಾಂಗ್ರೆಸಿಗರು ಮುನಿಸಿಕೊಂಡಿದ್ದರು.

ಆದರೆ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಪೂಜಾರಿ ಆರೋಗ್ಯ ವಿಚಾರಿಸಿದ್ದು, ಅದಕ್ಕೆ ಸಂತಸಗೊಂಡ ಪೂಜಾರಿ ನಳಿನ್ ತಲೆ ಸವರಿ ಆಶೀರ್ವಾದಿಸಿದರು. ಇದೀಗ ಪೂಜಾರಿ ಹಾಗೂ ನಳಿನ್ ಕುಮಾರ್ ಕಟೀಲ್ ನಡುವಿನ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.