ಮಂಗಳೂರು, ನವೆಂಬರ್. 3: ರಾಮಕೃಷ್ಣ ಮಿಷನ್ನ ಸ್ವಚ್ಛತಾ ಅಭಿಯಾನದ 4ನೇ ಹಂತ ಹಾಗೂ ದ.ಕ.ಜಿಲ್ಲೆಯ 100 ಗ್ರಾಮಗಳಲ್ಲಿ 1,000 ಶ್ರಮದಾನ ಕಾರ್ಯಕ್ರಮಗಳಿಗೆ ಕೇಂದ್ರ ನೈರ್ಮಲ್ಯ ಹಾಗೂ ಕುಡಿಯುವ ನೀರು ಖಾತೆ ಸಚಿವ ರಮೇಶ ಜಿಗಜಿಣಗಿ ಅವರು ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಸ್ವಚ್ಛ ಭಾರತ ಯೋಜನೆಯನ್ನು ಆರಂಭಿಸಿದ ದಿನದಿಂದ ಈವರೆಗೆ ದೇಶಾದ್ಯಂತ 5.21 ಕೋಟಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2019ರ ವೇಳೆಗೆ ಭಾರತವನ್ನು ಬಯಲು ಶೌಚಮುಕ್ತವೆಂದು ಘೋಷಿಸಲಾಗುವುದು ಎಂದು ಹೇಳಿದರು.
ದೇಶದ 2.67 ಲಕ್ಷ ಗ್ರಾಮಗಳು, 1.17 ಲಕ್ಷ ಗ್ರಾಪಂಗಳು, 225 ಜಿಲ್ಲೆಗಳು, 2,048 ತಾಲೂಕುಗಳನ್ನು ಈಗಾಗಲೇ ಬಯಲು ಶೌಚ ಮುಕ್ತ ಪ್ರದೇಶ ಗಳೆಂದು ಘೋಷಿಸಲಾಗಿದೆ. ರಾಷ್ಟ್ರದಲ್ಲಿ ಶೇ.70.62ರಷ್ಟು ಪ್ರಮಾಣದಲ್ಲಿ ಸಾರ್ವಜನಿಕರು ಶೌಚಾಲಯಗಳನ್ನು ಹೊಂದಿದ್ದಾರೆ. ಅದಕ್ಕಾಗಿ 13,948 ಕೋ.ರೂ. ಅನುದಾನ ವಿನಿಯೋಗಿಸಲಾಗಿದೆ ಎಂದು ಸಚಿವರು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಮಿಷನ್ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯ ವಹಿಸಿದ್ದರು. ನಿಟ್ಟೆ ವಿವಿ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ, ಎಂಆರ್ಪಿಎಲ್ ಎಂಡಿ ಎಚ್. ಕುಮಾರ್, ಗದಕ ಪೂರ್ವ ಶಾಸಕ ಡಿ. ಆರ್. ಪಾಟೀಲ್ ಭಾಗವಹಿಸಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ದ.ಕ. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಜಿ.ಪಂ ಸಿಇಒ ಡಾ. ಎಂ. ಆರ್. ರವಿ ಉಪಸ್ಥಿತರಿದ್ದರು. ಸ್ವಚ್ಛ ಮಂಗಳೂರು ಅಭಿಯಾನ ಸಂಚಾಲಕ ಸ್ವಾಮಿ ಏಕಗಮ್ಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.
Comments are closed.