ಬಾಗಲಕೋಟೆ: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದಾಗಿ ರಾಜ್ಯಾದ್ಯಂತ ರೋಗಿಗಳು ಪರದಾಡುತ್ತಿರುವಂತೆಯೇ ಅತ್ತ ಬಾಗಲಕೋಟೆಯಲ್ಲಿ ವೈದ್ಯರೊಬ್ಬರು ಗರ್ಭಿಣಿ ಮಹಿಳೆಗೆ ನೆರವಾಗುವ ಮೂಲಕ ಆಕೆಯ ಜೀವ ಉಳಿಸಿದ್ದಾರೆ.
ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ನಡುವೆಯೇ ಇಂದು ಬಾಗಲಕೋಟೆಯಲ್ಲಿ ಗರ್ಭಿಣಿ ಮಹಿಳೆ ಚೈತ್ರಪವಾರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮುಷ್ಕರದ ಹಿನ್ನಲೆಯಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನ ಗುಂದ ತಾಲ್ಲೂಕಿನ ಚಿಕ್ಕಕೊಡಗಲಿ ತಾಂಡಾ ನಿವಾಸಿ ಚೈತ್ರಾ ಪವಾರ 10.30ಕ್ಕೆ ಆಸ್ಪತ್ರೆಗೆ ಬಂದಿದ್ದರು. ಮಹಿಳೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯವುಳ್ಳ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ.
ಏತನ್ಮಧ್ಯೆ ಮಹಿಳೆ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ, ಗರ್ಭದಲ್ಲಿದ್ದ ಮಗುವಿನ ಕಾಲು ಮುಂದೆ ಬಂದ ಸ್ಥಿತಿ ಕಂಡುಬಂದಿದ್ದು, ಆಕೆಯ ಪೋಷಕರು ದಾರಿಕಾಣದೇ ಅತಂತ್ರಸ್ಥಿತಿಯಲ್ಲಿದ್ದ ವೇಳೆ ಆಸ್ಪತ್ರೆಯ ಸಂಶೋಧನಾ ವಿದ್ಯಾರ್ಥಿಗಳು, ದಾದಿಯರು ಆಕೆಯ ನೆರವಿಗೆ ಮುಂದಾಗಿದ್ದಾರೆ.
ಕೂಡಲೇ ಈ ವಿಚಾರವನ್ನು ಖಾಸಗಿ ವೈದ್ಯ ಡಾ.ಮನೋಹರ್ ಅವರಿಗೆ ತಿಳಿದಿದ್ದು, ತಕ್ಷಣವೇ ಆಪರೇಷನ್ ಥಿಯೇಟರ್ಗೆ ಧಾವಿಸಿದ ಅವರು ಮಹಿಳೆಗೆ ಚಿಕಿತ್ಸೆ ಆರಂಭಿಸಿದ್ದಾರೆ. ಬಳಿಕ ಮಹಿಳೆ ಚೈತ್ರಾ ಪವಾರ ಅವರಿಗೆ ಗಂಡುಮಗುವಾಗಿದ್ದು, ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಮನೋಹರ್ ಅವರು, ಮಹಿಳೆಗೆ ನಾರ್ಮಲ್ ಹೆರಿಗೆಯಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಚೈತ್ರಾ ಅವರ ಕುಟುಂಬಸ್ಥರು ಹೇಳಿರುವಂತೆ ಮೊದಲ ಎರಡು ಮಗು ಕಳೆದುಕೊಂಡಿದ್ದ ಚೈತ್ರಾಳನ್ನು ನೋಡಿಕೊಳ್ಳಲು ಯಾರು ಇಲ್ಲ, ಮೂರನೇ ಮಗು ಹೆರಿಗೆ ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೆ, ದೇವರಂತೆ ಬಂದು ಡಾ.ಮನೋಹರ್ ಅವರು ಕಾಪಾಡಿದರು. ಮಗುವಿಗೆ ವೈದ್ಯರ ಹೆಸರನ್ನೇ ಇಡುತ್ತೇವೆ ಎಂದು ಚೈತ್ರಾ ಸಂಬಂಧಿ ಸುರೇಶ್ ಹೇಳಿದ್ದಾರೆ.
Comments are closed.