ಮಂಗಳೂರು, ಅಕ್ಟೋಬರ್. 20: ನಗರದಲ್ಲಿ ಮಾದಕ ದ್ರವ್ಯ ಸಾಗಾಟ, ಮಾರಾಟ ಮಾಡುವವರ ಪತ್ತೆಯ ಬಗ್ಗೆ ಇಕೊನಾಮಿಕ್ ಆಯಂಡ್ ನಾರ್ಕೊಟೆಕ್ಸ್ ಕ್ರೈಂ ಠಾಣಾ ಪೊಲೀಸರು ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೋರ್ವನನ್ನು ಮಂಗಳೂರಿನ ಇಕೊನಾಮಿಕ್ ಆಯಂಡ್ ನಾರ್ಕೊಟೆಕ್ಸ್ ಕ್ರೈಂ ಠಾಣಾ ಪೊಲೀಸರು ಕುದ್ರೋಳಿ ಟಿಪ್ಪುಸುಲ್ತಾನ್ ನಗರದ ಬಳಿ ಗುರುವಾರ ಬಂಧಿಸಿದ್ದಾರೆ.
ಬಂಧಿತನನ್ನು ಕುದ್ರೋಳಿ ನಿವಾಸಿ ಮುಹಮ್ಮದ್ ನೌಫಾಲ್ (30) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 5,600 ರೂ. ಮೌಲ್ಯದ 245 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಕೊನಾಮಿಕ್ ಆಯಂಡ್ ನಾರ್ಕೊಟೆಕ್ಸ್ ಕ್ರೈಂ ಪೊಲೀಸ್ ಠಾಣಾ ನಿರೀಕ್ಷಕ ಮುಹಮ್ಮದ್ ಶರೀಫ್ ಹಾಗೂ ಸಿಬ್ಬಂದಿ ಗುರುವಾರ ಕುದ್ರೋಳಿ ಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ನಿರತರಾಗಿದ್ದಾಗ ಟಿಪ್ಪು ಸುಲ್ತಾನ್ ನಗರದ ಬಳಿ ತಿರುವಿನಲ್ಲಿ ಪ್ಲಾಸ್ಟಿಕ್ ಚೀಲವೊಂದನ್ನು ಹಿಡಿದುಕೊಂಡಿದ್ದ ನೌಫಾಲ್ ಪೊಲೀಸ್ ಜೀಪ್ನ್ನು ಕಂಡು ಓಡಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಪೊಲೀಸರು ಆತನನ್ನು ಹಿಡಿದು ತಪಾಸಣೆಗೊಳ ಪಡಿಸಿದಾಗ ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ 5,600 ರೂ. ಮೌಲ್ಯದ 245 ಗ್ರಾಂ ಗಾಂಜಾ ಪತ್ತೆಯಾಗಿದೆ. ವಿಚಾರಿಸಿದಾಗ ಮಾರಾಟ ಮಾಡಲು ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಶ್ರೀಮತಿ ಉಮಾ ಪ್ರಶಾಂತ್ ಅವರ ನಿರ್ದೇಶನದಂತೆ ಸಿಸಿ ಆರ್ ಬಿ ಎಸಿಪಿ ವೆಲೆಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಠಾಣಾ ನಿರೀಕ್ಷಕ ಮುಹಮ್ಮದ್ ಶರೀಫ್, ಸಿಬ್ಬಂದಿಗಳಾದ ಜಗದೀಶ್, ಶಾಜು ನಾಯರ್, ಕಿಶೋರ್ ಪೂಜಾರಿ ಪಾಲ್ಗೊಂಡಿದ್ದರು.
Comments are closed.