ಕರಾವಳಿ

ಕೊಲ್ಲೂರು ಮೂಕಾಂಬಿಕೆ ಸನ್ನಿದಿಯಲ್ಲಿ ‘ಅಣ್ಣಾವ್ರ ಮಕ್ಕಳು’..!

Pinterest LinkedIn Tumblr

ಕುಂದಾಪುರ: ಸ್ಯಾಂಡಲ್ ವುಡ್ ಖ್ಯಾತ ನಾಯಕನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬುಧವಾರ ಕುಂದಾಪುರಕ್ಕೆ ಆಗಮಿಸಿದ್ರು. ತಮ್ಮ ನೆಚ್ಚಿನ ನಾಯಕ ನಟನನ್ನು ಕಂಡು ಅಭಿಮಾಗಿಗಳು ಪುಳಕಿತರಾದ್ರು.

ಕನ್ನಡ ಚಿತ್ರರಂಗದ ಫೆಮಸ್ ಹಿರೋ, ಕನ್ನಡ ಫಿಲ್ಮ್ ಇಂಡಸ್ಟ್ರಿಯ ದೊಡ್ಮನೆಯ ಹುಡುಗ ಫವರ್ ಸ್ಟಾರ್ ಪುನೀತ್ ರಾಜಕುಮಾರ್ ದಂಪತಿಗಳು ಬುಧವಾರ ಕುಂದಾಪುರದಲ್ಲಿ ಕಾಣಿಸಿಕೊಂಡರು. ಎಸ್… ಮಧ್ಯಾಹ್ನದ ಸುಮಾರಿಗೆ ಕುಂದಾಪುರ ತಾಲೂಕಿನ ಪ್ರಸಿದ್ಧ ದೇವಸ್ಥಾನ ಕೊಲ್ಲೂರು ಶ್ರೀ ಮೂಕಾಂಬಿಕೆ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿ ಶ್ರೀ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಅಶ್ವಿನಿ, ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯರಾಘವೇಂದ್ರ ರಾಜಕುಮಾರ್, ನಿರ್ಮಾಪಕ ವಕ್ವಾಡಿ ಮೂಲದ ವಿ.ಕೆ. ಮೋಹನ್ ಹಾಗೂ ಸ್ನೇಹಿತರ ಹೊತೆ ದೇವಳಕ್ಕೆ ಆಗಮಿಸಿದ್ದ ವೇಳೆ ನೆರೆದಿದ್ದ ಭಕ್ತರು ತಮ್ಮ ನೆಚ್ಚಿನ ನಟನನ್ನು ಕಂಡು ಪುಳಕಿತರಾದ್ರು. ಹಲವರು ಶೇಕ್ ಹ್ಯಾಂಡ್ ಮಾಡಿ ಖುಷಿಪಟ್ರೇ ಇನ್ನು ಹಲವರು ಮೊಬೈಲುಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ರು. ಯಾವುದೇ ಪ್ರಚಾರವಿಲ್ಲದೆಯೂ ದೇವಸ್ಥಾನಕ್ಕೆ ಬಂದ ಪುನೀತ್ ಅಭಿಮಾನಿಗಳ ಸಂಭ್ರಮ ಕಂಡು ಬೆರಗಾದ್ರು. ಅಭಿಮಾನಿಗಳ ನೂಕುನುಗ್ಗಲು ತಪ್ಪಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು.

ಕೊಲ್ಲೂರು ಮೂಲಕ ಕುಂದಾಪುರದ ವಕ್ವಾಡಿಗೆ ಆಗಮಿಸಿದ ಅವರು ವಕ್ವಾಡಿಯ ವಿ.ಕೆ. ಹರೀಶ್ ದಂಪತಿಗಳ ‘ಸ್ಪೂರ್ತಿ’ ನಿವಾಸಕ್ಕೆ ಭೇಟಿ ನೀಡಿ ಅಲ್ಲಿಯೇ ಊಟ ಮಾಡಿದ್ರು. ಅಲ್ಲಿಯೇ ನಾಟಿಕೋಳಿ, ನೀರು ದೋಸೆ, ಕಡಬು, ಹಾಗೂ ವಿವಿಧ ಮೀನು ಖಾದ್ಯಗಳನ್ನು ಸವಿದು ಪುನೀತ್ ಸಂಭ್ರಮಿಸಿದ್ರು. ಅಷ್ಟೇ ಅಲ್ಲದೇ ನನಗೆ ಮೀನು ಊಟ ತುಂಬಾನೇ ಇಷ್ಟ. ತಂದೆಯ ಮೂಲಕ ಕರಾವಳಿಯ ಸಂಪರ್ಕ ಸಾಧ್ಯವಾಗಿದೆ. ತಂದೆಯವರು ಕೂಡ ಈ ಭಾಗವನ್ನು ತುಂಬಾನೇ ಇಷ್ಟಪಡುತ್ತಿದ್ದರು ಎಂಬುದನ್ನು ಮೆಲುಕು ಹಾಕಿದ್ರು. ತುಳು ಚಿತ್ರರಂಗ ಈಗ ಬೆಳೆಯುತ್ತಿರುವುದು ಉತ್ತಮ ವಿಚಾರ ಎಂದ ಅವರು ಅವಕಾಶ ಸಿಕ್ಕಲ್ಲಿ ತುಳು ಚಿತ್ರದ ಗೀತೆ ಹಾಡುವ ಬಯಕೆಯಿದೆ ಎಂದ್ರು. ವಿ.ಕೆ. ಮೋಹನ್ ದಂಪತಿಗಳು, ವಿ.ಕೆ. ಹರೀಶ್ ದಂಪತಿಗಳು, ವಿ.ಕೆ. ಸತೀಶ್ ದಂಪತಿಗಳು, ವಿ.ಕೆ. ರಾಘವೇಂದ್ರ ದಂಪತಿಗಳು, ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರ ಪುತ್ರ ರತೀಕ್ ಮುರ್ಡೇಶ್ವರ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

ವಕ್ವಾಡಿಗೆ ನಟ ಪುನೀತ್ ಬರುವುದು ಸುದ್ದಿಯಾದ ಕಾರಣ ಇಲ್ಲಿಯೂ ಕೆಲವು ಅಭಿಮಾನಿಗಳು ಬಂದು ಪುನೀತ್ ಅವರನ್ನು ಭೇಟಿಯಾದ್ರು. ಕೆಲ ಕಾಲ ಇಲ್ಲಿ ವಿರಮಿಸಿದ ಪುನೀತ್ ತಾನೇ ಕಾರನ್ನು ಡ್ರೈವ್ ಮಾಡಿಕೊಂಡು ಮಂಗಳೂರಿನತ್ತ ಸಾಗಿದ್ರು.

ಶಿವಣ್ಣ ದಂಪತಿ ಕೊಲ್ಲೂರು ಭೇಟಿ:
ಇನ್ನು ‘ಟಗರು’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವರಾಜ್ ಕುಮಾರ್ ಇತ್ತೀಚೆಗೆ ಉಡುಪಿ ಆಸುಪಾಸಿನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ದಂಪತಿಗಳು ಮಂಗಳವಾರ ಸುದ್ದಿಯಿಲ್ಲದೇ ಕೊಲ್ಲೂರಿಗೆ ಭೇಟಿ ನೀಡಿ ಮೂಕಾಂಬಿಕೆ ದರ್ಶನ ಪಡೆದು ವಾಪಾಸಾಗಿದ್ದಾರೆ.

ಒಟ್ಟಿನಲ್ಲಿ ಎರಡು ದಿನದಲ್ಲಿ ಮೇರು ನಟ ದಿ. ಡಾ. ರಾಜಕುಮಾರ್ ಅವರ ಮಕ್ಕಳಿಬ್ಬರು ಸೇರಿದಂತೆ ಕುಟುಂಬದವರು ಕೊಲ್ಲೂರಿಗೆ ಭೇಟಿ ನೀಡಿದ್ದು ಶೀ ದೇವಿಯ ದರ್ಶನ ಪಡೆದಿದ್ದಾರೆ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.