ಕರಾವಳಿ

ವಾಹನ ಸವಾರರು ಸಾರಿಗೆ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಡೆಗಟ್ಟಲು ಸಾಧ್ಯ :28ನೆ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಆರ್.ಎಂ. ವರ್ಣೇಕರ್

Pinterest LinkedIn Tumblr

ಮಂಗಳೂರು, ಜನವರಿ.12: ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ 28ನೆ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2017’ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಗುರುವಾರ ನಡೆಯಿತು.

ರಸ್ತೆ ಅಪಘಾತದಲ್ಲಿ ಪ್ರತಿದಿನ 400 ಜನರು ಸಾವನ್ನಪ್ಪುತ್ತಿದ್ದು, ವಾರ್ಷಿಕ ಸುಮಾರು 1.4 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪುತ್ತಿದ್ದಾರೆ. ಇದು ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಮಾನಾಗಿದೆ. ಕಳೆದ ವರ್ಷ ಮಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ 73 ಜನರು ಮೃತಪಟ್ಟಿದ್ದು, 622 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಪಾದಚಾರಿಗಳು, ಮೋಟಾರ್ ಸೈಕ್ಲಿಸ್ಟ್, ದ್ವಿಚಕ್ರ ವಾಹನ ಸವಾರರು ಹಾಗೂ ಸೈಕೋಗಳು ರಸ್ತೆ ಅಪಘಾತಕ್ಕೀಡಾಗಿದ್ದಾರೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತ ಡಾ. ಸಂಜೀವ್ ಪಾಟೀಲ್ ಮಾಹಿತಿ ನೀಡಿದರು.

ಅಪಘಾತದ ಬಳಿಕ ಆತನ ಆರೈಕೆಗೆ ಹೆಚ್ಚು ವೆಚ್ಚವನ್ನು ಮಾಡಬೇಕಾಗುತ್ತದೆ. ಜಿಡಿಪಿಯ ಶೇ.3ರಷ್ಟು ಹಣವನ್ನು ರಕ್ಷಣಾ ವಿಭಾಗಕ್ಕೆ ನೀಡಲಾಗುವುದೆಂದು ಬಜೆಟ್ನಲ್ಲಿ ಸರಕಾರ ತಿಳಿಸಿದೆ. ರಸ್ತೆ ದಾಟುವಾಗ ಹಾಗೂ ಸಿಗ್ನಲ್ಗಳನ್ನು ಅನುಸರಿಸಿದರೆ ಅಪಘಾತ ತಡೆಯಲು ಸಾಧ್ಯ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಪಾಟೀಲ್ ಹೇಳಿದರು.

ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದರೆ ಇದಕ್ಕೆ ಅನುಗುಣವಾಗಿ ರಸ್ತೆ ಅಗಲೀಕರಣ, ಗುಣಮಟ್ಟದ ರಸ್ತೆ ನಿರ್ಮಾಣದ ಕಾರ್ಯಗಳಾಗಬೇಕಿದೆ. ಸರಕಾರ ಹೆಚ್ಚು ಹಣವನ್ನು ನೀಡುತ್ತಿದ್ದು, ಸರಿಯಾದ ಪ್ರಮಾಣದಲ್ಲಿ ಕಾರ್ಯಗಳು ನಡೆಯಬೇಕಿದೆ. ವಾಹನಗಳ ದಟ್ಟಣೆ, ಅಜಾಗರೂಕತೆಯಿಂದಾಗಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಆಯುಕ್ತ ಆರ್.ಎಂ. ವರ್ಣೇಕರ್ ಹೇಳಿದರು.

ದ್ವಿಚಕ್ರ ವಾಹನದವರು ಹೆಲ್ಮೆಟ್, ಕಾರಿನಲ್ಲಿರವವರು ಶೀಟ್ ಬೆಲ್ಟ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ರಸ್ತೆ ಬದಿಯ ಸೂಚನಾ ಫಲಕಗಳನ್ನು ಗಮನಿಸಬೇಕು. ಚಾಲನೆ ಸಂದರ್ಭ ಮೊಬೈಲ್ ಬಳಕೆ ಮಾಡಬಾರದು. ನಿಯಮಗಳು ವಾಹನ ಚಾಲಕರಿಗೆ ಅಷ್ಟೇ ಅಲ್ಲ, ಪಾದಚಾರಿಗಳಿಗೂ ಸಂಬಂಧಿಸಿದ್ದಾಗಿದೆ ಎಂದು ಅವರು ಸಲಹೆ ನೀಡಿದರು.

ಕಾರ್ಪೊರೇಶನ್ ಬ್ಯಾಂಕ್ನ ಜನರಲ್ ಮ್ಯಾನೇಜರ್ ಲಕ್ಷ್ಮೀನಾಥ ರೆಡ್ಡಿ ಸಪ್ತಾಹವನ್ನು ಉದ್ಘಾಟಿಸಿದರು. ರಸ್ತೆ ಸುರಕ್ಷತಾ ನಿಯಮಗಳು ಎಷ್ಟೇ ಕಠಿಣವಾಗಿದ್ದರೂ ಅವು ಎಲ್ಲರ ಒಳಿತಿಗಾಗಿ ಇವೆ. ಸುರಕ್ಷತೆ ವಿಧಾನಗಳನ್ನು ಅನುಸರಿಸಿದರೆ ಅಪಘಾತಗಳ ಸಂಖ್ಯೆ ಇಳಿಮುಖದತ್ತ ಸಾಗುತ್ತದೆ. ವಾಹನ ಮಾಲಕರ, ಚಾಲಕರ ಅಸಮರ್ಥ ಚಾಲನೆ, ಮದ್ಯಪಾನ ಮಾಡಿ ಚಾಲನೆ ಮಾಡುವುದರಿಂದ ಬಹಳಷ್ಟು ಜನರ ಸಾವಿಗೆ ಕಾರಣವಾಗುವುದು ದುರಂತ ಎಂದು ಲಕ್ಷ್ಮೀನಾಥ ರೆಡ್ಡಿ ಹೇಳಿದರು.

ಇದೇ ಸಂದರ್ಭದಲ್ಲಿ ಉತ್ತಮ ಸೇವೆಗೈದ ಎಸಿಪಿಗಳಾದ ಉದಯ ನಾಯಕ್, ಕೆ. ತಿಲಕಚಂದ್ರ,ಎ ಆರ್ ಟಿ ಓ ಜಿ.ಎಸ್. ಹೆಗಡೆ, ಡಿಜಿಎಮ್ ವಿಠ್ಠಲ್ ಶೆಣೈಯವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಾಫಿಕ್, ಅಪಘಾತಗಳ ಕುರಿತು ಸುರಕ್ಷತೆಯನ್ನು ಹೊಂದುವ, ಸಂಚಾರ ಚಿಹ್ನೆಗಳು, ಸುರಕ್ಷತಾ ವಿಧಾನಗಳು, ಆಟೊ ಚಾಲಕರ ಸುರಕ್ಷತೆ ಕುರಿತ ಮಾಹಿತಿಯುಳ್ಳ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಸ್ವಾಗತಿಸಿದರು. ಹಿರಿಯ ಮೋಟಾರ್ ವಾಹನ ನಿರೀಕ್ಷಕ ರವಿಶಂಕರ್ ಪಿ. ಕಾರ್ಯಕ್ರಮ ನಿರೂಪಿಸಿದರು. ಪ್ರಾದೇಶಿಕ ಸಾರಿಗೆ ಅಧೀಕ್ಷಕ ಸತೀಶ್ ವಂದಿಸಿದರು.

Comments are closed.