ಮಂಗಳೂರು, ಡಿ.10: ಜಿಲ್ಲೆಯ ಕಂದಾಯ ಇಲಾಖೆ ಮತ್ತು ಇತರ ಇಲಾಖೆಗಳ ವಿವಿಧ ಸರಕಾರಿ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದೊಂದಿಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಸ್ಪಂದನ’ ಏಕಗವಾಕ್ಷಿ ಕೇಂದ್ರವನ್ನು ಶುಕ್ರವಾರ ಆರೋಗ್ಯ ಸಚಿವ ರಮೇಶ್ ಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.
ಈ ವೇಳೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕಬಿ.ಎ.ಮೊಯ್ದಿನ್ ಬಾವ, ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮತ್ತಿತರ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
‘ಸ್ಪಂದನ’ ಏಕಗವಾಕ್ಷಿ ಕೇಂದ್ರದಲ್ಲಿ ದೊರೆಯುವ ಸೇವೆಗಳು :
ಸಾರ್ವಜನಿಕರು ಸರಕಾರದ ವಿವಿಧ ಇಲಾಖೆಗಳ ಸೇವೆಗೆ ಸಂಬಂಧಪಟ್ಟ ಇಲಾಖಾ ಕಚೇರಿಗೆ ಅಲೆದಾಡುವ ಬದಲು ಈ ‘ಸ್ಪಂದನ’ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.
ಇಲ್ಲಿ ಸಲ್ಲಿಸಿದ ಅರ್ಜಿಗಳು ಸಂಬಂಧಿಸಿದ ಇತರ ಇಲಾಖೆಗಳಿಗೆ ರವಾನೆಯಾಗುವುದು.
ಬಳಿಕ ನಿಗದಿತ ಅವಧಿಯಲ್ಲಿ ಪ್ರಮಾಣಪತ್ರ/ ಅನುಮತಿ ಪತ್ರ ದೊರೆಯುವಂತೆ ವ್ಯವಸ್ಥೆ ರೂಪಿಸಲಾಗಿದೆ.
ಅಟಲ್ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ಸಿಗುತ್ತಿರುವ ಎಲ್ಲ 40 ಸೇವೆಗಳು ಸ್ಪಂದನದಲ್ಲಿ ದೊರೆಯಲಿದೆ.
ಜಾತಿ ಮತ್ತು ಆದಾಯ ಪ್ರಮಾಣಪತ್ರ, ಹಿಂದುಳಿದ ವರ್ಗಗಳ ಪ್ರಮಾಣಪತ್ರ- ಪ್ರವರ್ಗ 1, ಅನುಸೂಚಿತ ಜಾತಿ ಅಥವಾ ಅನು ಸೂಚಿತ ಪಂಗಡಗಳ ಪ್ರಮಾಣಪತ್ರ- ಪರಿಶಿಷ್ಟ ಜಾತಿ-ಪಂಗಡ, ವಿಧವಾ ದೃಢೀಕರಣ ಪತ್ರ, ವಸತಿ, ಗೇಣಿರಹಿತ ವ್ಯವಸಾಯಗಾರರ ಕುಟುಂಬದ ಸದಸ್ಯರ, ವಾಸಸ್ಥಳ, ಜಮೀನು ಇಲ್ಲದಿರುವ, ಸಣ್ಣ/ ಅತೀಸಣ್ಣ ಹಿಡುವಳಿದಾರರ, ಕೃಷಿ ಕಾರ್ಮಿಕ, ಬೋನಾಫೈಡ್, ಸಾಲ ತೀರಿಸುವ ಶಕ್ತಿ, ವ್ಯವಸಾಯಗಾರರ ಜನಸಂಖ್ಯೆ, ಆದಾಯ, ಮೇಲುಸ್ಥರಕ್ಕೆ ಸೇರಿಲ್ಲದಿರುವ ಬಗ್ಗೆ, ಅನುಕಂಪದ ಆಧಾರದಲ್ಲಿ ನೇಮಕಾತಿಗೆ ಆದಾಯ ಪತ್ರ, ಉದ್ಯೋಗ ಉದ್ದೇಶಕ್ಕೆ ಆದಾಯ ಪತ್ರ, ಇತರ ಹಿಂದುಳಿದ ವರ್ಗಗಳ, ಮೃತರ ಕುಟುಂಬದ ಜೀವಂತ ಸದಸ್ಯರು, ಸರಕಾರಿ ನೌಕರಿಯಲ್ಲಿ ಇಲ್ಲದಿರುವ, ನಿರುದ್ಯೋಗಿ, ವಂಶವೃಕ್ಷ, ಹೈದರಾಬಾದ್ ಕರ್ನಾಟಕ ಪ್ರದೇಶದ ವಸತಿ ಮತ್ತು ಅರ್ಹತೆ ಇತ್ಯಾದಿ ಕುರಿತಂತೆ ದೃಢೀಕರಣ ಪತ್ರ, ಬೆಳೆ, 94 ಸಿ, 94 ಸಿಸಿ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ, ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ, ಮೈತ್ರಿ, ಮನಸ್ವಿನಿ, ಭೂಹಿಡುವಳಿ ಪ್ರಮಾಣ ಪತ್ರ, ಯಸಿಡ್ ದಾಳಿಗೊಳಗಾದವರಿಗೆ ಪಿಂಚಣಿ, ರೈತರ ವಿಧವೆಯರ ಪಿಂಚಣಿ, ಅಂತ್ಯ ಸಂಸ್ಕಾರ ಯೋಜನೆಯ ಸೌಲಭ್ಯಕ್ಕೆ ಸ್ಪಂದನದಲ್ಲಿ ಅರ್ಜಿ ಸಲ್ಲಿಸಬಹುದು.
ಭೂಮಿ ಯೋಜನೆಯಡಿ ನೀಡಲಾಗುವ ಸೇವೆಗಳಾದ ಆರ್ಟಿಸಿ, ಹಕ್ಕು ಬದಲಾವಣೆ ಪ್ರತಿ, ಖಾತಾ ಪ್ರತಿ, ಭೂಮಿ ಆನ್ಲೈನ್ ಕಿಯಾಸ್ಕ್ ಸೇವೆ, ಖಾತಾ ಬದಲಾವಣೆ, ಸರಕಾರಿ ಆದೇಶ (ಭೂ ಮಂಜೂರಾತಿ, ಭೂಸುಧಾರಣೆ, ಮರು ಮಂಜೂರಾತಿ) ಈ ಕೇಂದ್ರದಲ್ಲಿ ದೊರೆಯಲಿದೆ.
Comments are closed.