ಮಂಗಳೂರು : ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾದ `ಮಂಗಳೂರು ದ್ರಾಕ್ಷಾರಸ ಉತ್ಸವ’ಕ್ಕೆ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜಾ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು, ನಿರ್ದೇಶಕ ರುಕ್ಮಾಂಗದ, ದ.ಕ. ಜಿಲ್ಲಾ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುನಾಥ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೇಶ್ ಹೆಚ್.ಆರ್. ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆರೋಗ್ಯಕರ ವೈನ್ ಬಳಕೆಗೆ ಉತ್ತೇಜನ ಮತ್ತು ಅರಿವು ಮೂಡಿಸಲು ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಈ ವೈನ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ.ಮೂರು ದಿನಗಳ ಕಾಲ ನಡೆಯಲಿರುವ ಈ ದ್ರಾಕ್ಷಾರಸ ಉತ್ಸವ’ದಲ್ಲಿ ಮಂಗಳೂರು ಜನರಿಗೆ ವೈನ್ ಸವಿಯುವ ಅವಕಾಶವನ್ನು ಕಲ್ಪಿಸಲಾಗಿದೆ.ಇದೀಗ ಕದ್ರಿ ಉದ್ಯಾನವನದಲ್ಲಿ ಸಂಜೆಯಾಗುತ್ತಿದ್ದಂತೆ ಹೂಗಳ ಪರಿಮಳವನ್ನು ಮೀರಿ ವೈನ್ನ ಸುವಾಸನೆ ಘಮಘಮಿಸುತ್ತಿದೆ.
ಉತ್ಸವದಲ್ಲಿ ರಾಜ್ಯದ 10 ಹಾಗೂ ಮಹಾರಾಷ್ಟ್ರದ 3 ವೈನರಿಗಳು ಭಾಗವಹಿಸಿದ್ದು,. ಉತ್ತಮ ಗುಣಮಟ್ಟದ ವಿವಿಧ ವೈನ್ ಪ್ರದರ್ಶನ ಮತ್ತು ಶೇ.10 ರಿಯಾಯಿತಿ ದರದೊಂದಿಗೆ ಮಾರಾಟ ಮಾಡಲಾಗುತ್ತಿದೆ.
ಆರೋಗ್ಯಕರ ವೈನ್ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವೈನ್ ದ್ರಾಕ್ಷಿ ಬೆಳೆಯುವ ಮತ್ತು ತಯಾರಿಕೆ ಬಗ್ಗೆ ತರಬೇತಿ, ವೈನ್ ತಯಾರಕರು ಮತ್ತು ಸಾರ್ವಜನಿಕರ ನಡುವೆ ವಿಚಾರ ವಿನಿಮಯ,ವೈನ್ದ್ರಾಕ್ಷಿ ತಂತ್ರಜ್ಞಾನ ಮತ್ತು ವೈನ್ ಶಿಕ್ಷಣ ಬಗ್ಗೆ ಸಂಕಿರಣ, ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ವೈನ್ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿ ಬೆಳೆಯಲು ಮತ್ತು ರಾಜ್ಯದ ವೈನ್ ತಯಾರಕರಿಗೆ ರಾಜ್ಯ ಮತ್ತು ರಾಷ್ಟ್ರೀಯ ಮಾರುಕಟ್ಟೆ ಪರಿಚಯಿಸಲು, ಆರೋಗ್ಯಕರ ವೈನ್ ಬಳಕೆ ಹೆಚ್ಚಿಸಲು ಅರಿವು ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ರೀತಿ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Comments are closed.