ಮಂಗಳೂರು: ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಮೀನುಗಳ ಉತ್ಪಾದನೆಯಾಗುತ್ತದೆ. ಈ ಪದ್ಧತಿಯು ವಿನಾಶಕಾರಿಯಾಗಿದೆ. ಇದನ್ನು ಅಳವಡಿಸಿಕೊಂಡರೆ 3-4 ವರ್ಷದಲ್ಲಿ ಮೀನುಗಾರಿಕೆಗೆ ಹೊಡೆತ ಬೀಳಲಿದೆ. ಈ ಹಿನ್ನೆಲೆಯಲ್ಲಿ ವಿನಾಶಕಾರಿ ಮೀನುಗಾರಿಕೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಸಲುವಾಗಿ ಈಗಾಗಲೇ ಕೇಂದ್ರ ಕೃಷಿ ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ಮೀನುಗಾರಿಕಾ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಂಗಳೂರಿನ ಪತ್ರಿಕಾ ಭವನದಲ್ಲಿಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳನಾಡಿನಲ್ಲಿ ಮೀನುಗಾರಿಕೆ ಕಡಿಮೆಯಾಗಿದೆ. ಆದರೆ, ಕರಾವಳಿಯಲ್ಲಿ ಅನಗತ್ಯವಾಗಿ ವಿಪರೀತ ಮೀನುಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಜಲ ಸಂತತಿ ನಾಶವಾಗುತ್ತಿದೆಯಲ್ಲದೆ, ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಂದರುಗಳು ಬಳಕೆಗೆ ಅಯೋಗ್ಯವಾಗುತ್ತದೆ ಎಂದರು.
ಮೀನು ಸಂತತಿಯನ್ನು ಸಂರಕ್ಷಿಸಲು ಹೆಚ್ಚು ಗಮನಹರಿಸುವ ಅಗತ್ಯವಿದೆ. ಪಶ್ಚಿಮ ಮತ್ತು ಪೂರ್ವ ಕರಾವಳಿ ತೀರದ ರಾಜ್ಯಗಳ ಮೀನುಗಾರಿಕಾ ಸಚಿವರ ಸಭೆಯನ್ನು ಕರೆಯಲು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದ್ದೇನೆ. ಮೀನುಮರಿಗಳು ಕಂಪೆನಿಗಳಿಗೆ ಸಾಗಾಟ ಮಾಡುವುದನ್ನು ಪತ್ತೆಹಚ್ಚಲು ನಿರೀಕ್ಷಕರನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ನೋಟ್ ಬ್ಯಾನ್ : ಮೆಚ್ಚುಗೆ ವ್ಯಕ್ತ ಪಡಿಸಿದ ಸಚಿವರು.
ದೇಶದಲ್ಲಿ ಕಪ್ಪು ಹಣ ನಿರ್ಮೂಲನೆ ಮಾಡಬೇಕಾದರೆ ಇಂಥದ್ದೊಂದು ಕ್ರಮದ ಅಗತ್ಯತೆ ಇತ್ತು. 500-1000 ಕರೆನ್ಸಿ ಚಲಾವಣೆ ನಿಷೇಧಿಸಿರುವ ಪ್ರಧಾನಿ ಮೋದಿಯವರ ಕ್ರಮ ಮೆಚ್ಚತಕ್ಕದ್ದು ಎಂದು ಶ್ಲಾಘನೆ ವ್ಯಕ್ತ ಪಡಿಸಿದ ಸಚಿವರು, ಆದರೆ, 500ರೂ.ಕರೆನ್ಸಿ ಬಾರದೆ ಏಕಾಏಕಿ 2000ರೂ. ಕರೆನ್ಸಿಯನ್ನು ತಂದರೆ ಜನಸಾಮಾನ್ಯರು ದೈನಂದಿನ ವ್ಯವಹಾರಕ್ಕೂ ತೊಂದರೆ ಪಡುವಂತಾಯಿತು ಎಂದು ಹೇಳಿದರು.
ನನಗಂತೂ ಮೋದಿಯವರ ಈ ನಿರ್ಧಾರದಿಂದ ಯಾವೂದೇ ಸಮಸ್ಯೆ ಇಲ್ಲ. ಏಕೆಂದರೆ ತಾನು ಸೂಕ್ತ ಸಮಯದಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದೇನೆ. ಇದರಿಂದಾಗಿ ನಾನು ನಿಶ್ಚಿಂತೆಯಿಂದ ನಿದ್ದೆಮಾಡುವಂತಾಗಿದೆ. ಆದರೆ ಆದರೆ, 500ರೂ.ಕರೆನ್ಸಿ ಬರುವ ಮೋದಲೇ 2000ರೂ. ಕರೆನ್ಸಿ ಬಿಡುಗಡೆಯಾಗಿರುವುದರಿಂದ ಜನ ಸಾಮಾನ್ಯರು ಕಷ್ಟ ಪಡುವಂತಾಗಿದೆ ಎಂದು ಹೇಳಿದರು.
ಬಂದರು ಅಭಿವೃದ್ಧಿಗೆ ಶೀಘ್ರ 10 ಕೋ.ರೂ. ಬಿಡುಗಡೆ :
ವಿವಿಧ ಕಾರಣದಿಂದ ಸ್ಥಗಿತಗೊಂಡಿದ್ದ ಮಂಗಳೂರಿನ ಮೀನುಗಾರಿಕಾ ಬಂದರ್ನ 3ನೆ ಹಂತದ ಕಾಮಗಾರಿ ಶೀಘ್ರ ಪುನರಾರಂಭಗೊಳ್ಳಲಿದೆ. ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರದ 32 ಕೋ.ರೂ. ಬರಲು ಬಾಕಿ ಇದೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಸಮಾಲೋಚನೆ ಮಾಡಿದ್ದು, ಶೀಘ್ರ 10 ಕೋ.ರೂ. ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಮಧ್ವರಾಜ್ ಹೇಳಿದರು.
ಫುಟ್ಬಾಲ್ ಮೈದಾನ 1 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ :
ಮಂಗಳೂರಿನ ಫುಟ್ಬಾಲ್ ಮೈದಾನವನ್ನು 1 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಕ್ರಮ ಜರಗಿಸಲಾಗಿದ್ದು, ಈಗಾಗಲೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಎಮ್ಮೆಕೆರೆಯಲ್ಲಿ ಈಜುಕೊಳ ನಿರ್ಮಾಣಕ್ಕೆ 4.99 ಕೋ.ರೂ. ಅಂದಾಜು ವೆಚ್ಚ ತಯಾರಿಸಲಾಗಿತ್ತು. ಈಗ ಅಂದಾಜು ವೆಚ್ಚ 12.50 ಕೋ.ರೂ. ಆಗಿದೆ. ಒಲಿಂಪಿಕ್ ಮಟ್ಟದ ಈಜುಕೊಳ ನಿರ್ಮಾಣಕ್ಕೆ 2.50 ಕೋ.ರೂ. ಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.ಹೀಗಿರುವಾಗ ಎಮ್ಮೆಕೆರೆ ಈಜುಕೊಳ ನಿರ್ಮಾಣಕ್ಕೆ 12.50 ಕೋ.ರೂ. ದುಬಾರಿಯಾಗಲಿದೆ. ದುಂದುವೆಚ್ಚ ತಡೆಯಲು ಮತ್ತು ಗುಣಮಟ್ಟ ಹೆಚ್ಚಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೆ, ಈ ಅಂದಾಜು ವೆಚ್ಚವನ್ನು ಪುನ: ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದು ಮಧ್ವರಾಜ್ ತಿಳಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಎಫ್ಡಿಸಿ ಅಧ್ಯಕ್ಷ ರಾಜೇಶ್ ನಾಯಕ್ ಉಪಸ್ಥಿತರಿದ್ದರು. ಪತ್ರಕರ್ತರಾದ ಪುಷ್ಪರಾಜ್ ಬಿ.ಎನ್. ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.
Comments are closed.