ಮಂಗಳೂರು : ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ 51ನೇ ಅಳಪೆ ಉತ್ತರ ವಾರ್ಡ್ ಕಾಂಗ್ರೆಸ್ ವತಿಯಿಂದ ಹಾಗೂ ಜೀವನ್ ಧಾರಾ ಸಮಾಜ ಸೇವಾ ಪ್ರತಿಷ್ಠಾನ, ಕುಲಶೇಖರ, ಕೆ.ಎಂ.ಸಿ., ಎ.ಜೆ. ಆಸ್ಪತ್ರೆ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಕೇಂದ್ರದ ಸಹಕಾರಗಳೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಬಾನುವಾರ ನಗರದ ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಶ್ರೀ ಜೆ.ಆರ್. ಲೋಬೊರವರು, ಈ ಶಿಬಿರದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ, ವಿದ್ಯಾರ್ಥಿಗಳಿಗೆ ಉಚಿತವಾಗಿ ತಮ್ಮ ಆರೋಗ್ಯ ತಪಾಸಣಾ ಮಾಡಲು ಸಹಕಾರಿಯಾಗುತ್ತದೆ. ಅದಲ್ಲದೇ ಗ್ರಾಮೀಣ ಭಾಗದ ಜನರು ಸರಿಯಾಗಿ ತಮ್ಮ ಆರೋಗ್ಯದ ಕಡೆಗೆ ಲಕ್ಷ್ಯ ಕೊಡುತ್ತಿಲ್ಲ. ಇದರಿಂದ ಭವಿಷ್ಯತ್ನಲ್ಲಿ ಅವರಿಗೆ ತೊಂದರೆಯನ್ನು ತಪ್ಪಿಸಲು ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಲಿದೆ.
ಸಮಾಜದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯದ ಭಾಗ್ಯ ಲಭಿಸಲಿ. ಬಡ ಜನರಿಗೆ ಸಹಾಯ ಮಾಡಿದರೆ ದೇವರಿಗೆ ಪ್ರಿಯವೆನಿಸಲಿದೆ. ಅದಲ್ಲದೇ ದೇಶದ ಮಾಜೀ ಪ್ರಧಾನಿ ದಿ| ಇಂದಿರಾಗಾಂಧಿಯವರ 100ನೇ ಜನ್ಮದಿನಾಚರಣೆಯ ವರ್ಷದಲ್ಲಿ ಬಡವರಿಗೆ ಇಂತಹ ಕಾರ್ಯಕ್ರಮಗಳು ನಡೆಯಲೇಬೇಕು. ಯಾಕೆಂದರೆ ಇಂದಿರಾಗಾಂಧಿಯವರು ಬಡವರ ಪಾಲಿಗೆ ದೇವತೆಯಾಗಿದ್ದರು. ಉಳುವವನಿಗೆ ಭೂಮಿಯನ್ನು ನೀಡುವ ಕಾಯಿದೆಯನ್ನು ಪ್ರಾರಂಭಿಸಿ ದೇಶದಲ್ಲಿ ಕೋಟ್ಯಾಂತರ ಜನರಿಗೆ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಟ್ಟರು ಎಂದು ಹೇಳಿದರು.
ಕುಲಶೇಖರದಿಂದ ಸರಿಪಳ್ಳ, ಕೋಡಕಲ್ ಮುಖಾಂತರ ಕನ್ನಗುಡ್ಡವರೆಗೆ ಹೋಗುವ ರಸ್ತೆ ತೀವ್ರ ಹದೆಗಟ್ಟಿದರಿಂದ ಅಲ್ಲಿನ ಸಾರ್ವಜನಿಕರು ತೀವ್ರ ತೊಂದರೆಗೆ ಅನುಭವಿಸಿದ್ದರು. ಅವರು ಅನೇಕ ಬಾರಿ ನನಗೆ ಆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮನವಿ ಕೂಡ ನೀಡಿದ್ದರು. ನಾನು ಆ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿ, ಅದರ ಹಿಂದೆ ನಡೆಸಿರುವ ಸತತ ಪ್ರಯತ್ನದಿಂದ ಇಂದು ಆ ರಸ್ತೆಗೆ ಕೇಂದ್ರ ರಸ್ತೆ ನಿಧಿಯೋಜನೆಯನ್ವಯ (ಸಿ.ಆರ್.ಎಫ್.) ನಗರದಲ್ಲಿ ಮೊತ್ತ ಮೊದಲ ಬಾರಿಗೆ ರೂ. 5 ಕೋಟಿ ಮಂಜೂರು ಮಾಡಿಸಿದ್ದೇನೆ.
ಅದಲ್ಲದೇ ನೇತ್ರಾವತಿ ನದಿ ಸೇತುವೆ ಬಳಿ ನದಿ ತಟದ ಬದಿಯಿಂದ ಕಣ್ಣೂರು ಮಸೀದಿಯವರೆಗೆ ನೂತನ ರಸ್ತೆ ಅಭಿವೃದ್ಧಿಗೆ ರೂ. 3 ಕೋಟಿ ಮಂಜೂರಾಗಿದೆ. ಈ ರಸ್ತೆ ನಿರ್ಮಾಣವಾದರೆ ರಾಷ್ಟ್ರೀಯ ಹೆದ್ದಾರಿ ಪಂಪ್ವೆಲ್ಗೆ ಹೋಗುವ ರಸ್ತೆಯಲ್ಲಿ ಹೋಗುವ ವಾಹನಗಳು ಈ ರಸ್ತೆಯ ಮೂಲಕ ಹೋದಾಗ ವಾಹನಗಳ ದಟ್ಟನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಂಭವವಿದೆ. ಹೀಗೆ ಹಂತಹಂತವಾಗಿ ರಸ್ತೆ ಅಭಿವೃದ್ಧಿಗೆ ಪ್ರಯತ್ನ ಮಾಡಿ ಜನತೆಗೆ ಬಹಳಷ್ಟು ಅನುಕೂಲಕರವನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಉಚಿತ ಪ್ರಾಥಮಿಕ ಚಿಕಿತ್ಸಾ ಕಿಟ್ಗಳನ್ನು ಶಾಸಕರು ವಿತರಿಸಿದರು.
ಅಳಪೆ ವಾರ್ಡಿನ ಕಾರ್ಪೋರೇಟರ್ ಪ್ರಕಾಶ್ ಬಿ., ಸಂತ ಕ್ರೂಸ್ನ ಸುಪೀರಿಯರ್ ಸಿಸ್ಟರ್ ಅಣ್ಣಾ ಮಲೈ, ಸೇಕ್ರೆಡ್ ಹಾರ್ಟ್ಸ್ ಶಾಲೆ ಸಿಸ್ಟರ್ ಜೆಸಿಲಿನಾ, ಎ.ಜೆ. ಆಸ್ಪತ್ರೆಯ ಡಾ| ಅಂಜನಾ, ಜಿಲ್ಲಾಆರೋಗ್ಯ ಕೇಂದ್ರದ ಡಾ| ಪ್ರವೀಣ್, ಪಾಲಿಕೆಯ ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ, ಕಾಂಗ್ರೆಸ್ ಆರೋಗ್ಯ ಸಮಿತಿ ಮುಖ್ಯಸ್ಥ ಪ್ರಭಾಕರ ಶ್ರೀಯಾನ್, ಅಳಪೆ ವಾರ್ಡಿನ ಅಧ್ಯಕ್ಷ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯ ಡೆನ್ನಿಸ್ ಡಿ’ಸಿಲ್ವ, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್, ಮೂಡಾ ಸದಸೆ ಶೋಭಾ ಕೇಶವ ಮೊದಲಾದವರು ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು.
Comments are closed.