ಮಂಗಳೂರು, ನ.13 : ಆರ್ಎಸ್ಎಸ್ ಕಾರ್ಯಕರ್ತ ರಾಮಮೋಹನ್ ಕೊಲೆಯತ್ನ ಪ್ರಕರಣದ ಆರೋಪಿಗಳನ್ನು ಬಂಧಿಸಲು ಆದಿತ್ಯವಾರ ಸಂಜೆಯವರೆಗೆ ಗಡು ನೀಡಿದ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರು ಒಂದೊಮ್ಮೆ ಬಂಧನ ಪ್ರಕ್ರಿಯೆ ನಡೆಯದೇ ಇದ್ದಲ್ಲಿ ಸೋಮವಾರ ಜಿಲ್ಲೆ ಬಂದ್ ನಡೆಸುವುದಾಗಿ ಹೇಳಿವೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಮ್ಮೋಹನ್ ಅವರ ಆರೋಗ್ಯ ವಿಚಾರಿಸಿದ್ದು, ಆರೋಪಿಗಳನ್ನು ಬಂಧಿಸದಿದ್ದರೆ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ಗೆ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ. ಉಳ್ಳಾಲ ಠಾಣೆಗೆ ಬಿಜೆಪಿ ಮುಖಂಡರು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಉಳ್ಳಾಲ, ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ, ಕೊಲೆಯತ್ನ ಹಾಗೂ ಚೂರಿ ಇರಿತ ಪ್ರಕರಣಗಳ ಆರೋಪಿಗಳ ಪತ್ತೆ ಈವರೆಗೂ ಆಗಿಲ್ಲ. ಹಿಂದು ಸಮುದಾಯದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ , ಪೊಲೀಸರು ಮಾತ್ರ ಆರೋಪಿಗಳ ಬಂಧನ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಇಲ್ಲಿ ನಡೆಯುವ ಕೃತ್ಯಗಳು ಭಯೋತ್ಪಾದಕರ ಚಟುವಟಿಕೆಗಳಂತೆ ಕಾಣುತ್ತಿವೆ. ಇಲ್ಲವಾದಲ್ಲಿ ದುಷ್ಕರ್ಮಿಗಳಿಗೆ ಭಯೋತ್ಪಾಧಕ ನಂಟು ಇರುವುದು ಖಂಡಿತ. ಮುಂದಿನ ದಿನಗಳಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿದಲ್ಲಿ ಸುಮ್ಮನೆ ನಿಲ್ಲುವುದಿಲ್ಲ. ಅಶ್ರುವಾಯು, ಲಾಠಿಚಾರ್ಜ್ ಉಪಯೋಗಿಸುವ ಸಮಯ ಬರಹುದು. ಆದ್ದರಿಂದ ತಪ್ಪಿತಸ್ಥರ ಬಂಧನ ನಡೆಸಿದಲ್ಲಿ ಒಳಿತು ಎಂದು ಎಚ್ಚರಿಸಿದರು.
ಆರೋಪಿಗಳ ಪತ್ತೆಗೆ ಎಲ್ಲಾ ರೀತಿಯ ಸಹಕಾರ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ನೀಡಲು ಸಿದ್ಧರಿದ್ದೇವೆ. ರಾಜಕೀಯ ಒತ್ತಡಗಳಿದ್ದರೂ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಿ ನ್ಯಾಯ ಒದಗಿಸಿ. ಮುಖಂಡರಾದ ನಮ್ಮನ್ನು ಕೇಳುವವರಿದ್ದಾರೆ. ತುರ್ತಾಗಿ ಕ್ರಮಕೈಗೊಳ್ಳಿ ಎಂದು ಬಿಜೆಪಿ ಕ್ಷೇತ್ರದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಸತೀಶ್ ಕುಂಪಲ, ಚಂದ್ರಹಾಸ್ ಉಳ್ಳಾಲ್, ಜಿತೇಂದ್ರ ಕೊಟ್ಟಾರಿ, ಎಸಿಪಿ ಶೃತಿ, ಉಳ್ಳಾಲ ಹಾಗೂ ಕೊಣಾಜೆ ಠಾಣಾಧಿಕಾರಿಗಳಾದ ಗೋಪಿಕೃಷ್ಣ, ಅಶೋಕ್ ಉಪಸ್ಥಿತರಿದ್ದರು.
ರಾಮ್ಮೋಹನ್ ಅವರು ಕಾಸ್ಮೆಟಿಕ್ ಲೈನ್ಸೇಲ್ ವ್ಯವಹಾರ ಮಾಡುತ್ತಿದ್ದು, ಗುರುವಾರ ಸಂಜೆ ಕೆಲಸ ಮುಗಿಸಿ ಬೈಕ್ನಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿತ್ತು. ಮನೆಗೆ ಒಂದು ಕಿ.ಮೀ. ದೂರ ಇರುವಷ್ಟರಲ್ಲಿ ದುಷ್ಕರ್ಮಿಗಳು ತಲವಾರು ಬೀಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆದ ಪ್ರದೇಶವು ಇಳಿಜಾರು ರಸ್ತೆ ಆಗಿದ್ದು, ರಾಮ್ಮೋಹನ್ ನಿಧಾನವಾಗಿ ಹೋಗುತ್ತಿದ್ದುದರಿಂದ ಏಟು ಬಿದ್ದ ಕೂಡಲೇ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದರು. ಕೂಡಲೇ ಅವರು ರಕ್ಷಣೆಗಾಗಿ ಬೊಬ್ಬೆ ಹಾಕಿದ್ದರಿಂದ ಹತ್ತಿರದ ಮನೆಯ ವ್ಯಕ್ತಿ ಸ್ಥಳಕ್ಕೆ ಆಗಮಿಸಿ ತಕ್ಷಣವೇ ಅಸ್ಪತ್ರೆಗೆ ದಾಖಲಿಸಿದ್ದರು.
ಬೈಕ್ನಲ್ಲಿ ಒಟ್ಟು ಮೂರು ಮಂದಿ ಇದ್ದು ಇಬ್ಬರ ಕೈಯಲ್ಲಿ ತಲವಾರು ಇದ್ದು, ಇಬ್ಬರೂ ಬೀಸಿದ್ದರು ಎನ್ನಲಾಗಿದೆ. ಬೈಕ್ ಅಲ್ಲಿ ನಿಲ್ಲದೆ ಆಂಬ್ಲಮೊಗರು ಕಡೆಗೆ ಸಾಗಿದ್ದನ್ನು ಸ್ಥಳೀಯರು ಗಮನಿಸಿದ್ದರು. ರಾಮ್ಮೋಹನ್ ಅವರು ನಿತ್ಯ ರಾತ್ರಿ ಬರುವ ಸಮಯ ಕಾಯುತ್ತಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಲಾಗಿದೆ, ಅವರನ್ನು ಹಿಂಬಾಲಿಸಿಕೊಂಡು ಬಂದಿರುವ ಸಾಧ್ಯತೆಯೇ ಹೆಚ್ಚು ಎಂದು ಹಿಂದೂ ಸಂಘಟನೆಗಳ ನಾಯಕರು ದೂರಿದ್ದಾರೆ.
Comments are closed.