ಮಂಗಳೂರು, ನ.11: ಕಾಲೇಜು ಆವರಣದಲ್ಲಿರುವ ಕುಡಿಯುವ ನೀರಿನ ಬಾವಿಯನ್ನು ಶುದ್ಧೀಕರಿಸಲು ಆಗ್ರಹಿಸಿ ನಗರದ ಕೆನರಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಇಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕೆನರಾ ಕಾಲೇಜು ಆವರಣದಲ್ಲಿರುವ ಬಾವಿಯ ನೀರಿನಲ್ಲಿ ಕಸಕಡ್ಡಿಗಳು ತುಂಬಿಹೋಗಿದ್ದು ಬಾವಿಯ ನೀರು ಮಲಿನಗೊಂಡಿದೆ. ಜೊತೆಗೆ ಇತ್ತೀಚೆಗೆ ಬೆಕ್ಕೊಂದು ಬಾವಿಗೆ ಬಿದ್ದು ಮೃತಪಟ್ಟಿದ್ದು, ಬಾವಿ ನೀರು ಕೆಟ್ಟ ವಾಸನೆ ಬರುತ್ತಿದೆ ಎಂದು ಆರೋಪಿಸಿ ಬಾವಿಯನ್ನು ಶುದ್ಧೀಕರಿಸಬೇಕೆಂದು ಆಗ್ರಹಿಸಿ ಕೆನರಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದರು.
ಬಾವಿಯ ನೀರು ಮಲಿನಗೊಂಡಿರುವುದು ಮತ್ತು ಕುಡಿಯಲು ಯೋಗ್ಯವಲ್ಲ ಎನ್ನುವುದು ನೀರಿನ ಪ್ರಯೋಗಾಲಯ ಪರೀಕ್ಷೆಯಿಂದಲೂ ದೃಢಪಟ್ಟಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪ್ರಾಂಶುಪಲರಿಂದ ಸ್ಪಷ್ಟಣೆ :
ಕಾಲೇಜಿನ ಅವಶ್ಯಕತೆಗಳಿಗೆ ಈ ಬಾವಿಯ ನೀರನ್ನು ಬಳಸಲಾಗುತ್ತಿಲ್ಲ. ಬಾವಿಯ ನೀರಿನಲ್ಲಿ ಕಸಕಡ್ಡಿಗಳು ತುಂಬಿಹೋಗಿರುವುದರಿಂದ ಕಳೆದ ಕೆಲ ದಿನಗಳಿಂದ ಬಾವಿಯ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಮಗಾರಿ ಸಂದರ್ಭ ಬೆಕ್ಕೊಂದು ಬಾವಿಗೆ ಬಿದ್ದು ಮೃತಪಟ್ಟಿದ್ದು, ಈ ವಿಷಯ ಇಂದು ನನ್ನ ಗಮನಕ್ಕೆ ಬಂದಿದೆ. ಇದೀಗ ಬಾವಿಯನ್ನು ಶುದ್ಧೀಕರಿಸುವ ಕೆಲಸ ನಡೆಯುತ್ತಿದೆ.
ಆದರೆ ಕಾಲೇಜಿನ ಕೆಲ ವಿದ್ಯಾರ್ಥಿಗಳು ಕಾಲೇಜಿನ ಅವಶ್ಯಕತೆಗಳಿಗೆ ಇದೇ ಬಾವಿಯ ನೀರನ್ನು ಬಳಸಲಾಗುತ್ತಿದೆ ಎಂದು ಭಾವಿಸಿ ತರಗತಿ ಬಹಿಷ್ಕರಿಸಿದ್ದಾರೆ.ಕಾಲೇಜಿನ ಬಳಕೆಗೆ ನಾವು ಈ ಬಾವಿಯ ನೀರನ್ನು ಬಳಸುತ್ತಿರಲಿಲ್ಲ ಎಂದು ಕೆನರಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರಭಾ ಕಾಮತ್ ಸ್ಪಷ್ಟನೆ ನೀಡಿದ್ದಾರೆ.
Comments are closed.