ಮಂಗಳೂರು, ನ.10: 500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟುಗಳ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಜನರು ಬ್ಯಾಂಕ್ ಶಾಖೆಗಳ ಮುಂದೆ ಗುರುತಿನ ಚೀಟಿ ಹಿಡಿದು ಉದ್ದದ ಸರತಿ ಸಾಲಿನಲ್ಲಿ ನಿಂತುಕೊಂಡಿರುವ ದೃಶ್ಯ ನಗರದೆಲ್ಲೆಡೆ ಕಂಡುಬಂದಿದೆ.
500 ಹಾಗೂ 1000 ರೂ. ಮುಖಬೆಲೆ ನೋಟುಗಳನ್ನು ಅಮಾನ್ಯ ಮಾಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ
ಮಂಗಳವಾರ ರಾತ್ರಿ ಘೋಷಿಸಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಬಳಿಯಿರುವ ಹಳೆಯ 500 ಹಾಗೂ 1000 ರೂ. ನೋಟುಗಳ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಗಳ ಮುಂದೆ ಜಮಾಯಿಸಿದ್ದಾರೆ.
ಆದರೆ ನಗರದ ಹಲವು ಬ್ಯಾಂಕ್ ಶಾಖೆಗಳಿಗೆ ಇನ್ನೂ ಕೂಡಾ ಹೊಸ ಕರೆನ್ಸಿ ನೋಟ್ ಗಳು ಬಾರದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ಆಗಮಿಸಿರುವ ಜನರು ಪರದಾಡುತ್ತಿದ್ದಾರೆ .ಪ್ರತಿದಿನ ಗರಿಷ್ಠ 4000 ರೂ.ವರೆಗೆ ನೋಟು ವಿನಿಮಯ ಮಾಡಿಕೊಳ್ಳಬಹುದು. ಇಂದು 500 ಹಾಗೂ 2000 ರೂ. ಮುಖಬೆಲೆಯ ಹೊಸ ನೋಟುಗಳು ಜಾರಿಗೆ ಬರಲಿವೆ. ಜನದಟ್ಟಣೆಯನ್ನು ನಿಭಾಯಿಸಲು ಶನಿವಾರ ಹಾಗೂ ರವಿವಾರ ಕೂಡ ಬ್ಯಾಂಕ್ಗಳನ್ನು ತೆರೆದಿಡುವಂತೆ ಸರಕಾರ ಆದೇಶ ನೀಡಿದೆ.
ಹೊಸ ನೋಟ್ ಗಳನ್ನು ಪಡೆಯಲು ಬೆಳಗ್ಗೆಯಿಂದಲೇ ಜನರು ಬ್ಯಾಂಕ್ ಗಳು ಮತ್ತು ಅಂಚೆಕಚೇರಿಗಳ ಮುಂದೆ ಜನರು ಜಮಾಯಿಸಿದ್ದಾರೆ. ಆದರೆ ಬ್ಯಾಂಕ್ ಗಳಿಗೆ ಹೊಸ ಕರೆನ್ಸಿ ಇನ್ನೂ ತಲುಪದ ಕಾರಣ ಸಮಸ್ಯೆ ಎದುರಾಗಿದೆ. ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.ಬ್ಯಾಂಕ್ ಗಳ ಸಿಬ್ಬಂದಿ ಹೊಸ ನೋಟ್ ವಿತರಣೆಗೆ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ನೋಟ್ ಗಳು ಬಂದ ಕೂಡಲೇ ವಿತರಣೆ ಆರಂಭಿಸಲಾಗುವುದು ಎಂದು ಬ್ಯಾಂಕ್ ನ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಬುಧವಾರ ‘ಚಿಲ್ಲರೆ’ ಸಮಸ್ಯೆಗೆ ತುತ್ತಾಗಿದ್ದ ಜನಸಾಮಾನ್ಯರು, ಗುರುವಾರ ತಮ್ಮಲ್ಲಿರುವ 500 ಮತ್ತು 1,000 ರೂ.ವನ್ನು ವಿನಿಮಯ ಮಾಡಲು ಗುರುತಿನ ಚೀಟಿಯೊಂದಿಗೆ ಬ್ಯಾಂಕ್ ಗಳ ಶಾಖೆಗಳಿಗೆ ಲಗ್ಗೆಯಿಟ್ಟರೂ ಕೂಡ ಮಧ್ಯಾಹ್ನವಾಗುತ್ತಲೇ ಬ್ಯಾಂಕ್ ಗಳಲ್ಲಿ ಹಣ ಖಾಲಿಯಾದ್ದರಿಂದ ಬರಿಗೈಯಲ್ಲಿ ಮರಳಿದ ಘಟನೆ ಕೂಡ ಹಲವು ಕಡೆಗಳಲ್ಲಿ ನಡೆದಿದೆ.
Comments are closed.