ಮಂಗಳೂರು,ನ.6: ಪುತ್ತೂರು ಪಾದೆ ಕರಿಯದ ಮನೆಯೊಂದರ ದರೋಡೆ ಪ್ರಕರಣದಲ್ಲಿ ಭಾಗಿಯಾದ 10 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪುತ್ತೂರಿನ ಪಾದೆ ಕರಿಯ ಎಂಬಲ್ಲಿ ಅ.25ರಂದು ವಿಷ್ಣು ಭಟ್ ಎಂಬವರ ಮನಗೆ ನುಗ್ಗಿ ಅವರ ಪತ್ನಿ ಹಾಗೂ ಕೆಲಸದಾಳುವನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ಪ್ರಕರಣದ 12 ಆರೊಪಿಗಳ ಪೈಕಿ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ಅವರಿಂದ ದರೋಡೆಗೆ ಉಪಯೋಗಿಸಿದ ಕ್ಸೈಲೊ ಕಾರು, ಆಲ್ಟೋಕಾರು, 50ಸಾವಿರ ರೂ. ವೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಸಹಿತ ಒಟ್ಟು 11ಲಕ್ಷ ರೂ. ವೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿಗಳಾದ ಕೃಷ್ಣ ಶೆಟ್ಟಿ, ರೂಪೇಶ್, ಭರತ್, ಮಿಲ್ಟನ್ ಆಲ್ವಿನ್ ಪಿಂಟೋ, ರಾಖಿ, ರತನ್, ಸುರೇಶ್ ಆಚಾರ್ಯ, ಪ್ರವಿಣ್ ಕುಮಾರ್, ಶಬರಿ ಕುಮಾರ ನಾಯ್ಕ ಅಲಿಯಾಸ್ ವಿಜಯ ಕುಮಾರ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಪಾಂಡು ಪೈ ಕೊಲೆ ಪ್ರಕರಣದ ಆರೋಪಿಗಳ ಕೃತ್ಯ:
ಮಂಗಳೂರು ಸುರತ್ಕಲ್ನ ಪಾಂಡು ಪೈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯಶೋಧರ ಶೆಟ್ಟಿ ತಂಡ ದರೋಡೆಯ ಸಂಚನ್ನು ರೂಪಿಸಿತ್ತು. ಯಶೋಧರ ಶೆಟ್ಟಿ ಹಾಗೂ ನಾಗೇಶ್ ಆಲಿಯಾಸ್ ಕುಟ್ಟಿ ತಲೆ ಮರೆಸಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
‘ಅಮೂಲ್ಯ ನಿಧಿ'(ಕೊಪ್ಪರಿಗೆ)ಯಿದೆ ಎಂಬ ವದಂತಿಯಿಂದ ನಡೆದ ದರೋಡೆ
ವಿಷ್ಣು ಭಟ್ರ ಮನೆಯಲ್ಲಿ ಅಮೂಲ್ಯವಾದ ನಿಧಿ ಇದೆ ಎಂಬ ವದಂತಿ ಪಾದೆಕರಿಯ ಪರಿಸರದಲ್ಲಿ ವ್ಯಾಪಕವಾಗಿ ಹರಡಿದ್ದ ಕಾರಣ ನಿಧಿಯ ಆಸೆಯಿಂದ ಈ ದರೋಡೆ ಕೃತ್ಯ ನಡೆದಿದೆ. ಆದರೆ ಆರೋಪಿಗಳಿಗೆ ಇಲ್ಲಿ ಹಳೆಯ ವಿಗ್ರಹಗಳು ಅಭರಣಗಳು ದೊರೆತಿವೆ. ಹೊರತು ನಿಧಿ ದೊರೆಯಲಿಲ್ಲ ಎಂದು ಗುಲಾಬ್ ರಾವ್ ಬೊರಸೆ ತಿಳಿಸಿದ್ದಾರೆ.
ಹೆಚ್ಚಿನ ಆರೋಪಿಗಳು ಸುರತ್ಕಲ್ನವರು. ರತನ್ ಮಿಲ್ಟನ್ ಮತ್ತು ನಾಗೇಶ್ ತಲಾ ಮೂರು ಪ್ರಕರಣಗಳಲ್ಲಿ ಈ ಹಿಂದೆ ಆರೋಪಿಗಳಾಗಿ ಗುರುತಿಸಲ್ಪಟ್ಟದ್ದರು. ಯಶೋಧರ ಶೆಟ್ಟಿ ರೌಡಿ ಶೀಟರ್ ಆಗಿದ್ದ ಸುರೇಶ್ ಆಚಾರ್ಯ ಈ ಗುಂಪಿನ ಚಟುವಟಿಕೆಯಲ್ಲಿ ಸಹಕರಿಸುತ್ತಿದ್ದ ಪುತ್ತೂರು ತಾಲೂಕಿನ ಪರಾಬೆ ಮಣ್ಣಪಲಿಕೆ ನಿವಾಸಿ, ಶಬರಿ ಪುತ್ತೂರಿನ ನಿವಾಸಿ ಪ್ರವೀಣ್ ಸುಳ್ಯದ ಐವರ್ನಾಡುವಿನ ನಿವಾಸಿಯಾಗಿದ್ದಾನೆ. ಉಳಿದವರು ಮಂಗಳೂರು ನಗರದ (ಸುರತ್ಕಲ್)ವ್ಯಾಪ್ತಿಯವರಾಗಿರುತ್ತಾರೆ ಎಂದು ಗುಲಾಬ್ ರಾವ್ ಬೊರಸೆ ತಿಳಿಸಿದ್ದಾರೆ.
ಪುತ್ತೂರು ಎಎಸ್ಪಿ ರಿಷ್ಯಂತ್, ಡಿಸಿಐಬಿ ಇನ್ಸ್ಫೆಕ್ಟರ್ ಅಮಾನುಲ್ಲಾ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ಪೊಲೀಸ್ ನಿರೀಕ್ಷಕ ಚೆಲುವರಾಜ್, ಸುರತ್ಕಲ್ ಪೊಲೀಸ್ ಠಾಣೆ ಪಿಎಸ್ಸೈ ಅಬ್ದುಲ್ ಖಾದರ್, ಡಿಸಿಐಬಿ ಸಿಬ್ಬಂದಿಯಾದ ಸಂಜೀವ ಪುರುಷ, ಪಳನಿವೇಲು, ಇಕ್ಭಾಲ್, ಲಕ್ಷ್ಮಣ, ಉದಯ ರೈ, ತಾರಾನಾಥ, ಸತೀಶ್, ಸಂಪತ್ ಕುಮಾರ್, ವಿಜಯ ಗೌಡ, ವಾಸು ನಾಯ್ಕ, ಸಿಸಿಬಿ ಘಟಕದ ಸಿಬ್ಬಂದಿ ಚಂದ್ರಶೇಖರ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ 2ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವೇದಮೂರ್ತಿಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.