ಕುಂದಾಪುರ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ ಸೇವೆಯು ಇಂದು ಬೆಳಗಿನ ಜಾವ 5.30 ಕ್ಕೆ ಜರಗಿತು.
ಪ್ರಾತ:ಕಾಲ 3.30ರಿಂದ ಸುಪ್ರಭಾತ, ಭಜನೆ, 5ಕ್ಕೆ ದೀಪಾಲಂಕಾರ, 5.45ರಿಂದ ಜಾಗರ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವಿಧಾನಗಳೊಂದಿಗೆ ಜರಗಿದವು.
ದೇವಳದ ಒಳ ಹಾಗೂ ಹೊರ ಪ್ರಾಂಗಣವನ್ನು ಹಣತೆ ದೀಪಗಳಿಂದ ಬೆಳಗಲಾಗಿತ್ತು. ದೇವಳದ ವಿವಿಧೆಡೆಯಲ್ಲಿ ಹಾಕಲಾಗಿದ್ದ ರಂಗೋಲಿಗಳು ಭಕ್ತರ ಕಣ್ಮನ ಸೆಳೆದವು. ಸಹಸ್ರಾರು ಭಕ್ತರು ಶ್ರೀದೇವರ ವಿಶ್ವರೂಪ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್, ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಎಸ್.ಪಾಂಡುರಂಗ ಆಚಾರ್ಯ, ಜಿ.ವೆಂಕಟೇಶ ನಾಯಕ್, ಸೇನಾಪುರ, ಗಂಗೊಳ್ಳಿ ಆಚಾರ್ಯ ಕುಟುಂಬಸ್ಥರು, ಊರಿನ ಹತ್ತು ಸಮಸ್ತರು, ಭಜಕರು ಉಪಸ್ಥಿತರಿದ್ದರು.
ಚಿತ್ರಗಳು : ಸುರಭಿ ಸ್ಟುಡಿಯೋ, ಗಂಗೊಳ್ಳಿ.