ಉಡುಪಿ: ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳವನ್ನು ನಡೆಸಲು ಅನುಮತಿ ನಿರಾಕರಿಸಿದ ಉಡುಪಿ ಜಿಲ್ಲಾಡಳಿತದ ಕ್ರಮಕ್ಕೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಕಂಬಳಕ್ಕೆ ಎದುರಾಗಿದ್ದ ವಿಘ್ನ ನಿವಾರಣೆಯಾದಂತಾಗಿದೆ.
ಜಿಲ್ಲಾ ಕಂಬಳ ಸಮಿತಿ ಕಂಬಳ ನಡೆಸಲು ಜಿಲ್ಲಾಡಳಿತ ಅನುಮತಿ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಗೌರವಾಧ್ಯಕ್ಷ ಮತ್ತು ಕರಾವಳಿಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ, ಉಪ್ಪಿನಂಗಡಿ ಕಂಬಳ ಸಮಿತಿಯ ಅಶೋಕ ಕುಮಾರ್ ರೈ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದರು. ನ್ಯಾ| ಮೂ| ಎ.ಎಸ್. ಬೋಪಣ್ಣ ಶುಕ್ರವಾರ ಜಿಲ್ಲಾಡಳಿತದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿದರು.
2016ರ ಮಾ. 2ರಂದು ಅಶೋಕ ಕುಮಾರ್ ರೈ ಉಚ್ಚ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿದಾಗ ನ್ಯಾಯಾಲಯ ಕಂಬಳ ನಡೆಸಲು ಷರತ್ತು ಬದ್ಧ ಅನುಮತಿ ನೀಡಿತ್ತು. ಉಡುಪಿ ಜಿಲ್ಲಾಡಳಿತ ಕಂಬಳ ಸಮಿತಿಯ ಕೋರಿಕೆಯನ್ನು ತಿರಸ್ಕರಿಸಿದೆ. ಜಿಲ್ಲಾಡಳಿತದ ಆದೇಶಕ್ಕೆ ತಡೆಯಾಜ್ಞೆ ಕೊಡಬೇಕೆಂದು ಸಮಿತಿಯ ಪರವಾಗಿ ನ್ಯಾಯವಾದಿಗಳು ವಾದಿಸಿದಾಗ ನ್ಯಾಯಾ ಧೀಶರು ತಡೆಯಾಜ್ಞೆ ನೀಡಿದರು.
Comments are closed.