ಮಂಗಳೂರು, ಅಕ್ಟೋಬರ್.28: ನಗರದ ಕಂಕನಾಡಿ ಸಮೀಪದ ವೆಲೆನ್ಸಿಯಾದಲ್ಲಿ ಗುರುವಾರ ಬೆಳಿಗ್ಗೆ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತ ದುರ್ದೈವಿ ಯುವಕನನ್ನು ಸೂಟರ್ಪೇಟೆ ನಿವಾಸಿ ರಿತೇಶ್ ಅಲೆಕ್ಸಾಂಡರ್ ಡಿಕೋಸ್ತಾ (30) ಎಂದು ಗುರುತಿಸಲಾಗಿದೆ.
ಮಂಗಳೂರಿನ ವೆಲೆನ್ಸಿಯಾ ಸಮೀಪದ ಸೂಟರ್ಪೇಟೆ ನಿವಾಸಿ ರಿತೇಶ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗಷ್ಟೆ ರಜೆಯಲ್ಲಿ ಊರಿಗೆ ವಾಪಸಾಗಿದ್ದರು. ಗುರುವಾರ ಬೆಳಿಗ್ಗೆ ತಾಯಿಯನ್ನು ವೆಲೆನ್ಸಿಯಾ ಬಸ್ ನಿಲ್ದಾಣಕ್ಕೆ ಬಿಟ್ಟು ಮನೆಗೆ ತೆರಳುತ್ತಿದ್ದಾಗ ರಿತೇಶ್ ಚಲಾಯಿಸುತ್ತಿದ್ದ ಬೈಕ್ಗೆ ಲಾರಿ ಢಿಕ್ಕಿಯಾಗಿದೆ.
ಅಪಘಾತದಿಂದ ತಲೆಗೆ ತೀವ್ರ ಏಟಾಗಿದ್ದು, ಗಂಭೀರ ಗಾಯಗೊಂಡ ರಿತೇಶ್ ಅವರನ್ನು ತಕ್ಷಣ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಿತೇಶ್ ಅವರು ರಾತ್ರಿ ಮೃತಪಟ್ಟಿದ್ದಾರೆ.
ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.