ಮಂಗಳೂರು, ಅ.22: ಎತ್ತಿನಹೊಳೆ ಯೋಜನೆಯ ಮೂಲಕ ನೇತ್ರಾವತಿ ನದಿಯನ್ನು ನಾಶಮಾಡಲು ಹೊರಟಿರುವ ರಾಜ್ಯ ಸರ್ಕಾರ ಕೋಲಾರ, ಬೆಂಗಳೂರು ಮುಂತಾದೆಡೆ ನೀರು ನೀಡುವುದಾಗಿ ಹೇಳುವ ಮೂಲಕ ಅಲ್ಲಿನ ಜನರಿಗೆ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಜಿಲ್ಲೆಯ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಾತಿನ ಮೋಡಿಗೆ ಮರುಳಾಗಿ ಜಿಲ್ಲೆಯನ್ನು ಮರುಭೂಮಿ ಮಾಡಲು ಹೊರಟಿದೆ. ಎತ್ತಿನಹೊಳೆ ಯೋಜನೆಯ ವೆಚ್ಚ 13 ಸಾವಿರ ಕೋಟಿಗಿಂತಲೂ ಅಧಿಕವಾಗಲಿದೆ. ಇದು ರಾಜ್ಯದ 6 ಕೋಟಿ ಜನರ ಹಣ. ಕೋಲಾರಕ್ಕೆ ನೀರು ಕೊಡಲು ಹಲವು ದಾರಿಯಿದೆ. ಆದರೆ ಅದನ್ನು ಬಿಟ್ಟು ಜಿಲ್ಲೆಯ ಉಪ ನದಿಯನ್ನು ನಾಶ ಮಾಡುತ್ತಿದ್ದಾರೆ ಎಂದು ದೂರಿದರು.
ನೇತ್ರಾವತಿಯಲ್ಲಿ 100 ಟಿಎಂಸಿ ನೀರಿದೆ ಎನ್ನುತ್ತಿದ್ದಾರೆ. ಆದರೆ ನೇತ್ರಾವತಿಯಲ್ಲಿ ಅಷ್ಟು ನೀರು ಎಲ್ಲಿದೆ? ಈ ಬಗ್ಗೆ ಕರಾವಳಿ ತಜ್ಞರ ಜೊತೆ ಸಮಾಲೋಚನೆಯನ್ನೇ ನಡೆಸಿಲ್ಲ. ಇದು ಘೋರ ಅಪರಾಧ ಎಂದು ಬೇಸರ ವ್ಯಕ್ತ ಪಡಿಸಿದ ಪೂಜಾರಿ ದಯವಿಟ್ಟು ನೇತ್ರಾವತಿ ನದಿಯನ್ನು ಕೊಲ್ಲಬೇಡಿ,ಜಿಲ್ಲೆಯ ಉಪನದಿ ನೇತ್ರಾವತಿಯನ್ನು ನಾಶ ಮಾಡಬೇಡಿ ಎಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೇತ್ರಾವತಿ ಹಿತರಕ್ಷಣಾ ವೇದಿಕೆಯ ಮುಖಂಡ, ಮಾಜಿ ಉಪ ಮೇಯರ್ ಪುರೊಷೋತ್ತಮ ಚಿತ್ರಾಪುರ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕಾಂಗ್ರೆಸ್ನ ಜಿಲ್ಲಾ ಯುವ ಘಟಕದ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೋ ಮುಂತಾದವರು ಉಪಸ್ಥಿತರಿದ್ದರು.
Comments are closed.