ಮಂಗಳೂರು, ಅಕ್ಟೋಬರ್, 18: ಬಿಜೆಪಿ ಕಾರ್ಯಕರ್ತ, ಆರ್.ಎಸ್.ಎಸ್ನ ಸ್ವಯಂ ಸೇವಕ ರುದ್ರೇಶ್ನ ಹತ್ಯೆ ಈ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಇನ್ನೊಂದು ಕೈಗನ್ನಡಿಯಾಗಿದೆ. ಈ ಬರ್ಬರ ಹತ್ಯೆಯನ್ನು ದ.ಕ ಜಿಲ್ಲಾ ಬಿಜೆಪಿ ಅತ್ಯಂತ ಕಟು ಶಬ್ದಗಳಿಂದ ಉಗ್ರವಾಗಿ ಖಂಡಿಸುತ್ತದೆ.
ರುದ್ರೇಶ್ ಕೊಲೆ ನಡೆದು 2 ದಿನಗಳಾದರೂ, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯಾವುದೇ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸದೆ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಈ ಕೊಲೆ ನಡೆಸಿದ ಅಪರಾಧಿಗಳನ್ನು ಕೂಡಲೇ ಬಂಧಿಸಿ, ಅಪರಾಧಿಗಳಿಗೆ ಕಾನೂನಿನ ಮುಖಾಂತರ ತಕ್ಕ ಶಿಕ್ಷೆಯನ್ನು ವಿಧಿಸಿ, ರುದ್ರೇಶ್ನನ್ನು ಕಳಕೊಂಡ ಅವರ ಕುಟುಂಬದವರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ದ.ಕ ಜಿಲ್ಲಾ ಬಿಜೆಪಿ ವತಿಯಿಂದ ತಾರೀಕು 19/10/2016೬ರ ಸಾಯಂಕಾಲ 3.30ಕ್ಕೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ದ.ಕ ಜಿಲ್ಲಾ ಬಿಜೆಪಿಯ ಜಿಲ್ಲಾ ವಕ್ತಾರ ಜಿತೇಂದ್ರ ಎಸ್.ಕೊಟ್ಟಾರಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜಧಾನಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಘಟಕದ ಕಾರ್ಯದರ್ಶಿ, ಸ್ಥಳೀಯ ಆರ್.ಎಸ್.ಎಸ್ನ ಸ್ವಯಂ ಸೇವಕ ರುದ್ರೇಶ್ ಅವರನ್ನು ಹಾಡುಹಗಲೇ ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆಗೈದಿರುವ ಈ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ ಮತ್ತು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿದೆ, ಎಂಬುದನ್ನು ತೋರಿಸುತ್ತದೆ.
ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ರವರು ಕೆಲವೇ ದಿನಗಳ ಹಿಂದೆ ಮಂಗಳೂರಿನಲ್ಲಿ ನೀಡಿದ ಪತ್ರಿಕಾ ಹೇಳಿಕೆಯ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಕಾನೂನು ವ್ಯವಸ್ಥೆ ಹದೆಗೆಟ್ಟಿರುವುದಲ್ಲ, ಹೊರತು ಇಡೀ ರಾಜ್ಯದಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಈ ದುರ್ಘಟನೆ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗ ಬಾರದು ಮತ್ತು ಜನರು ಶಾಂತಿ, ನೆಮ್ಮದಿಯಿಂದ ಬದುಕಲು ಯಾವುದೇ ಅಡ್ಡಿಯಾಗಬಾರದು. ಒಂದು ವೇಳೆ ರಾಜ್ಯದಲ್ಲಿ ಅಶಾಂತಿಯ ವಾತಾವರಣವಾದರೆ ನೇರ ರಾಜ್ಯ ಸರಕಾರವೇ ಹೊಣೆಯಾಗಬೇಕಾದೀತು. ಆದ್ದರಿಂದ ರಾಜ್ಯಸರಕಾರ ಮತ್ತು ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ಈ ಹೋರಾಟ ಉಗ್ರ ರೂಪವನ್ನು ತಳೆಯುತ್ತದೆ ಎಂದು ಈ ಪ್ರತಿಭಟನೆಯ ಮುಖಾಂತರ ದ.ಕ ಜಿಲ್ಲಾ ಬಿಜೆಪಿ ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತದೆ ಎಂದು ಅವರ ಪ್ರಕಟಣೆ ತಿಳಿಸಿದೆ.
Comments are closed.