ಮಂಗಳೂರು, ಅ.15: ಹತ್ತಾರು ಧರ್ಮಗಳಿರುವ ನಮ್ಮ ದೇಶದಲ್ಲಿ ಆಯಾ ಧರ್ಮಗಳು ತಮ್ಮದೇ ಆದ ನಿಯಮಗಳನ್ನು ಅನುಸರಿ ಸುತ್ತಿರುವ ಈ ಸಂದರ್ಭದಲ್ಲಿ ಹೊಸ ನಿಯಮದ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಈ ಮೂಲಕ ಅವರು ಸಮಾನ ನಾಗರಿಕ ಸಂಹಿತೆ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ, ಬೆಳೆಗಳ ಬೆಲೆಯಲ್ಲಿನ ಅಸಮಾನತೆ ಮೊದಲಾದ ಹಲವಾರು ರೀತಿಯ ಸಮಸ್ಯೆಗಳನ್ನು ದೇಶವು ಎದುರಿಸುತ್ತಿರುವಾಗ ಈ ಚರ್ಚೆ ಅನಗತ್ಯ. ನಮ್ಮ ಸಮಾಜದಲ್ಲಿ ಎಷ್ಟೋ ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ, ರೈತರ ಆತ್ಮಹತ್ಯೆ,, ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಪ್ರತಿಯೊಬ್ಬರಿಗೂ ಅವರದ್ದೇ ಆದ ಹಕ್ಕಿದೆ. ಅದು ಬಿಟ್ಟು ಯಾರ ಮೇಲು ಬಲವಂತವಾಗಿ ಒತ್ತಡ ಹೇರುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ನಿರ್ಣಾಯಕವಾಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವವೇಗೌಡ, ಪಕ್ಷ ನಿರ್ಣಾಯಕ ಶಕ್ತಿಯಾಗುವುದಿಲ್ಲ ಬದಲಾಗಿ 224 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಜನತಾ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದೇನೆ. ಅದರಲ್ಲಿ ಯಾವುದೇ ನಿರಾಶೆ ಇಲ್ಲ. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿದ ಬಳಿಕ, ದೇಶವ್ಯಾಪಿಯಾಗಿ ಸಂಘಟಿಸಲಾಗುವುದು ಎಂದವರು ಹೇಳಿದರು.
ಎತ್ತಿನಹೊಳೆ ಪ್ರಶ್ನೆಗೆ ಜಾಣ ಉತ್ತರ :
ಎತ್ತಿನಹೊಳೆ ಯೋಜನೆ ಕುರಿತಂತೆ ಪಕ್ಷದ ನಿಲುವಿನ ಕುರಿತ ಪ್ರಶ್ನೆಗೆ, ಅತ್ಯಂತ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ ದೇವೇಗೌಡರು. ಬಿಜೆಪಿಯವರು ಅದನ್ನು ಆರಂಭಿಸಿದರು. ಮುಂದೆ ಕಾಂಗ್ರೆಸ್ ನವರು ಅದನ್ನು ಮುಂದುವರಿಸಿದರು. ಯೋಜನೆಯಿಂದ 9 ಟಿಎಂಸಿಯೂ ನೀರು ಸಿಗುವುದಿಲ್ಲ ಎಂದು ತಜ್ಞರೇ ಹೇಳುತ್ತಾರೆ. ಆದರೆ ಚಿಕ್ಕಬಳ್ಳಾಪುರ, ಕೋಲಾರ ಜನರಿಗೆ ನೀರು ಬೇಕು. ಸರಕಾರ ಅದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಬಹಳ ಜಾಣತನದ ಉತ್ತರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶಾಸಕ ಮಧು ಬಂಗಾರಪ್ಪ, ರಾಷ್ಟ್ರೀಯ ಕಾರ್ಯದರ್ಶಿ ಜಾಫ್ರುಲ್ಲಾ ಖಾನ್, ಮುಖಂಡರಾದ ಜೀವಿಜಯ, ಅಮರನಾಥ ಶೆಟ್ಟಿ, ಸದಾಶಿವ ಉಳ್ಳಾಲ್, ವಿಟ್ಲ ಮೊಹಮ್ಮದ್ ಕುಂಜ್ಞಿ, ಅಕ್ಷಿತ್, ವಸಂತ ಪೂಜಾರಿ, ರಮೀಝಾ ಬಾನು, ಅಝೀಝ್ ಕುದ್ರೋಳಿ ಮೊದಲಾದವರು ಉಪಸ್ಥಿತರಿದ್ದರು.
Comments are closed.