
ಮಂಗಳೂರು, ಅ.13: ಮಂಗಳೂರಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ ಪೀಠ ಆರಂಭಿಸಬೇಕು. ಸ್ಮಾರ್ಟ್ ಸಿಟಿಯಾಗಿರುವ ಮಂಗಳೂರಿಗೆ ಸಂಚಾರಿ ಪೀಠ ಅನಿವಾರ್ಯ ಎಂದು ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಹೇಳಿದರು.
ನಗರದಲ್ಲಿಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವಕೀಲರ ಸಂಘಟನೆಗಳ ಪರವಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ಪ್ರದೇಶದ ಜನರು ಮತ್ತು ನೆರೆಯ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಕೈಗೆಟುಕದ ಮಾತಾಗಿದೆ. ಈ ಪ್ರದೇಶದ ಜನರು ತಾಲೂಕು ಮಟ್ಟದ ನ್ಯಾಯಾಲಯಗಳಿಂದ ಜಿಲ್ಲಾ ಮಟ್ಟಕ್ಕೆ ಬರುವುದೇ ದುಸ್ತರವಾಗಿದ್ದು, ಉಚ್ಚ ನ್ಯಾಯಾಲಯದ ಕದ ತಟ್ಟುವುದು ಕನಸಿನ ಮಾತು. ಇದರಿಂದ ನ್ಯಾಯ ಉಳ್ಳವರ ಪಾಲಾಗುವ ಸಾಧ್ಯತೆ ಹೆಚ್ಚು. ಇಲ್ಲೇ ಪೀಠ ಸ್ಥಾಪನೆಯಾದರೆ ಹೆಚ್ಚಿನ ಖರ್ಚು, ಸಮಯ, ಪ್ರಯಾಣದ ತ್ರಾಸ ಉಳಿಸಬಹುದು ಎಂದು ಹೇಳಿದರು.

ಸಂಚಾರಿ ಪೀಠ ಸ್ಥಾಪನೆಗಾಗಿ ಈಗಾಗಲೇ ದೇಶದ ಮುಖ್ಯ ನ್ಯಾಯಾಧೀಶರು, ರಾಜ್ಯ ಮುಖ್ಯ ನ್ಯಾಯಾಧೀಶರು, ಸಿಎಂ ಮತ್ತಿತರರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ ಪೀಠ ಆರಂಭಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಜತೆಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಚೆಂಗಪ್ಪ ಹೇಳಿದರು.

ಸರಕಾರ ಯುವ ವಕೀಲರಿಗೆ ನೀಡುವ ಪ್ರೋತ್ಸಾಹ ಧನವನ್ನು 24 ತಿಂಗಳಿಗೆ ಮಾತ್ರ ಮೀಸಲಿರಿಸದೆ, ಕನಿಷ್ಠ 36 ತಿಂಗಳಿಗೆ ವಿಸ್ತರಿಸಬೇಕು. ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ, ಅವಧಿ ಹೆಚ್ಚಿಸಬೇಕು ಮತ್ತು ಪ್ರೋತ್ಸಾಹ ಧನ ಕೊಡಲು ನಿಗದಿತ 40 ಸಾವಿರ ರೂ. ಆದಾಯ ಮಿತಿ ತೆಗೆದು ಹಾಕಬೇಕು ಎಂದು ಚೆಂಗಪ್ಪ ಅವರು ಈ ಸಂದರ್ಭ ಸರ್ಕಾರವನ್ನು ಆಗ್ರಹಿಸಿದರು.
ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಯಶೋದರ ಕರ್ಕೇರ, ಪ್ರಧಾನ ಕಾರ್ಯದರ್ಶಿ ರಾಘವೆಂದ್ರ ಎಚ್.ವಿ., ಕಾರ್ಯಕಾರಿ ಸಮಿತಿ ಸದಸ್ಯರಾದ ಸುಂದರ ಗೌಡ, ಶ್ರೀಧರ ಶೆಟ್ಟಿ ಪುಳಿಂಚ, ರವೀಂದ್ರ ಮನ್ನಿಪ್ಪಾಡಿ, ಮೂಡುಬಿದಿರೆ ವಕೀಲರ ಸಂಘದ ಬಾಹುಬಲಿ ಪ್ರಸಾದ್ ಹಾಗೂ ಉಡುಪಿ ಹಾಗೂ ಕೊಡಗು ಜಿಲ್ಲೆಯ ವಿವಿಧ ತಾಲೂಕು ವಕೀಲರ ಸಂಘಗಳ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯ ಉಪಸ್ಥಿತರಿದ್ದರು.
Comments are closed.