ಮಂಗಳೂರು, ಅ.12: ಬೊಳ್ಳಿ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದ ‘ಬರ್ಸ’ ತುಳು ಚಲನಚಿತ್ರ ಅಕ್ಟೋಬರ್ 13ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ನಾಳೆ ಬೆಳಿಗ್ಗೆ ಮಂಗಳೂರಿನ ಸುಚಿತ್ರ ಥಿಯೇಟರ್ನಲ್ಲಿ ಗಣ್ಯರ ಸಮ್ಮುಖದಲ್ಲಿ ಸಿನಿಮಾ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದ್ದಾರೆ.
ನಗರದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಕಾರ್ಕಳದಲ್ಲಿ ರಾಧಿಕಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್ನಲ್ಲಿ ನಟರಾಜ್, ಮಣಿಪಾಲದಲ್ಲಿ ಐನಾಕ್ಸ್ ಚಿತ್ರ ಮಂದಿರದಲ್ಲಿ ತೆರೆಕಾಣಲಿದೆ. ಎರಡನೇ ವಾರದಲ್ಲಿ ಉಡುಪಿ ಹಾಗೂ ಉಳಿದ ಚಿತ್ರ ಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ ಎಂದರು.
ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಲಭ್ಯವಾಗಿದ್ದು, ಕುಟುಂಬ ಸಮೇತರಾಗಿ ನೋಡಬಹುದಾದ ಉತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ಎಲ್ಲರ ಮನೆಮತಾಗಿರುವ ಯಾಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರದಲ್ಲಿ ಲವ್ ಸೆಂಟಿಮೆಂಟ್, ಫೈಟ್, ಕಾಮಿಡಿ ಎಲ್ಲವೂ ಇದೆ. ಕ್ಷಮಾ ಶೆಟ್ಟಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಉಳಿದಂತೆ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಲಕ್ಷ್ಮಣ್ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ, ಗೋಪಿನಾಥ್ ಭಟ್, ಚೇತನ್ ರೈ, ಸಂತೋಷ್ ಶೆಟ್ಟಿ, ಸತೀಶ್ ಬಂದಲೆ, ತಿಮ್ಮಪ್ಪ ಕುಲಾಲ್, ಉಮೇಶ್ ಮಿಜಾರ್, ಸುಂದರ ರೈ ಮಂದಾರ, ಸುರೇಶ್ ಕುಲಾಲ್ ಮೊದಲಾದವರು ನಟಿಸಿದ್ದಾರೆ. ಹಿನ್ನೆಲೆ ಸಂಗೀತ ಮಣಿಕಾಂತ್ ಕದ್ರಿ, ಛಾಯಾಗ್ರಹಣ ಪಿ.ಎಲ್.ರವಿ,ಸಾಹಸ : ಮಾಸ್ ಮಾದ, ಸಂಕಲನ ಸುಜಿತ್ ನಾಯಕ್, ಕಾರ್ಯಕಾರಿ ನಿರ್ಮಾಪಕ ಸಚಿನ್ ಎ.ಎಸ್. ಉಪ್ಪಿನಂಗಡಿ,ನಿರ್ಮಾಣ ನಿರ್ವಹಣೆ ರಾಜೇಶ್ ಕುಡ್ಲ, ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ, ನಂದೀತ, ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಪಕರು.
ಸಿನೆಮಾಕ್ಕಾಗಿ ಬಹುಭಾಷಾ ಗಾಯಕ ಕಾರ್ತಿಕ್, ದೇವದಾಸ್ ಕಾಪಿಕಾಡ್, ರೂಪಾ ಮಹಾದೇವನ್ ಜತೆ ನಟ ಅರ್ಜುನ್ ಕಾಪಿಕಾಡ್ ಕೂಡಾ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ಎಲ್ಲಾ ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ಚಿತ್ರದ ಹಾಡುಗಳಿಗೆ ಈಗಾಗಲೇ ಯು ಟ್ಯೂಬ್ ಮೂಲಕ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ದೇವದಾಸ್ ಕಾಪಿಕಾಡ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರುಗಳಾದ ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ, ನಾಯಕ ನಟ ಅರ್ಜುನ್ ಕಾಪಿಕಾಡ್, ನಾಯಕಿ ನಟಿ ಕ್ಷಮಾ ಶೆಟ್ಟಿ, ಚಿತ್ರದ ಕಾರ್ಯಕಾರಿ ನಿರ್ಮಾಪಕ ಸಚಿನ್ ಎ.ಎಸ್. ಉಪ್ಪಿನಂಗಡಿ ಉಪಸ್ಥಿತರಿದ್ದರು.
Comments are closed.