ಮಂಗಳೂರು: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ಕೇಂದ್ರೀಯ ಸಮಿತಿ ಮಿಲಾಗ್ರಿಸ್ ಕಟ್ಟಡದಲ್ಲಿ ಆರಂಭಿಸಿರುವ ಸಮುದಾಯ ಸಶಕ್ತೀಕರಣ ಸೇವಾ ಕೇಂದ್ರದ ಉದ್ಘಾಟನೆ ಮತ್ತು ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ನಡೆಯಿತು.
ಸಮುದಾಯ ಸೇವಾ ಕೇಂದ್ರ ಉದ್ಘಾಟಿಸಿ ಆಶೀರ್ವಚನ ನೀಡಿದ ಮಂಗಳೂರಿನ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ ಡಿ’ಸೋಜಾ ಅವರು ಮಾತನಾಡಿ, ಕೆಥೋಲಿಕ್ ಸಭಾ ಸಂಘಟನೆ ಸಮದಾಯದ ಏಳಿಗೆಗೆ ಕಳೆದ ಮೂರುವರೆ ದಶಕಗಳಿಂದ ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತಿದ್ದು, ಇದೀಗ ಸೇವಾ ಕಾರ್ಯಗಳು ಫಲಾನುಭವಿಗಳಿಗೆ ತಲುಪಿಸಲು ಅನುಕೂಲವಾಗುವಂತೆ ಕಚೇರಿ ಆರಂಭಿಸಿರುವುದು ಉತ್ತಮ ಹೆಜ್ಜೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ಅವರು ಮಾತನಾ, ಕ್ರೈಸ್ತರಿಗೆ ಸರಕಾರದ ವಿವಿಧ ಯೋಜನೆಗಳನ್ನು ತಲುಪಿಸುವಲ್ಲಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ತರಬೇತಿ ಒದಗಿಸುವಲ್ಲಿ ಸಮುದಾಯ ಸಶಕ್ತೀಕರಣ ಸೇವಾ ಕೇಂದ್ರ ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿದರು.
ಕ್ರೈಸ್ತ ಸಮುದಾಯದ ಏಳಿಗೆಗೆ ರಾಜ್ಯದ ಬಜೆಟ್ನಲ್ಲಿ ನೀಡಲಾಗಿರುವ ಮೊತ್ತವನ್ನು 125 ಕೋಟಿ ರೂ. ನಿಂದ 300 ಕೋಟಿ ರೂ. ಗಳಿಗೆ ಏರಿಸುವಂತೆ ಹಾಗೂ ಕ್ರೈಸ್ತ ಅಭಿವೃದ್ಧಿ ಮಂಡಳಿ ರಚಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಲಾಗಿದೆ. ಈಗಾಗಲೇ ಒದಗಿಸಿರುವ 125 ಕೋಟಿ ರೂ. ಅನುದಾನ ಸದ್ವಿನಿಯೋಗವಾಗಿ ರಾಜ್ಯದ ಎಲ್ಲೆಡೆ ಇರುವ ಕ್ರೈಸ್ತ ಸಮುದಾಯದ ಜನರಿಗೆ ತಲುಪುವಂತಾಗಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂದು ಇನ್ನೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹೇಳಿದರು.
ಈ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಸಂಘಟನೆಯ ಧ್ಯೇಯ ವಾಕ್ಯದ ಅನಾವರಣ, ಆರೋಗ್ಯ ವಿಮಾ ಕಾರ್ಡ್ ವಿತರಣೆ, 2016-17ನೇ ಸಾಲಿನ ಡೈರೆಕ್ಟರಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷ ಮೆಲ್ವಿನ್ ಡಿ’ಕೋಸ್ತಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಾಲ್ಟರ್ ಮೋನಿಸ್ ಪ್ರಸ್ತಾವನೆಗೈದರು. ಮಾಜಿ ಅಧ್ಯಕ್ಷರಾದ ಲ್ಯಾನ್ಸಿ ಡಿ’ಕುನ್ಹಾ, ವಾಲ್ಟರ್ ಸಿರಿಲ್ ಪಿಂಟೊ ಮತ್ತು ಜೆರಾಲ್ಡ್ ಡಿ’ಕೋಸ್ತಾ ಅವರನ್ನು ಸಮ್ಮಾನಿಸಲಾಯಿತು.
ಕೆಥೋಲಿಕ್ ಸಭಾ ಅಧ್ಯಕ್ಷ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಮಿಲಾಗ್ರಿಸ್ ಚರ್ಚ್ನ ಧರ್ಮಗುರು ಫಾ| ವಲೇರಿಯನ್ ಡಿ’ಸೋಜಾ, ಮಾಜಿ ಅಧ್ಯಕ್ಷ ನೈಜಿಲ್ ಪಿರೇರಾ, ಆಧ್ಯಾತ್ಮಿಕ ನಿರ್ದೇಶಕ ಫಾ| ಮ್ಯಾಥ್ಯೂ ವಾಸ್, ಸಿಟಿ ವಾರಡೊ ಮುಖ್ಯಸ್ಥ ಫಾ| ಜೆ.ಬಿ. ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.
ಸಹ ಕಾರ್ಯದರ್ಶಿ ಸಿರಿಲ್ ಫೆರಾವೊ ವಂದಿಸಿದರು. ಡೇವಿಡ್ ಡಿ’ಸೋಜಾ ಮತ್ತು ವಿವಿಡ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.
Comments are closed.