* ಯೋಗೀಶ್ ಕುಂಭಾಸಿ
ಕುಂದಾಪುರ: ಪಡುವಣದಲ್ಲಿ ಸೂರ್ಯ ಮುಳುಗುವ ಹೊತ್ತು. ಅಲ್ಲಿ ನೂರಾರು ಮಂದಿ ಸೇರಿದ್ರು. ಎಲ್ಲರಲ್ಲೂ ಒಂಥರಾ ಸಂಭ್ರಮ. ಒಂದು ಕಡೆಯಲ್ಲಿ ಮುಖಕ್ಕೆ ಬಣ್ಣ ಹಚ್ಚಿಸಿಕೊಂಡು ಸಂಭ್ರಮಿಸುತ್ತಿರುವ ಪುಟಾಣಿಗಳು. ಇನ್ನೊಂದು ಕಡೆ ಹುಲಿಗಳ ತಂಡದ ನರ್ತನ. ಭಾನುವಾರವಾದ ಕಾರಣ ಎಲ್ಲರೂ ಫ್ರೀ ಮಾಡ್ಕೊಂಡು ಹುಲಿವೇಷ ಕುಣಿತ ಕಣ್ತುಂಬಿಕೊಳ್ಳೋಕೆ ಬಂದಿದ್ರು. ಕುಂದಾಪುರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಂಡುಬಂದ ಈ ಕಾರ್ಯಕ್ರಮದ ಝಲಕ್ ಇಲ್ಲಿದೆ…
ನೂರಾರು ವರ್ಷಗಳ ಇತಿಹಾಸವುಳ್ಳ ಹುಲಿವೇಷ ಕುಣಿತವು ಇತ್ತೀಚಿನ ದಿನಗಳಲ್ಲಿ ಕುಂದಾಪುರ ಭಾಗದಲ್ಲಿ ವಿರಳವಾಗುತ್ತಿದ್ದು ಈ ಕಲೆಗೆ ಪ್ರೋತ್ಸಾಹಕರು ಇಲ್ಲದೇ ಕಲೆ ನಶಿಸುತ್ತಿರುವುದು ಕೆಲವು ವರ್ಷಗಳಿಂದ ಕಂಡುಬರುತ್ತಿದೆ. ಈ ಹುಲಿವೇಷ ಕುಣಿತ ಕಲೆಯನ್ನು ಪ್ರೋತ್ಸಾಹಿಸುವ ಹಾಗೂ ಬೆಳೆಸುವ ಪ್ರಯತ್ನವನ್ನು ಮಾಡುವ ಉದ್ದೇಶ ಹಾಗೂ ಈ ಮೂಲಕವಾಗಿ ಮುಂದಿನ ದಿನಗಳಲ್ಲಿ ಈ ಜನಪದ ಕಲೆಯು ಚಿರಸ್ಥಾಯಿಯಾಗುವಂತೆ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಕುಂದಾಪುರದ ಕಲಾಕ್ಷೇತ್ರ ಸಂಸ್ಥೆಯು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಕಾರ್ಯಕ್ರಮದ ನಂತರ ಹುಲಿಗಳಿಗೆ ಆರ್ಥಿಕವಾಗಿ ಸಹಕಾರವನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಕುಂದಾಪುರದ ಸಾಧನ ಸಂಗಮ ಟ್ರಸ್ಟ್ ಕೂಡ ಇವರಿಗೆ ಸಾಥ್ ನೀಡುತ್ತಿದ್ದು ಮಕ್ಕಳಿಗೆ ಹುಲಿವೇಷದ ಮುಖವರ್ಣಿಕೆ ಬಿಡಿಸಲು ಅನುವು ಮಾಡಿಕೊಡುವ ಮೂಲಕ ಮಕ್ಕಳಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ಕೆ ಕೈಹಾಕಿದೆ.
ಉಡುಪಿ ಭಾಗದ ಹುಲಿವೇಷಕ್ಕೂ ಕುಂದಾಪುರದ ಹುಲಿಗಳ ನರ್ತನ ಹಾಗೂ ವೇಷಕ್ಕೂ ತುಂಬಾನೇ ವ್ಯತ್ಯಾಸವಿದೆ. ಕುಂದಾಪುರ ಭಾಗದಲ್ಲಿ ಪಾರಂಪರಿಕ ವಾದನಗಳಾದ ನಾದಸ್ವರ, ತಾಸ್ಮಾರ್, ಡೋಲು ಮುಂತಾದುವುಗಳಿಂದ ನುಡಿಸಲ್ಪಡುವ ಸುಶ್ರಾವ್ಯವಾದ ವಾದನಕ್ಕೆ ಹೆಜ್ಜೆ ಹಾಕುವ ಹುಲಿಗಳ ನರ್ತನ ಕಾಣುಕೋ ಎರಡು ಕಣ್ಣು ಸಾಲದು. ಕುಂದಾಪುರ ಹುಲಿವೇಷದ ವಿಶಿಷ್ಠ ಶೈಲಿಯ ಜನಪದ ಸ್ವರ ಸಂಯೋಜನೆ, ಜೋಕರ್ ಹಾಗೂ ಗೊಂಡೆಯೊಂದಿಗೆ ಹುಲಿವೇಷಗಳನ್ನೊಳಗೊಂಡ ಕುಣಿತದ ತಂಡ ನವರಾತ್ರಿ ಸಂದರ್ಭದಲ್ಲಿ ಅಲ್ಲಲ್ಲಿ ಕಾಣಸಿಗುತ್ತೆ.
ಭಾನುವಾರದ ಕಾರ್ಯಕ್ರಮಕ್ಕೆ ನಾದಸ್ವರ, ಡೋಲುಗಳೊಂದಿಗೆ ಹೆಜ್ಜೆಹಾಕುತ್ತಾ ಆಗಮಿಸಿದ ಒಂಬತ್ತು ಹುಲಿಗಳು ಅಬ್ಬರದಿಂದ ಕುಣಿದು ನೆರೆದ ಪ್ರೇಕ್ಷಕರನ್ನು ರಂಜಿಸಿದವು. ಪ್ರೇಕ್ಷಕರು ಹಾಗೂ ಸಂಘಟಕರು ಇಟ್ಟ ಹಣವನ್ನು ಕೈ ಸಹಾಯವಿಲ್ಲದೇ ಬಾಯಿಯ ಮೂಲಕವೇ ತೆಗೆಯುವ ಹುಲಿಗಳ ಸಾಹಸವಂತೂ ನೆರೆದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಇನ್ನು ಒಂಬತ್ತೂ ಹುಲಿಗಳು ಕೂಡ ಕುಂದಾಪುರ ಫಿಶ್ ಮಾರ್ಕೇಟ್ ರಸ್ತೆಯಲ್ಲಿನ ನಿವಾಸಿಗಳು ಹಾಗೂ ಒಂದೇ ಫ್ಯಾಮಿಲಿಯವರು ಅನ್ನೋದು ಮತ್ತೊಂದು ವಿಶೇಷ. ಮಂಜುನಾಥ್ ಮತ್ತು ಬಳಗ ವಾಧ್ಯದಲ್ಲಿ ಸಹಕರಿಸಿದ್ದು ತೆಕ್ಕಟ್ಟೆಯ ಸಂದೇಶ್, ಸುಪ್ರೀತ್, ಶರತ್ ಮಕ್ಕಳಿಗೆ ಮುಖವರ್ಣಿಕೆ ಬಿಡಿಸಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ಸಾಧನ ಸಂಗಮ ಟ್ರಸ್ಟ್ ಸಂಚಾಲಕ ನಾರಾಯಣ ಐತಾಳ್, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಜ್ಯೂನಿಯರ್ ಕಾಲೇಜು ಪ್ರಾಂಶುಪಾಲ ಸುಬ್ರಮಣ್ಯ ಜೋಷಿ, ಉದ್ಯಮಿ ರಾಮಚಂದ್ರ ಕಾಮತ್, ಕಲಾ ಕ್ಷೇತ್ರದ ಜಾಯ್ ಜೆ ಕರ್ವೆಲ್ಲೋ, ಗೋಪಾಲ್ ವಿ., ಮೊದಲಾದವರು ಉಪಸ್ಥಿತರಿದ್ದರು.
Comments are closed.