ಮಂಗಳೂರು, ಅ.10: ಕರಾವಳಿಯಾದ್ಯಂತ ಇಂದು ಅಯುಧ ಪೂಜಾ ಸಂಭ್ರಮ. ನವರಾತ್ರಿ ಸಂದರ್ಭ ವಿಜಯದಶಮಿಗೂ ಮೊದಲು ಬರುವ ಆಯುಧ ಪೂಜೆಯನ್ನು ಕರಾವಳಿಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಆಯುಧ ಪೂಜೆಯ ಪ್ರಯುಕ್ತ ಬಾನುವಾರ ಜಿಲ್ಲಾದ್ಯಂತ ಪ್ಯಾಕ್ಟರಿಗಳು, ಗ್ಯಾರೇಜುಗಳು,ಯಂತ್ರೋಪಕರಣಗಳ ಮಳಿಗೆಗಳು, ವರ್ಕ್ ಶಾಪ್ ಗಳಲ್ಲಿ ಅಯುಧ ಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಇಂದು ಮುಂಜಾನೆಯಿಂದಲೇ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ವಾಹನ ಮಾಲಕರು ತಮ್ಮ ಇಷ್ಟದ ದೇವಸ್ಥಾನಗಳಲ್ಲಿ ತಮ್ಮ ವಾಹನಗಳಿಗೆ ವಿಶೇಷ ಪೂಜೆ ನೆರವೇರಿಸಿದರು.
ನಗರದ ಶರವು ದೇವಸ್ಥಾನ ಹಾಗೂ ಉರ್ವಾಸ್ಟೋರ್ ಸಮೀಪದ ಕೊಟ್ಟಾರದ ಶ್ರೀ ಗಣಪತಿ ದೇವಸ್ಥಾದಲ್ಲಿ ಇಂದು ಬೆಳಗ್ಗೆಯಿಂದ ನೂರಾರು ಸಂಖ್ಯೆಯಲ್ಲಿ ವಾಹನ ಮಾಲಕರು ತಮ್ಮ ವಾಹನಗಳಿಗೆ ಪೂಜೆ ನೆರವೇರಿಸಿದರು.
ಶರವು ದೇವಸ್ಥಾನದ ಆವರಣದೊಳಗೆ ನೂರಾರು ಸಂಖ್ಯೆಯಲ್ಲಿ ವಾಹನಗಳು ಸರದಿ ಸಾಲಲ್ಲಿ ನಿಂತಿದ್ದವು. ವಾಹನಗಳ ಪೈಕಿ ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ದೇವಸ್ಥಾನದ ಆವರಣದಲ್ಲಿ ಕಂಡು ಬಂದವು. ನಗರ ಹಾಗೂ ಜಿಲ್ಲಾದ್ಯಂತ ಸಂಚರಿಸುವ ಕೆಲವು ಬಸ್ಸುಗಳು ಹಾಗೂ ಇತರ ಖಾಸಗಿ ವಾಹನಗಳು ಇಂದು ಮುಂಜಾನೆ ತಮ್ಮ ವಾಹನಗಳ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭ ಸಲ್ಲಿಸುವ ಪೂಜೆಯಿಂದ ತಮ್ಮಲ್ಲಿ ಸಂತೋಷ, ಐಶ್ವರ್ಯ, ಯಶಸ್ಸು ಇಮ್ಮಡಿಗೊಳ್ಳುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ನಿಟ್ಟಿನಲ್ಲಿ ಬೆಳಗಿನಿಂದಲೇ ವಾಹನಗಳು ಸರತಿಯಲ್ಲಿದ್ದವು. ಇದರಿಂದ ನಗರದಾದ್ಯಂತ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಆಯುಧ ಪೂಜೆಗಾಗಿ ಬೂದುಗುಂಬಳಕಾಯಿ, ಹೂವು, ಹಣ್ಣು, ತರಕಾರಿ, ಬಟ್ಟೆ ವ್ಯಾಪಾರ ಕೂಡಾ ಭರಾಟೆಯಿಂದ ನಡೆದಿದೆ. ಹೂವಿನ ಬೆಲೆ ಗಗನಕೇರಿದ್ದರೂ ಗ್ರಾಹಕರು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸು ಮೂಲಕ ಖುಷಿಪಟ್ಟರು.
Comments are closed.