File Photos.
ಮಂಗಳೂರು, ಆಕ್ಟೋಬರ್.8:: ಆಕ್ಟೋಬರ್ 4ರಂದು ಕಟೀಲು ದೇವಸ್ಥಾನದ ಮೊಕ್ತೇಸರ ವಾಸುದೇವ ಅಸ್ರಣ್ಣ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡಿರುವ ಬಜ್ಪೆ ಠಾಣಾ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉತ್ತರ ಪ್ರದೇಶ ಮೂಲದ ವೃತ್ತಿಪರ ದರೋಡೆಕೋರರು ಕೃತ್ಯದಲ್ಲಿ ಭಾಗಿಯಾಗಿರಬೇಕೆಂದು ಪೊಲೀಸರು ಶಂಕಿಸಿ ಆ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದು ಈ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.
ಕಳೆದ ಅ.4ರಂದು ಗಿಡಿಗೆರೆಯಲ್ಲಿನ ಅಸ್ರಣ್ಣರ ಮನೆಗೆ ಮಧ್ಯರಾತ್ರಿಯ ಸುಮಾರು ನುಗ್ಗಿದ್ದ ಎಂಟು ಮಂದಿ ದರೋಡೆಕೋರರ ತಂಡ ತಲವಾರು, ಬಂದೂಕು, ರಾಡ್ ತೋರಿಸಿ ಮನೆಮಂದಿಯನ್ನು ಬೆದರಿಸಿದ್ದಲ್ಲದೆ 82 ಪವನ್ ಚಿನ್ನಾಭರಣ, 50 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಘಟನಾಸ್ಥಳಕ್ಕೆ ಎಸ್.ಪಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಜ್ಪೆ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ತನಿಖೆ ಮುಂದುವರಿದಿತ್ತು.
ಅಸ್ರಣ್ಣ ಅವರ ಮನೆ ದರೋಡೆ ಪ್ರಕರಣದಲ್ಲಿ ಸ್ಥಳೀಯ ವ್ಯಕ್ತಿಗಳ ಕೈವಾಡವನ್ನೂ ಶಂಕಿಸಲಾಗಿದೆ. ಈ ಹಿಂದೆ ದರೋಡೆ ಪ್ರಕರಣವೊಂದರಲ್ಲಿ ಬಾಗಿಯಾಗಿದ್ದ ಕುಖ್ಯಾತ ವ್ಯಕ್ತಿಯೊಬ್ಬ ಪ್ರಕರಣದಲ್ಲಿ ಶಾಮೀಲಾಗಿರುವ ಮಾಹಿತಿಯೂ ಲಭಿಸಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸರ ವಿಚಾರಣೆಯ ಬಳಿಕವಷ್ಟೇ ಸಿಗಬೇಕಿದೆ.
Comments are closed.