ಮಂಗಳೂರು, ಅ.3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ತಲೆಯೆತ್ತಲು ಪ್ರಯತ್ನಿಸುತ್ತಿರುವ ಜಾತ್ಯತೀತ ಜನತಾದಳ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ. ಪಕ್ಷ ಸಂಘಟನೆಯ ಜತೆಗೆ ಈಗಾಗಲೇ ಮುಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಶ್ವಿನ್ ಪಿರೇರರನ್ನು ಆಯ್ಕೆ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಲು ಮುಂದಾಗಿದೆ.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಪೂರ್ಣಗೊಳಿಸಲಾಗಿದೆ. ಜಿಲ್ಲಾಧ್ಯಕ್ಷರಾಗಿ ಬಿ. ಮುಹಮ್ಮದ್ ಕುಂಞಿ ವಿಟ್ಲ ನೇಮಕಗೊಂಡಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ವಸಂತ ಪೂಜಾರಿ, ಮಂಗಳೂರು ಉತ್ತರದ ಅಧ್ಯಕ್ಷರಾಗಿ ಡಿ.ಪಿ. ಹಮ್ಮಬ್ಬ, ಮಂಗಳೂರು ಕ್ಷೇತ್ರದಲ್ಲಿ ಮೋಹನ್ದಾಸ್ ಶೆಟ್ಟಿ, ಬಂಟ್ವಾಳದ ಅಧ್ಯಕ್ಷರಾಗಿ ಬಿ.ಮೋಹನ್, ಪುತ್ತೂರು ಕ್ಷೇತ್ರದ ಅಧ್ಯಕ್ಷರಾಗಿ ಐ.ಸಿ.ಕೈಲಾಶ್ ಗೌಡ, ಸುಳ್ಯ ಕ್ಷೇತ್ರಕ್ಕೆ ದಯಾಕರ ಆಳ್ವ ಕುಂಬ್ರ, ಬೆಳ್ತಂಗಡಿ (ಹಂಗಾಮಿ) ಅಧ್ಯಕ್ಷರಾಗಿ ಪ್ರವೀಣ್ ಚಂದ್ರ ಜೈನ್ ಹಾಗೂ ವಿಟ್ಲ ಬ್ಲಾಕ್ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಅಡ್ಯಂತಾಯರನ್ನು ನೇಮಕಗೊಳಿಸಲಾಗಿದೆ.
ರಾಜ್ಯ ಚುನಾವಣಾಧಿಕಾರಿ ಜಿ. ಈಶ್ವರಯ್ಯ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರವೀಣ್ ಚಂದ್ರ ಜೈನ್ ಸಾರಥ್ಯದಲ್ಲಿ ದ.ಕ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಪೂರ್ಣಗೊಳಿಸಲಾಗಿದೆ.
ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ಮೂಡುಬಿದಿರೆಯ ವಿಧಾನಸಭಾ ಚುನಾವಣಾ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ, ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆದೇಶದ ಮೇರೆಗೆ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪಕ್ಷದ ಮುಖಂಡರಾದ ಎಂ.ಬಿ. ಸದಾಶಿವ, ಚಂಗಪ್ಪ, ಪ್ರವೀಣ್ ಚಂದ್ರ ಜೈನ್, ಅಝೀಝ್ ಕುದ್ರೋಳಿ, ರಮೀಜಾ ಬಾನು, ನಾಸಿರ್, ಮುನೀರ್ ಮುಕ್ಕಚ್ಚೇರಿ, ರಾಂ ಗಣೇಶ್, ವಸಂತ ಪೂಜಾರಿ, ಅಕ್ಷಿತ್ ಸುವರ್ಣ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
Comments are closed.