ಕಾಸರಗೋಡು, ಸೆಪ್ಟಂಬರ್.30 : ಮಂಜೇಶ್ವರದ ಕಡಂಬಾರು ಗುತ್ತು ನಿವಾಸಿ, ಆರ್.ಎಸ್.ಎಸ್ ಮಂಜೇಶ್ವರ ತಾಲೂಕು ಸಂಘ ಚಾಲಕ್ ಕೆ. ರವೀಂದ್ರನಾಥ ಶೆಟ್ಟಿಯವರ ಮನೆಯಿಂದ ಇತ್ತೀಚಿಗೆ ನಗ-ನಗದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ ನಗದು, ಚಿನ್ನಾಭರಣ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಉದ್ಯಾವರ ಬಳಿಯ ಫಸ್ಟ್ ಸಿಗ್ನಲ್ ಕುಂಡುಕೊಳಕೆ ಅಬಿದ ಮಂಜಿಲ್ನ ಮೊಯ್ದಿನ್ ಅನ್ಸಾರ್ ಎ.ಎಂ (23), ಮಂಜೇಶ್ವರ ಉದ್ಯಾವರ ಫಸ್ಟ್ ಸಿಗ್ನಲ್ ಅಹಮ್ಮದ್ ಕಂಪೌಂಡ್ನ ಮೊಹಮ್ಮದ್ ಹನೀಫ ಯಾನೆ ಅಂಚು ಯಾನೆ ಅನ್ಸಾರ್ (26), ಕುಂಜತ್ತೂರು ತೂಮಿನಾಡು ಹಿಲ್ಟೋಪ್ ನಗರದ ಸಾಕಿರ್ ಮಂಜಿಲ್ನಿವಾಸಿ ಅಬ್ದುಲ್ ರಹ್ಮಾನ್ ಮುಬಾರಕ್ (26) ಹಾಗೂ ಉದ್ಯಾವರ ರೈಲ್ವೇ ಫಸ್ಟ್ ಸಿಗ್ನಲ್ನ ಅಹಮ್ಮದ್ ಕಂಪೌಂಡ್ ನಿವಾಸಿ ಇಮ್ತಿಯಾಸ್ (28) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ನಗದು ರೂ.22,000 ಒಂದು ಕರಿಮಣಿ ಸರ, ಒಂದು ವಜ್ರದ ಉಂಗುರ ಹಾಗೂ ಮಾರುತಿ ರಿಟ್ಜ್ ಕಾರು ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಕೆದುಂಬಾಡಿ ನಿವಾಸಿ ಆಟೋ ಚಾಲಕ ಹನೀಫ್ (23) ನನ್ನು ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿ ಥಾಮ್ಸನ್ ಜೋಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠರ ನೇತೃತ್ವದಲ್ಲಿರುವ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಇದೇ ತಂಡ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ಅಧಿಕಾರಿ ನೇತ್ರತ್ವದ ಈ ತನಿಖಾ ತಂಡದಲ್ಲಿದ್ದ ಡಿವೈಎಸ್ಪಿ ಎಂ.ವಿ. ಸುಕುಮಾರನ್, ಕುಂಬಳೆ ಸಿಐ ವಿ.ವಿ. ಮನೋಜ್, ಮಂಜೇಶ್ವರ ಎಸ್.ಐ ಪ್ರಮೋದ್, ಸ್ಪೆಷಲ್ ಸ್ಕ್ವಾಡ್ ಎಸ್.ಐ ಫಿಲಿಪ್ ಥೋಮಸ್, ಎಎಸ್ಐ ನಾರಾಯಣ ನಾಯರ್, ಸಿ.ಕೆ. ಬಾಲಕೃಷ್ಣನ್, ಅಬೂಬಕ್ಕರ್ ಕಲ್ಲಾಯಿ, ಶ್ರೀಜಿತ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದವರು ತಿಳಿಸಿದ್ದಾರೆ.
ಘಟನೆ ವಿವರ :ರವೀಂದ್ರನಾಥ ಶೆಟ್ಟಿಯವರ ಮನೆಗೆ ಸೆ. 8ರಂದುತಡರಾತ್ರಿ 1.30ರ ವೇಳೆ ನುಗ್ಗಿದ ಐದು ಮಂದಿಯ ತಂಡ ದರೋಡೆ ನಡೆಸಿದೆ. ಮನೆಗೆ ತಲುಪಿದ ತಂಡ ರವೀಂದ್ರನಾಥ ಶೆಟ್ಟಿಯವರನ್ನು ಕೂಗಿ ಎಬ್ಬಿಸಿ ಅವರು ಹೊರಬಂದಾಗ ಕತ್ತಿತೋರಿಸಿ ಕೊಲೆ ಬೆದರಿಕೆಯೊಡ್ಡಿದೆ. ಸದ್ದು ಕೇಳಿ ರವೀಂದ್ರನಾಥ ಶೆಟ್ಟಿಯವರ ಪತ್ನಿ ಮಹಾಸಕ್ಷ್ಮೀ ಅಲ್ಲಿಗೆ ಬಂದಿದ್ದರು. ಈವೇಳೆ ದಂಪತಿಗೆ ಕತ್ತಿ ತೋರಿಸಿದ ತಂಡ ಬೆದರಿಕೆಯೊಡ್ಡಿ ಮನೆಯೊಳಗೆ ನುಗ್ಗಿ ವಿವಿಧೆಡೆ ಜಾಲಾಡಿದೆ. ಕಪಾಟಿನ ಕೀಲಿಕೈ ಪಡೆದ ದರೋಡೆಕೋರರು ಎರಡು ಕಪಾಟುಗಳಲ್ಲಿದ್ದ 20 ಪವನ್ ಚಿನ್ನಾಭರಣ, ನಗದು , 2 ಮೊಬೈಲ್ ಫೋನ್ ಗಳನ್ನು ಹಾಗೂ ಮನೆಯ ಅಂಗಳದಲ್ಲಿದ್ದ ಕಾರನ್ನು ಸಹಿತ ದರೋಡೆ ನಡೆಸಿ ಪರಾರಿಯಾಗಿತ್ತು. ದಂಪತಿಗೆ ತಂಡ ಕತ್ತಿ ತೋರಿಸಿ ಬೆದರಿಕೆಯೊಡ್ಡುವ ವೇಳೆ ಮಹಾಲಕ್ಷ್ಮಿಯವರ ಕೈಗೆ ಕತ್ತಿ ತಾಗಿ ಗಾಯವುಂಟಾಗಿತ್ತು. ರವೀಂದ್ರನಾಥ ಶೆಟ್ಟಿಯವರ ಕಾರಿನಲ್ಲಿ ಪರಾರಿಯಾದ ದರೋಡೆ ತಂಡ ಕೆ.ಸಿರೋಡ್ ಮೂಲಕ ಹೆದ್ದಾರಿಗೆ ತಲುಪಿ ಪಣಂಬೂರು ಬೀಚ್ ಗೆ ತೆರಳಿ ಅಲ್ಲಿ ಕಾರನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿತ್ತು. ಈ ಕಾರನ್ನು ಬಳಿಕ ತನಿಖಾ ತಂಡ ಪತ್ತೆಹಚ್ಚಿ ಠಾಣೆಗೆ ತಲುಪಿಸಿತ್ತು.
Comments are closed.