ಮಂಗಳೂರು, ಸೆ.27: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಯೋಜನೆ ಜಾರಿಗೊಳಿಸುವ ಮೂಲಕ ಬಡವರ ಪರವಾಗಿದೆ. ವಿದ್ಯಾಸಿರಿ ಯೋಜನೆಯಡಿ ಹಿಂದುಳಿದ ವರ್ಗಗಳ 5359 ವಿದ್ಯಾರ್ಥಿಗಳಿಗೆ 340.45 ಲಕ್ಷ ರೂ., ಹಾಗೂ ಅಲ್ಪಸಂಖ್ಯಾತ ವಿಭಾಗದ 7,614 ವಿದ್ಯಾರ್ಥಿಗಳಿಗೆ 456.84 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಅನ್ನಭಾಗ ಯೋಜನೆಯಡಿ 13-14ನೆ ಸಾಲಿನಲ್ಲಿ 34 ಕೋಟಿ ರೂ., 14-15ನೆ ಸಾಲಿನಲ್ಲಿ 43.62 ಕೋಟಿ ರೂ. ಹಾಗೂ 15-16ನೆ ಸಾಲಿನಲ್ಲಿ 30.28 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ಒದಗಿಸಲಾಗಿದೆ ಎಂದು ದ.ಕ.ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದರು.
ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆ ಹಾಗೂ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡುವ ನಿಟ್ಟಿನಲ್ಲಿ ನಗರದ ಪುರಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ಆಶ್ರಯದಲ್ಲಿ ನಡೆದ ಜನಮನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 2,102 ಅಂಗನವಾಡಿಗಳ 1,09,279 ಮಕ್ಕಳಿಗೆ ಹಾಲು ನೀಡಲಾಗುತ್ತಿದ್ದು, ಕ್ಷೀರ ಧಾರ ಯೋಜನೆಯಡಿ 13-14ನೆ ಸಾಲಿನಲ್ಲಿ 18.78 ಕೋಟಿ ರೂ., 14-15ನೆ ಸಾಲಿನಲ್ಲಿ 22.98 ಕೋಟಿ ರೂ., 15-16ನೆ ಸಾಲಿನಲ್ಲಿ 27.68 ಕೋಟಿ ರೂ. ಸಬ್ಸಿಡಿಯನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ರೈ ಹೇಳಿದರು.
ದ.ಕ.ಜಿಲ್ಲೆ ಅತೀ ಹೆಚ್ಚು ನಿವೇಶನ ಹೊಂದಿರುವ ಜಿಲ್ಲೆಯಾಗಿದೆ. ಈಗಾಗಲೇ 59 ಸಾವಿರಕ್ಕಿಂತ ಮನೆ ನಿವೇಶನಕ್ಕೆ ಅರ್ಜಿ ಸಲ್ಲಿದ್ದಾರೆ. ಅರ್ಹ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡಿದೆ. ತಿಂಗಳಿಗೊಮ್ಮೆ ಹೋಬಳಿ ಮಟ್ಟದ ಜನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.ಸ್ಮಾರ್ಟ್ ಸಿಟಿಗೆ ಪೂರಕ ಯೋಜನೆಯನ್ನು ರೂಪಿಸಲಾಗಿದೆ. ಈ ಬಗ್ಗೆ ಜನರಿಂದ ಮಾಹಿತಿ ಹಾಗೂ ಸಭೆಯನ್ನು ನಡೆಸಲಾಗಿದೆ. ಈಗಾಗಲೇ ಮಂಗಳೂರು ನಗರ ಪ್ರದೇಶ ಬಯಲು ಮುಕ್ತ ಶೌಚಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ನಿರ್ಮಲ ಗ್ರಾಮ ಯೋಜನೆಗೆ ಸೇರ್ಪಡೆಗೊಂಡಿದೆ ಎಂದು ರೈ ಹೇಳಿದರು.
ಅನ್ನಭಾಗ್ಯದಡಿ ನೀಡುವ ಸೀಮೆಎಣ್ಣೆ ಹೆಚ್ಚಿಸಿ, ಕ್ಷೀರ ಭಾಗ್ಯ ಅನುದಾನಿತ ಶಾಲಾ ಮಕ್ಕಳಿಗೂ ದೊರೆಯಲಿ, ಹಣ್ಣುಹಂಪಲುಗಳನ್ನೂ ನೀಡಿ, ಮನಸ್ವಿನಿ ಯೋಜನೆಯಡಿ ಪಿಂಚಣಿ ಹಣ ಹೆಚ್ಚಿಸಿ, ಲಿಂಗ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆ ಜತೆ ಆಶ್ರಯದ ವ್ಯವಸ್ಥೆಯಾಗಲಿ, ಬಿದಾಯಿ ಯೋಜನೆ ಇನ್ನಷ್ಟು ಅರ್ಹ ಫಲಾನುಭವಿಗಳಿಗೆ ತಲುಪಲಿ, ಹರೀಶ್ ಸಾಂತ್ವನ ಯೋಜನೆಯ ಬಗ್ಗೆ ಆ0ಬುಲೆನ್ಸ್ನಲ್ಲಿ ಮಾಹಿತಿ ನೀಡಿ, ಮತ್ಸಾಶ್ರಯದ ಸಹಾಯಧನ ಹೆಚ್ಚಿಸಿ.
ಸೂಕ್ತ ಪ್ರಚಾರದ ಮೂಲಕ ಇನ್ನಷ್ಟು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಸರಕಾರ ವ್ಯವಸ್ಥೆ ಮಾಡಬೇಕು. ಅನ್ನ ಭಾಗ್ಯ ಯೋಜನೆಯಡಿ ಸೀಮೆಎಣ್ಣೆಯ ಪ್ರಮಾಣವನ್ನು ಹೆಚ್ಚಿಸಿ. ಪಡಿತರ ಕೂಪನ್ ವ್ಯವಸ್ಥೆ ಅಗತ್ಯವಿಲ್ಲ ಎಂಬ ಆಕ್ಷೇಪದ ಜತೆಗೆ ಆನ್ಲೈನ್ ಕೂಪನ್ ವ್ಯವಸ್ಥೆಯನ್ನು ಮಾಡಬೇಕೆಂಬ ಬೇಡಿಕೆಯೂ ಫಲಾನುಭವಿಗಳಿಂದ ವ್ಯಕ್ತವಾಯಿತು.ಕ್ಷೀರ ಭಾಗ್ಯ ಯೋಜನೆಯಡಿ ಮಕ್ಕಳಿಗೆ ಪೌಷ್ಠಿಕ ಆಹಾರ ದೊರೆಯುವಂತಾಗಿದೆ. ಹಾಲಿನ ಜತೆ ಹಣ್ಣು ಹಂಪಲುಗಳನ್ನೂ ನೀಡಬೇಕು. ಅನುದಾನಿತ ಶಾಲೆಗಳಿಗೂ ಕ್ಷೀರ ಭಾಗ್ಯ ದೊರೆಯಲಿ.
ಅಪ್ಪ, ಅಮ್ಮ ಇಲ್ಲದೆ, ತಮ್ಮನ ಜತೆ ಆಶ್ರಯ ಮಾಡಿಕೊಂಡಿರುವ ಅವಿವಾಹಿತೆಯಾದ ತನಗೆ ಮನಸ್ವಿನಿ ಯೋಜನೆಯಡಿ ಸಿಗುವ ಮಾಸಿಕ ಪಿಂಚಣಿ 500 ರೂ. ಬಹಳಷ್ಟು ಉಪಯೋಗವಾಗುತ್ತಿದೆ. ಈ ಮೊತ್ತವನ್ನು ಇನ್ನಷ್ಟು ಏರಿಸಿದರೆ, ಮತ್ತಷ್ಟು ಉಪಯೋಗವಾಗಬಹುದು.
ಮಂಗಳಮುಖಿಯರಿಗೆ ಮೈತ್ರಿ ಯೋಜನೆಯಡಿ ಸಿಗುವ ಪಿಂಚಣಿಯಿಂದ ಪ್ರಯೋಜನವಾಗಿದೆ. ಆದರೆ ಆಶ್ರಯದ ವ್ಯವಸ್ಥೆ ಇಲ್ಲದೆ ಮಂಗಳಮುಖಿಯರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ
ಗಂಡನನ್ನು ಕಳೆದುಕೊಂಡು ಮಗಳ ಮದುವೆ ತೀರಾ ಸಂಕಷ್ಟದಲ್ಲಿದ್ದ ತನಗೆ ಸರಕಾರದ ಬಿದಾಯಿ ಯೋಜನೆಯಡಿ ದೊರಕಿದ ಸಹಾಯಧನ ಬಹಳಷ್ಟು ನೆರವು ನೀಡಿದೆ. ಇನ್ನಷ್ಟು ಫಲಾನುಭವಿಗಳಿಗೆ ಈ ಯೋಜನೆ ಲಭ್ಯವಾಗುವ ಮೂಲಕ ಬಡ ಹೆಣ್ಣು ಮಕ್ಕಳ ಬಾಳು ಹಸನಾಗಲಿ.
ಹೀಗೆ ಸಂವಾದದಲ್ಲಿ ಹರೀಶ್ ಸಾಂತ್ವಾನ ಯೋಜನೆ, ಮತ್ಸಾಶ್ರಯ ಸೇರಿದಂತೆ 20 ವಿವಿಧ ಯೋಜನೆಗಳಡಿ ಪ್ರಯೋಜನ ಪಡೆದ ಆಯ್ದ ಫಲಾನುಭವಿಗಳು ಸಚಿವರ ಜತೆ ಸಂವಾದ ನಡೆಸಿದರು.
ಕ್ಷೀರ ಭಾಗ್ಯ ಯೋಜನೆ ಕುರಿತಂತೆ ಅಂಗನವಾಡಿ ಪುಟಾಣಿಗಳು ಕೂಡಾ ತಮ್ಮ ಶಿಕ್ಷಕರು ಹೇಳಿಕೊಟ್ಟಂತೆ ವೇದಿಕೆಯಲ್ಲಿ ಸಚಿವರ ಜತೆ ಸಂವಾದ ನಡೆಸಿದ ಪ್ರಸಂಗವೂ ಕಾರ್ಯಕ್ರಮದಲ್ಲಿ ನಡೆಯಿತು.
ಪ್ರತಿ ಯೋಜನೆಯ ಫಲಾನುಭವಿಗಳ ಸಂವಾದದ ಬಳಿಕ ಬೇಡಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಸರಕಾರಿ ಮಟ್ಟದಲ್ಲಿ ಅವುಗಳ ಈಡೇರಿಕೆಗೆ ಪ್ರಯತ್ನ ಮಾಡುವುದಾಗಿ ಸಚಿವ ರೈ ಭರವಸೆ ನೀಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಅಭಯ ಚಂದ್ರ ಜೈನ್, ಶಾಸಕ ಮೊಯ್ದಿನ್ ಬಾವ, ಮೇಯರ್ ಹರಿನಾಥ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಸನಿಲ್, ಲ್ಯಾನ್ಸಿ ಲೋಟ್ ಪಿಂಟೋ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮೊದಲಾದವರು ಉಪಸ್ಥಿತರಿದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Comments are closed.