*ಯೋಗೀಶ್ ಕುಂಭಾಸಿ
ಕುಂದಾಪುರ: ಕುಂದಾಪುರದ ಕಂಡ್ಲೂರಿನಲ್ಲಿ ಇನ್ನೇನು ಒಂದು ತಿಂಗಳಿನಲ್ಲಿ ನೂತನ ಪೊಲೀಸ್ ಠಾಣೆ ಆರಂಭವಾಗಲಿದೆ ಎಂದು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ತಿಳಿಸಿದರು. ಗುರುವಾರ ಸಂಜೆ ಅವರು ಕುಂದಾಪುರದಲ್ಲಿ ಈ ವಿಚಾರವನ್ನು ಸಾರ್ವಜನಿಕರಿಗೆ ತಿಳಿಸಿದರು.

ಕುಂದಾಪುರಕ್ಕೆ ಇನ್ನೊಂದು ಪೊಲೀಸ್ ಠಾಣೆ ನೀಡುವ ಉದ್ದೇಶದಿಂದ ಸರಕಾರ ಒಂದು ಠಾಣೆಯನ್ನು ಮಂಜೂರು ಮಾಡಿದೆ. ಈ ಠಾಣೆಯನ್ನು ಕುಂದಾಪುರದ ಕಂಡ್ಲೂರಿನಲ್ಲಿ ತೆರೆಯಲು ಉದ್ದೇಶಿಸಲಾಗಿದೆ. ಕಂಡ್ಲೂರ ಕೋಮುಸೂಕ್ಷ್ಮ ಪ್ರದೇಶ ಎಂದು ಬಿಂಬಿತವಾಗಿದ್ದು ತಾಲ್ಲೂಕು ಕೇಂದ್ರದಿಂದ ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಇಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತಿದ್ದು ಕುಂದಾಪುರದಿಂದ ಪೊಲೀಸರು ಅಲ್ಲಿಗೆ ತೆರಳಲು ಬಹಳಷ್ಟು ಸಮಯ ಬೇಕಾಗುತ್ತದೆ. ಇದೆಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಸರಕಾರಕ್ಕೆ ಒತ್ತಡ ಹಾಕಿದ ಪರಿಣಾಮ ಕಂಡ್ಲೂರಿನಲ್ಲಿ ಪೊಲೀಸ್ ಠಾಣೆ ಕಾರ್ಯಾಚರಿಸಲಿದೆ.
ಶೀಘ್ರವೇ ಕಾರ್ಯ…
ಕಂಡ್ಲೂರಿನಲ್ಲಿ ಈಗಾಗಲೇ ಜಾಗ ಹುಡುಕಾಟ ನಡೆಯುತ್ತಿದ್ದು ಸ್ವಂತ ಕಟ್ಟಡ ನಿರ್ಮಿಸಿ ಠಾಣೆ ತೆರಯಲು ಬಹಳಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತದೆ. ಆದ್ದರಿಂದ ಶೀಘ್ರವೇ ಬಾಡಿಗೆ ಕಟ್ಟಡದಲ್ಲಿ ಈ ಠಾಣೆಯನ್ನು ತೆರೆಯಲು ಉದ್ದೆಶಿಸಲಾಗಿದೆ. ಬೌಂಡರಿ ಮಾರ್ಕಿಂಗ್ ಎನ್ನುವ ಸರಕಾರ ಒಂದು ಪ್ರಕ್ರಿಯೆ ಬಾಕಿಯಿದೆ. ಆ ಕಾರ್ಯ ಮುಗಿದು ಅಧೀಕ್ರತ ಆದೇಶ ಬಂದ ಕೂಡಲೇ ಕಂಡ್ಲೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಠಾಣೆ ತೆರೆಯಲಾಗುತ್ತದೆ ಎಂದು ಎಸ್ಪಿ ಅವರು ಹೇಳಿದರು.
Comments are closed.