
ಮ೦ಗಳೂರು, ಜೂ.15 : 2016-17ನೇ ಸಾಲಿನಲ್ಲಿ ದ. ಕ. ಜಿಲ್ಲೆಯ ಪ್ರತಿ ತಾಲೂಕಿಗೆ ಒಂದರಂತೆ ನೋಂದಾಯಿತ ಯುವಕ/ಯುವತಿ ಸಂಘಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಗೊಂಡಿರುವ ಚಟುವಟಿಕೆಗಳನ್ನು ಪರಿಗಣಿಸಿ ಒಂದು ಸಂಘಕ್ಕೆ ತಲಾ ರೂ. 1 ಲಕ್ಷದಂತೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತಿದೆ.
ಈ ಯೋಜನೆಯಡಿ ನೊಂದಾವಣೆಗೊಂಡಿರುವ ಸಂಘ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿರುವ ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಭೌತಿಕ ಹಾಗೂ ಭೌಧ್ಧಿಕ ಚಟುವಟಿಕೆಗಳಾದ ಶಾಲೆಯ ಆಟದ ಮೈದಾನ ಅಭಿವೃದ್ಧಿ, ಆವರಣ ಹಸಿರೀಕರಣ, ಕೈತೋಟ ನಿರ್ಮಾಣ, ಶಾಲೆಯ ಸುತ್ತಮುತ್ತ ಪರಿಸರ ಸಂರಕ್ಷಣೆ, ಶಾಲೆಗೆ ಅಗತ್ಯವಾದ ಶೈಕ್ಷಣಿಕ ಸಾಮಾಗ್ರಿಗಳ ಪೂರೈಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವೈಜ್ಞಾನಿಕ ವಿಷಯಗಳಲ್ಲಿ ಅರಿವು ಮೂಡಿಸುವುದು ಮತ್ತು ಸರಳ ಬೋಧನೆ, ವಿಶೇಷ ಮಕ್ಕಳ ಆರೈಕೆ, ಅಲೆಮಾರಿ ಮಕ್ಕಳಿಗೆ ಶೈಕ್ಷಣಿಕ ಸಹಕಾರ, ಶಾಲಾ ಆವರಣದಲ್ಲಿ ಮಳೆ ನೀರುಕೊಯ್ಲು ನಿರ್ಮಾಣ, ಮಕ್ಕಳ ಪಠ್ಯ ಜ್ಞಾನದ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ ಹೀಗೆ ಶಾಲಾ ಆವರಣದೊಳಗೆ ಹಲವಾರು ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸಿದ ಬಗ್ಗೆ ಛಾಯಾಚಿತ್ರ ಮತ್ತು ದಾಖಲೆಗಳ ಸಮೇತ ಪ್ರಸ್ತಾವನೆಗಳನ್ನು ಆಯಾ ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಯವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಅಥವಾ ಆಯಾ ತಾಲೂಕಿನ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Comments are closed.