ಬಳ್ಳಾರಿ: ಸರ್ಕಾರ ರಾಜೀನಾಮೆ ಸ್ವೀಕರಿಸಿದ ನಂತರ ಫೇಸ್ಬುಕ್ನಲ್ಲಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ವರಸೆ ಬದಲಾಗಿದೆ. ಅಚ್ಚರಿಯೆಂದರೆ ಕಮೆಂಟ್ಗಳ ನಡುವೆ ಒಂದು ಕಡೆ ಬಿಜೆಪಿಯನ್ನು ಮೆಚ್ಚಿಕೊಂಡಿದ್ದು, ಇತರೆ ಪಕ್ಷಗಳನ್ನು ತೆಗಳಿದ್ದಾರೆ.
ಈ ಹಿಂದೆ ಸರ್ಕಾರ, ಸಚಿವ ಪರಮೇಶ್ವರ ನಾಯ್ಕ, ಇಲಾಖೆ ಹಾಗೂ ವ್ಯವಸ್ಥೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಅನುಪಮಾ ಅವರ ಫೇಸ್ಬುಕ್ ಕಮೆಂಟ್ನಲ್ಲಿ ಈಗ ವ್ಯಂಗ್ಯ ಹಾಗೂ ಮೊನಚು ಮಾತುಗಳೇ ಹೆಚ್ಚಾಗಿ ಕಂಡುಬರುತ್ತಿವೆ.
ಕೆಲವು ರಾಜಕೀಯ ಪಕ್ಷಗಳನ್ನು ಹೆಸರಿಸಿ ‘ಅಮ್ಮ ಮಗನ ಪಕ್ಷ, ಅಪ್ಪ ಮಕ್ಕಳ ಪಕ್ಷ, ಅಪ್ಪ ಮಗನ ಪಕ್ಷ, ಅಪ್ಪ ಮಗಳ ಪಕ್ಷ, ಅಣ್ಣ ತಮ್ಮನ ಪಕ್ಷ, ಅಮ್ಮನ ಪಕ್ಷ, ಏಕ ವ್ಯಕ್ತಿ ಪಕ್ಷ, ಸದ್ಯದ ಪರಿಸ್ಥಿತಿಯಲ್ಲಿ ಈ ಪಕ್ಷಗಳು ಎಷ್ಟೇ ಚುನಾವಣೆ ಸೋತರೂ ಇದರ ಅಧ್ಯಕ್ಷರು ಬದಲಾಗಲ್ಲ. ಇದೆಲ್ಲ ಆಗೋದು ಸ್ವಲ್ಪವಾದರೂ ಆಂತರಿಕ ಪ್ರಜಾಪ್ರಭುತ್ವ ಇರುವ ಬಿಜೆಪಿಯಲ್ಲಿ ಮಾತ್ರ. ಕೈ ನೆಕ್ಕಿದರೆ ಈ ವಯ್ಯನ ತರ ನೆಕ್ಕಬೇಕು. ಅದು ಮಡೆಯಾಗಿರಲಿ ಮೈಲಿಗೆಯಾಗಿರಲಿ ನೆಕ್ಕಿದ್ದು ಹೇಗಿರಬೇಕು ಎಂದರೆ ಒಂದು ಧೂಳಿನ ಕಣವೂ ಉಳಿದಿರಬಾರದು ರಾಮಣ್ಣನ ರೋಧನೆ’ ಎಂದು ಹೇಳಿದ್ದಾರೆ. ‘ಫೇಸ್ಬುಕ್ ಮಿತ್ರರೇ, ಭೀಷ್ಮ ಪಿತಾಮಹ ಎಂದಿನಂತೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಾನು ನಿಮಿತ್ತ ಮಾತ್ರ. ಕುರುಕ್ಷೇತ್ರ ಯುದ್ಧ ನಡೆಯಲೇಬೇಕು. ಜನತಾ ನ್ಯಾಯಾಲಯ, ದ್ರೌಪದಿಗಾಗಿರುವುದು 1857ರ ಅಪಮಾನ. ರಾಜದ್ರೋಹ, ದುರ್ಯೋಧನಾ ಯಾರಿಗೆ ಹೆದರಿಸ್ತಿದ್ದೀಯಾ. ಸಂವಿಧಾನ ನಿನ್ನಪ್ಪನ ಮನೆ ಆಸ್ತಿಯಲ್ಲ’ ಎಂದಿದ್ದಾರೆ.
ಜತೆಗೆ ‘ರೂಪ ಮೇಡಮ್ ನೀವು ಈ ಜೋಕ್ ಹೇಳಿದ್ರಿ. ಕೈಕಾಲು ಕಟ್ಟಿ ನೀರಿಗೆ ಎಸೆದ್ರೆ? ಕೆಎಸ್ಪಿಎಸ್ ಎಂಬ ಪೇಪರ್ ಟೈಗರ್ಸ್, ಸೋನಿಯಾ ನಾರಂಗ್ ಮೇಡಮ್ ಓಡಿ ಹೋಗಿದ್ದು ಯಾಕೆ ಗೊತ್ತಾಯ್ತಾ? ನೀವು ಓಡೋಕ್ಕಾಗಲ್ಲ. ಈಸಬೇಕು. ಬೇರೆಯವರಿಗೆ ಈಸಲು ಕಲಿಸಬೇಕು ನಾವು ಕನ್ನಡಿಗರು’ ಎಂದು ಹೇಳಿದ್ದಾರೆ. ‘ಅಶಿಸ್ತು ತೋರಿಸುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮತೆಗೆದುಕೊಳ್ಳುತ್ತಾರಂತೆ ಸಿದ್ದರಾಮಯ್ಯ. ಪೊಲೀಸರ ಮೇಲೆ ಮಾತ್ರಾನಾ, ಪದೇಪದೆ ಅಶಿಸ್ತು ತೋರಿಸುತ್ತಿರುವ…’ ಎಂದು ಹೇಳಿ ಕೆಲವು ಸಚಿವರ ಹೆಸರು ಬರೆದಿದ್ದಾರೆ. ಬಹುತೇಕ ಕಾಮೆಂಟ್ಗಳು ಗೂಡಾರ್ಥದಲ್ಲಿ ಕಂಡುಬರುತ್ತವೆ.
Comments are closed.