ಮಂಗಳೂರು,ಜೂನ್.09: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ 2 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ನಗರದ ಪುರಭವನದಲ್ಲಿ ಆಯೋಜಿಸಲಾದ ‘ವಿಕಾಸಪರ್ವ’ ಸಮಾವೇಶವನ್ನು ಕೇಂದ್ರ ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು.
ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು. ಕಳೆದ ಎರಡು ವರ್ಷದ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಜನರ ನಿರೀಕ್ಷೆಯಂತೆ ಯಶಸ್ವಿ ಕಾರ್ಯಗಳೊಂದಿಗೆ ಭ್ರಷ್ಟಾಚಾರರಹಿತ ಆಡಳಿತ ನೀಡಿದೆ. ವಿವಿಧ ಜನಪರ ಯೋಜನೆಗಳನ್ನು ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ಚುನಾವಣೆಯ ಸಂದರ್ಭ ಜನರಿಗೆ ನೀಡಲಾಗಿದ್ದ ಭರವಸೆಗಳನ್ನು ಜವಾಬ್ಧಾರಿಯುತ ನೆಲೆಯಲ್ಲಿ ಪೂರೈಸುತ್ತಿದ್ದು, ತಾನು ಜನರಿಗಾಗಿ ಮಾಡಿರುವ ಕಾರ್ಯಗಳನ್ನು ಜನತೆಗೆ ತಿಳಿಸುವ ಕಾರ್ಯವನ್ನು ಇದೀಗ ವಿಕಾಸ ಪರ್ವ ಕಾರ್ಯಕ್ರಮದ ಮೂಲಕ ಮಾಡುತ್ತಿದೆ. ಬದಲಾಗಿ ಈ ಕಾರ್ಯಕ್ರಮ ಯಾವುದೇ ರೀತಿಯ ಮನರಂಜನೆ ಅಲ್ಲ ಎಂದು ಅವರು ಹೇಳಿದರು.
ಪ್ರಧಾನಿ ಮೋದಿಯವರ ವಿದೇಶ ಪ್ರಯಾಣದಿಂದಾಗಿ ವಿಶ್ವದಲ್ಲಿ ಭಾರತದ ಮಾನ್ಯತೆ ಹೆಚ್ಚಿದ್ದು, ಅನಿವಾಸಿ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದ ವೇಳೆ ಭ್ರಷ್ಟಾಚಾರವೇ ಮುಗಿಲುಮುಟ್ಟಿತ್ತು. ಆದರೆ, ಮೋದಿ ಸರಕಾರದಲ್ಲಿ ಯಾವನೇ ಒಬ್ಬ ಸಚಿವನ ವಿರುದ್ಧ ಭ್ರಷ್ಟಾಚಾರದ ಆರೋಪವಿಲ್ಲ.
ಸರಕಾರದ ಆಡಳಿತ ಸಂಪೂರ್ಣ ಪಾರದರ್ಶಕವಾಗಿದ್ದು, ಸರ್ವ ಕ್ಷೇತ್ರಗಳ ಅಭಿವೃದ್ಧಿಯನ್ನೇ ಗುರಿಯಾಗಿಸಿದೆ. ಹಿಂದೆ ರಾಜಕಾರಣಿಗಳು, ಸಚಿವರು ಜನಸಾಮಾನ್ಯರ ಕೈಗೆ ಸಿಗುತ್ತಿರಲಿಲ್ಲ. ಆದರೆ ಇಂದು ಕೇಂದ್ರ ಸಚಿವ ಸಂಪುಟದ ಯಾವುದೇ ಸಚಿವ ಜನಸಾಮಾನ್ಯನಿಗೂ ಲಭ್ಯವಿದ್ದಾನೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ನೀಡುವ ದೂರಿಗೆ ಸ್ಪಂದಿಸುವ ವಿಭಿನ್ನ ಸರಕಾರ ನಮ್ಮದು ಎಂದರು.
2014ರ ಚುನವಣೆಯಲ್ಲಿನ ಭಾರೀ ಸೋಲನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರವನ್ನು ಸೂಟು ಬೂಟಿನ ಸರಕಾರವೆಂದು ಟೀಕಿಸುತ್ತಿದೆ. ಕೇಂದ್ರ ಸರಕಾರವು ಹಲವಾರು ಜನರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವೆಲ್ಲವೂ ಹಿಂದಿನ ಸರಕಾರದ ಯೋಜನೆಗಳೇ ಹೊರತು ಹೊಸತೇನನ್ನು ಮಾಡಿಲ್ಲ. ಏನು ವ್ಯತ್ಯಾಸ ಎಂದು ಪ್ರಶ್ನಿಸುತ್ತಿದೆ. ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವಲ್ಲಿನ ದೂರದೃಷ್ಟಿತ್ವದ ನಾಯಕತ್ವವನ್ನು ಎನ್ಡಿಎ ಸರಕಾರ ಹೊಂದಿದೆ. ಈ ಹಿಂದೆ ಕಲ್ಲಿದ್ದಲು ಗಣಿಗಾಗಿ ಪರವಾನಿಗೆ ನೀಡಲಾಗುತ್ತಿತ್ತೇ ಹೊರತು ನಮ್ಮ ಭೂಮಿಯಿಂದ ಒಂದು ಟನ್ ಕೂಡಾ ಕಲ್ಲಿದ್ದಲ್ಲನ್ನು ಮೇಲೆತ್ತಲಾಗಿಲ್ಲ. ಆದರೆ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲೇ ಕಲ್ಲಿದ್ದಲು ಆಮದು ನಿಂತಿದೆ.
ನಕಲಿ ರೇಶನ್ ಕಾರ್ಡ್ಗಳನ್ನು ರದ್ದು ಮಾಡಿ 36,000 ಕೋಟಿ ರೂ.ಗಳನ್ನು ಉಳಿತಾಯ ಮಾಡಲಾಗಿದೆ. ಪ್ರಧಾನಿ ಮೋದಿಯವರು ತಮ್ಮ ವಿದೇಶ ಪ್ರಯಾಣದಿಂದಾಗಿ ವಿಶ್ವದಲ್ಲಿ ಭಾರತದ ಮಾನ್ಯತೆ ಹೆಚ್ಚಿದೆ. ಯಾವುದೇ ಒಂದು ಸಚಿವರ ವಿರುದ್ಧ ಭ್ರಷ್ಟಾಚಾರದ ಹಗರಣವಿಲ್ಲ. ಹಿಂದೆ ರಾಜಕಾರಣಿಗಳು, ಸಚಿವರು ಜನಸಾಮಾನ್ಯರ ಕೈಗೆ ಸಿಗುತ್ತಿರಲಿಲ್ಲ. ಆದರೆ ಇಂದು ಸಚಿವ ಸಂಪುಟದ ಯಾವುದೇ ಸಚಿವ ಜನಸಾಮಾನ್ಯನಿಗೂ ಲಭ್ಯವಾಗಲ್ಲ. ಇದು ಮೋದಿ ಸರಕಾರದ ಸಾಧನೆ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ದ.ಕ. ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಸದ ಸ್ಥಾನ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕಾ ಬೆಳೆಗಳಾದ ಗೇರು, ಅಡಿಕೆ, ರಬ್ಬರ್, ಕಾಫಿ ಬೆಳೆಯುವವರು ಸಂಕಷ್ಟದಲ್ಲಿರುವ ಬಗ್ಗೆ ಅರಿವಿದೆ. ಈ ಬಗ್ಗೆ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
2 ವರ್ಷಗಳಲ್ಲಿ ನಕ್ಸಲ್- ಉಗ್ರವಾದ ಅಂತ್ಯ :
ನಕ್ಸಲ್ ಸಮಸ್ಯೆಯಿಂದ ಕಂಗೆಟ್ಟಿದ್ದ ದೇಶದ 10 ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದಡಿ ಕಳೆದ ಎರಡು ವರ್ಷಗಳಲ್ಲಿ ಶೇ. 32ರಷ್ಟು ಈ ಆತಂಕ ಕಡಿಮೆಯಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿ ನಕ್ಸಲ್ ಹಾಗೂ ಉಗ್ರವಾದ ಸಮಸ್ಯೆ ಕೊನೆಗೊಳ್ಳಲಿದೆ ಎಂದು ಕೇಂದ್ರದ ಗೃಹ ಇಲಾಖೆಯ ರಾಜ್ಯ ಸಚಿವ ಹರಿಭಾಯಿ ಪಿ. ಚೌಧುರಿ ಹೇಳಿದರು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಿದೇಶಗಳ ಜೊತೆಗಿನ ಸಂಬಂಧ ಉತ್ತಮಗೊಂಡಿದೆ. ಎರಡು ವರ್ಷಗಳ ಹಿಂದೆ ಭಾರತದಲ್ಲಿ 18,000 ಗ್ರಾಮಗಳು ವಿದ್ಯುತ್ ಮುಕ್ತವಾಗಿದ್ದು, ಎರಡು ವರ್ಷಗಳಿಂದೀಚೆಗೆ 5,342 ಗ್ರಾಮಗಳಿಗೆ ವಿದ್ಯುತ್ ಸೌಕರ್ಯ ಒದಗಿಸಲಾಗಿದೆ. ಉಳಿದ ಮೂರು ವರ್ಷಗಳಲ್ಲಿ 11,000 ಗ್ರಾಮಗಳಿಗೆ ವಿದ್ಯುತ್ ಸೌಕರ್ಯವನ್ನು ಒದಗಿಸುವ ಕಾರ್ಯ ಪೂರ್ಣಗೊಳ್ಳಲಿದೆ. ರೈತರಿಗೆ ರಸಗೊಬ್ಬರದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನೀಮ್ಯುಕ್ತ ರಸಗೊಬ್ಬರ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರವು ಕಳೆದ 730 ದಿನಗಳ ಆಡಳಿತದಲ್ಲಿ ದೇಶವನ್ನು ವಿಕಾಸದತ್ತ ಕೊಂಡೊಯ್ಯುತ್ತಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಮುಂದಿನ 5 ವರ್ಷಗಳಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಲಿದ್ದು, 2030ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿದೆ ಎಂದು ಕೇಂದ್ರ ಸಚಿವ ಹರಿಭಾಯಿ ಚೌಧುರಿ ಹೇಳಿದರು.
ಸಮಾವೇಶದಲ್ಲಿ ಶಾಸಕರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ. ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಪಮೇಯರ್ ಸುಮಿತ್ರಾ ಕರಿಯ ಮತ್ತಿತ್ತರರು ಉಪಸ್ಥಿತರಿದ್ದರು. ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಸ್ವಾಗತಿಸಿದರು. ಸಂಜೀವ ಮಠಂದೂರು ವಂದಿಸಿದರು. ದೇವದಾಸ್ ಶೆಟ್ಟಿ ನಿರ್ವಹಿಸಿದರು.
Comments are closed.