ಮಂಗಳೂರು, ಜೂ.08 : ಕೇರಳಕ್ಕೆ ಇಂದು ಮುಂಗಾರು ಮಳೆ ಅಪ್ಪಳಿಸಿದೆ. ಅಲ್ಲಿ ಆರಂಭಗೊಂಡ ಮುಂಗಾರು ಮಳೆಯ ಆರ್ಭಟ ದ.ಕ.ಜಿಲ್ಲೆಯಲ್ಲೂ ತನ್ನ ಪ್ರಭಾವ ಬೀರಿದೆ. ಬುಧವಾರ ಮುಂಜಾನೆಯಿಂದಲೇ ನಗರದಲ್ಲಿ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಅಸಮರ್ಪಕ ಚರಂಡಿ ವ್ಯವಸ್ಥೆ, ಚರಂಡಿಗಳ ಹೂಳೆತ್ತದೇ ಇರುವ ಕಾರಣಕ್ಕೆ ಮಳೆಯ ನೀರು ರಸ್ತೆಯಲ್ಲೇ ಹರಿದು ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟಾರ, ಕುಂಟಿಕಾನ, ನಂತೂರು, ಯೆಯ್ಯಾಡಿ ಪರಿಸರದ ತಗ್ಗು ಪ್ರದೇಶಗಳು ಜಲಾವೃತಗೊಂಡವು. ನಗರದ ಕೆ.ಎಸ್.ರಾವ್.ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಕೆ.ಎಸ್.ರಾವ್ ನಗರದಲ್ಲಿ ಕೃತಕ ನೆರೆ ಪರಿಸ್ಥಿತಿ ಇಂದು ನಿನ್ನೆಯ ಸಂಗತಿಯಲ್ಲ. ಹೀಗಿದ್ದರೂ ಮಹಾನಗರಪಾಲಿಕೆ ಮಳೆಗಾಲವನ್ನು ಎದುರಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ.
ಯೆಯ್ಯಾಡಿಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಮಹಾನಗರ ಪಾಲಿಕೆಯ ಪಂಪ್ಹೌಸ್ನೊಳಗೆ ನೀರು ನುಗ್ಗಿದ್ದು, ರಸ್ತೆ ಕೆರೆಯಂತಾಗಿ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಸೃಷ್ಟಿಯಾಯಿತು. ನಗರದ ಜೈಲ್ ರಸ್ತೆಯಲ್ಲೂ ಇದೇ ಪರಿಸ್ಥಿತಿ ಸೃಷ್ಟಿಯಾಗಿ ಅಪಾರ್ಟ್ಮೆಂಟ್ನೊಳಗಡೆ ನೀರು ನುಗ್ಗಿದೆ. ಒಂದೇ ಮಳೆಗೆ ನಗರದ ಅಲ್ಲಲ್ಲಿ ಚರಂಡಿ ತುಂಬಿರುವ ಪರಿಣಾಮ ಮಳೆನೀರು ರಸ್ತೆಯಲ್ಲೇ ಹರಿದು ದ್ವಿಚಕ್ರ, ರಿಕ್ಷಾ ಸವಾರರು ಸಂಚಾರಕ್ಕೆ ಪರದಾಡಬೇಕಾಯಿತು.
ಮಹಾನಗರ ಪಾಲಿಕೆ ಪ್ರತೀ ಬಾರಿಯೂ ಮುಂಗಾರು ಆಗಮನಕ್ಕೆ ಮುನ್ನ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳದೇ ಇರುವುದು ಮಳೆ ಬಂದಾಗ ಜಗಜ್ಜಾಹೀರಾಗುತ್ತಿದೆ. ಚರಂಡಿ ಸ್ವಚ್ಛಗೊಳಿಸಿ ಮಳೆಯ ನೀರು ಹರಿಯಲು ವ್ಯವಸ್ಥೆ ಕಲ್ಪಿಸದಿರುವ ಪಾಲಿಕೆ ಕೃತಕ ನೆರೆಗೆ ಕಾರಣವಾಗಿದೆ. ತ್ಯಾಜ್ಯ ವಿಲೇವಾರಿಯನ್ನೂ ಸಕಾಲಕ್ಕೆ ಮಾಡದ ಕಾರಣ ತ್ಯಾಜ್ಯ ಮಳೆಯ ನೀರಿನ ಜೊತೆ ಸೇರಿ ರಸ್ತೆಯಲ್ಲೇ ಹರಿಯುತ್ತಿದೆ.
Comments are closed.