ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಳ್ಳಲಿರುವ ಸೋಲಾರ್ ದೀಪ ಹಾಗೂ ವಿವಿಧ ಕಾಮಗಾರಿಗಳ ಲೋಕಾರ್ಪಣೆ
ಕುಂದಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಜನರಿಗಾಗಿ ಜನರೇ ಮಾಡುವ ಸರಕಾರ ವ್ಯವಸ್ಥೆ ಇಂದು ಭ್ರಷ್ಟಾಚಾರದ ಕಪಿಮುಷ್ಟಿಗೆ ಸಿಕ್ಕು ಕೆಲವರಿಂದ ಕೆಲವರಿಗಾಗಿ ಕೆಲವರೇ ಮಾಡುತ್ತಿರುವ ಸರಕಾರವಾಗಿದೆ ಎಂದು ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.
ಅಮಾಸೆಬೈಲು ಗ್ರಾಮಪಂಚಾಯತ್, ಅಮಾಸ್ರ್ಬೈಲು ಚಾರಿಟೇಬಲ್ ಟ್ರಸ್ಟ್(ರಿ.), ಕರ್ಣಾಟಕ ಬ್ಯಾಂಕ್ (ಲಿ.) ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಧರ್ಮಸ್ಥಳ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಇವರ ಜಂಟಿ ಆಶ್ರಯದಲ್ಲಿ ಬುಧವಾರ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಟಾನಗೊಳ್ಳಲಿರುವ ಸೋಲಾರ್ ದೀಪ ಮತ್ತು ವಿವಿಧ ಕಾಮಗಾರಿಗಳ ಲೋಕರ್ಪಣಾ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಯು ಭೃಷ್ಟಾಚಾರದಿಂದ ಕೂಡಿದೆ. ಭೃಷ್ಟಾಚಾರ ಇಲ್ಲದ ಸಂಸ್ಥೆಗಳನ್ನು ಹುಡುಕುವುದು ಕಷ್ಟಸಾಧ್ಯವಾಗಿದ್ದು ಶ್ರೀಮಂತಿಕೆಯನ್ನು ಮತ್ತು ಅಧಿಕಾರವನ್ನು ಪೂಜಿಸುವ ಸಮಾಜವನ್ನು ಇಂದು ನಾವು ಕಾಣಬಹುದಾಗಿದೆ. ಭೃಷ್ಟರನ್ನು ಬದಲಾಯಿಸಿ, ಪ್ರಾಮಾಣಿಕತೆಯನ್ನು ಮೆಚ್ಚುವ ಸ್ವಸ್ಥ ಸಮಾಜದ ನಿರ್ಮಾಣವನ್ನು ಇಂದಿನ ಯುವಪೀಳಿಗೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ, ನಿಷ್ಟಾವಂತ ಹಾಗೂ ಬಡವರ ಬಗ್ಗೆ ಕಳಕಳಿಯುಳ್ಳ ವ್ಯಕ್ತಿಗಳು ಮಾತ್ರ ರಾಜಕೀಯಕ್ಕೆ ಬರುವಂತಾಗಬೇಕು. ಆರ್ಥಿಕ ಲಾಭಕ್ಕೆ ರಾಜಕೀಯಕ್ಕೆ ಬರುವವರನ್ನು ಚುನಾಯಿಸದೇ ಅವರಂತವರನ್ನು ದೂರವಿಡುವ ಕಾರ್ಯವಾಗಬೇಕು ಎಂದು ಹೇಳಿದರು.
ಅಮಾಸೆಬೈಲು ಎಂಬ ಗ್ರಾಮದಲ್ಲಿ ಅಭಿವೃದ್ಧಿಪರವಾದ ಜನೋಪಯೋಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಕಾರ್ಯವನ್ನು ಎ.ಜಿ. ಕೊಡ್ಗಿಯವರು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮೂಲಕವಾಗಿ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯದಿಂದ ಅಭಿವೃದ್ಧಿಯಾಗುವುದಕ್ಕಿಂತಲೂ ಮುತ್ಸದ್ಧಿಗಳ ಮೂಲಕವಾಗಿ ಅಭಿವ್ರಧಿ ಕಾರ್ಯಗಳು ಸುಲಲಿತವಾಗಿ ನಡೆಯುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಪ್ರತಿ ಮನೆಗೂ ಬೆಳಕು ನೀಡುವ ಯೋಜನೆ ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ (ಎಂ.ಎನ್.ಆರ್.ಇ)ಯಿಂದ ಶೇ.30 ಮತ್ತು ಕರ್ನಾಟಕ ರಾಜ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(ಕೆ.ಆರ್.ಇ.ಡಿ.ಎಲ್)ಯಿಂದ ಶೇ.೨೦ ಮತ್ತು ನಕ್ಸಲ್ ಪೀಡಿತ ಪ್ರದೇಶಾಭಿವೃದ್ದಿ ನಿಧಿಯಿಂದ ರೂ.25.00ಲಕ್ಷ ಮತ್ತು ಫಲಾನುಭವಿಗಳ ವಂತಿಗೆಯಿಂದ ಈ ಯೋಜನೆಯನ್ನು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ವತಿಯಿದ ಇಂದು ಅನುಷ್ಠಾನಕ್ಕೆ ತರಲಾಗಿದೆ. ಸೆಪ್ಟೆಂಬರ್ ೨೨-೨೦೦೮ರಂದು ಅಸ್ತಿತ್ವಕ್ಕೆ ಬಂದ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಮಾಸೆಬೈಲು ಪಂಚಾಯತ್ನ್ನು ಮಾದರಿ ಪಂಚಾಯತಿಯಾಗಿ ಮತ್ತು ಸರ್ವತೋಮುಖ ಅಭಿವೃದ್ದಿ ಪಡಿಸುವ ಸಲುವಾಗಿ ಕರ್ಣಾಟಕ ಬ್ಯಾಂಕ್ ಮಂಗಳೂರು ಇವರು ದತ್ತು ಪಡೆದಿದ್ದು, ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಗೌರವಾಧ್ಯಕ್ಷರಾಗಿ ಟ್ರಸ್ಟಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೋಲಾರ್ ಬೀದಿದೀಪ ವ್ಯವಸ್ಥೆಗೆ ಎ.ಜಿ. ಕೊಡ್ಗಿ ಅವರು ತಮ್ಮ್ಮ ತಂದೆಯವರಾದ ದಿವಗಂತ ಕೃಷ್ಣರಾಯ ಕೊಡ್ಗಿ ಸ್ಮರಣಾರ್ಥ ನೀಡಿದ 1 ಲಕ್ಷ ರೂ. ಚೆಕ್ನ್ನು ಪಿ.ಡಿಓ. ಹಾಗೂ ಸೋಲಾರ್ ಕಂಪೆನಿ ಮುಖ್ಯಸ್ಥರಿಗೆ ವಿತರಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, 75 ಸಾವಿರ ಮೌಲ್ಯದ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಎ.ಜಿ. ಕೊಡ್ಗಿಯರವನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಸೋಲಾರ್ ದೀಪವನ್ನು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಕೃಷಿ ಮಾರುಕಟ್ಟೆ ಮತ್ತು ಶುದ್ಧಕುಡಿಯುವ ನೀರಿನ ಘಟಕವನ್ನು ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಉದ್ಘಾಟಿಸಿದರು. ಮೀನುಮಾರುಕಟ್ಟೆ ಉದ್ಘಾಟನೆಯನ್ನು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರೌಢಶಾಲೆಯಲ್ಲಿ ಬಾಲಕರ ಶೌಚಾಲಯವನ್ನು ಕರ್ಣಾಟಕ ಬ್ಯಾಂಕ್ ಮಂಗಳೂರು ಇಲ್ಲಿನ ಕಾರ್ಯನಿರ್ವಾಹಕ ನಿರ್ದೆಶಕ ಜಯರಾಮ ಭಟ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ. ಹಿರಿಯಣ್ಣ, ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ, ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಡ್ತಿ, ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ, ಉಪಾಧ್ಯಕ್ಷೆ ಪ್ರವೀಣ್ ಕುಮಾರ್ ಶೆಟ್ಟಿ, ಸದಸ್ಯೆ ಜ್ಯೋತಿ ಪೂಜಾರ್ತಿ, ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ ಕೆ.ಎಂ. ಉಡುಪ, ಅಮಾಸೆಬೈಲು ಸರಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯ ತಿಮ್ಮಪ್ಪ, ಉಳ್ಳುರು-ಮಚ್ಚಟ್ಟು ವ್ಯವಸ್ಯಾಯ ಸಹಕಾರಿ ಸಂಘದ ಅಧ್ಯಕ್ಷ ಟಿ.ಚಂದ್ರಶೇಖರ್ ಶೆಟ್ಟಿ, ಅಮಾಸೆಬೈಲು ವ್ಯ.ಸೇ.ಸ. ಸಂಘದ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಎ.ಜಿ. ಕೊಡ್ಗಿ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು.
Comments are closed.