ಮಂಗಳೂರು, ಜೂನ್.01 : ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ದ.ಕ ಜಿಲ್ಲೆಯಲ್ಲಿ 16 ನೇ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬುಧವಾರ ಬೆಳಿಗ್ಗೆ ದ.ಕ. ಹಾಲು ಒಕ್ಕೂಟ ವತಿಯಿಂದ ವಾಮಾಂಜೂರಿನ ಮಂಗಳ ಜ್ಯೋತಿ ಸಮಗ್ರ ಶಾಲೆಯಲ್ಲಿ ವಿಶ್ವ ಹಾಲು ದಿನಾಚರಣೆಗೆ ಚಾಲನೆ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ.ವಿ. ಸತ್ಯನಾರಾಯಣ ಮೊದಲಾದವರು ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ನಂದಿನಿ ಸುವಾಸಿತ ಹಾಲನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ದೈನಂದಿನ ಜೀವನದಲ್ಲಿ ರೈತರ ಅವಶ್ಯಕತೆ ಸಾಕಷ್ಟಿದೆ. ದ.ಕ. ಜಿಲ್ಲೆಯಲ್ಲಿ ಸುಮಾರು 4.5ರಿಂದ 5 ಲಕ್ಷ ಲೀಟರ್ನಷ್ಟು ಹಾಲು ಡೈರಿಗೆ ಮಾರಾಟ ಮಾಡಲಾಗುತ್ತಿದ್ದು, 1 ಲಕ್ಷದ 20 ಸಾವಿರ ಹೈನುಗಾರಿಕೆ ನಡೆಸುತ್ತಿರುವ ಸದಸ್ಯರು ಹಾಲು ಉತ್ಪಾದಕರ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದ್ದಾರೆ ಎಂದರು.
ಸುಮಾರು 680 ಸಂಘಗಳು ಈ ಪ್ರಕ್ರಿಯೆಯಲ್ಲಿ ಕೈ ಜೋಡಿಸುತ್ತಿದ್ದು, ದಿನದ 24 ಗಂಟೆಯೂ ಹಾಲಿನ ವಿವಿಧ ಉತ್ಪನ್ನಗಳ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು. ಮಕ್ಕಳು ಹಾಗೂ ಯುವಜನತೆಯ ಮೆದುಳು, ನರಕೋಶ, ಎಲುಬು ಸೇರಿದಂತೆ ದೈಹಿಕ ಬೆಳವಣಿಗೆಯಲ್ಲಿ ಹಾಲು ಪರಿಪೂರ್ಣವಾದ ಆಹಾರ ಎಂದವರು ಹೇಳಿದರು.
ಮಂಗಳಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ಗಣೇಶ್ ಭಟ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಮುಖ್ಯಸ್ಥ ಅಶೋಕ್ ಕುಮಾರ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ. ಕೆ.ಎಂ.ಲೋಹಿತೇಶ್ವರ, ಯೋಜನಾಧಿಕಾರಿ ಪುನೀತ್ ಶೆಟ್ಟಿ, ಮರಿಯಾ ಮಸ್ಕರೇನ್ಹಸ್ ಮತ್ತಿತರರು ಉಪಸ್ಥಿತರಿದ್ದರು.
Comments are closed.