ಕುಂದಾಪುರ: ಗಂಗೊಳ್ಳಿ ಗ್ರಾಮಪಂಚಾಯತ್ ಸದಸ್ಯರ ಸಾಮಾನ್ಯ ಸಭೆಗೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಅಧಿಕಾರಿಗಳು ಪೊಲೀಸರನ್ನು ಕರೆಸಿ ಬಂದೋಬಸ್ತ್ ಏರ್ಪಡಿಸಿದ್ದ ಕಾರಣ ಅಧ್ಯಕ್ಷರನ್ನು ಹೊರತುಪಡಿಸಿ ಪಕ್ಷಾತೀತವಾಗಿ ಸರ್ವ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಆಕ್ರೋಷ ವ್ಯಕ್ತಪಡಿಸಿದ ಘಟನೆ ಮೇ.31 ಮಂಗಳವಾರ ಗಂಗೊಳ್ಳಿ ಪಂಚಾಯತ್ ವಠಾರದಲ್ಲಿ ನಡೆದಿದೆ.
ಗಂಗೊಳ್ಳಿ ಗ್ರಾಮಪಂಚಾಯತಿಯ ಉಪಾಧ್ಯಕ್ಷ ಮಹೇಶರಾಜ್ ಪೂಜಾರಿ ಸಹಿತ ಪಕ್ಷಾತೀತವಾಗಿ ಮೂವತ್ತೆರಡು ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡುವ ಮೂಲಕ ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಖಾರ್ವಿ ಹಾಗೂ ಪಿಡಿಓ ಪ್ರವೀಣ್ ಡಿಸೋಜಾ ವಿರುದ್ಧ ತಮ್ಮ ಅಸಮಾಧಾನ ತೋಡಿಕೊಂಡರು. ಮೂವತ್ತಮೂರು ಸಂಖ್ಯಾಬಲ ಹೊಂದಿರುವ ಗಂಗೊಳ್ಳಿ ಗ್ರಾಮಪಂಚಾಯತಿಯಲ್ಲಿ 20 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 13 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ.
ಮೂರ್ನಾಲ್ಕು ತಿಂಗಳಿಂದ ನಡೆಯದ ಸಭೆ?
ಅಧ್ಯಕ್ಷರ್ರನ್ನು ಹೊರತುಪಡಿಸಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ ಗಂಗೊಳ್ಳಿ ಪಂಚಾಯತಿಯ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸರ್ವ ಸದಸ್ಯರು ಪಂಚಾಯತ್ ಎದುರುಗಡೆ ಜಮಾಯಿಸಿ ತಮ್ಮ ಅಸಮಾಧನವನ್ನು ಹೊರಹಾಕಿದರು. ನಾಲ್ಕು ತಿಂಗಳುಗಳಿಂದ ಸಾಮಾನ್ಯ ಸಭೆ ನಡೆಸಿಲ್ಲ. ಜನರ ಕುಂದುಕೊರತೆಗಳು, ಮುಂಬರುವ ಮಳೆಗಾಲದ ಪೂರ್ವತಯಾರಿ ಬಗ್ಗೆ ಚರ್ಚಿಸಲು ಈ ಸಭೆ ಕರೆದರೂ ಕೂಡ ಪೊಲೀಸರನ್ನು ಕರೆಯಿಸಿ ಸರ್ವ ಸದಸ್ಯರಿಗೆ ಅವಮಾನ ಮಾಡಿದ್ದಾರೆ. ಪಂಚಾಯತಿ ಅಧ್ಯಕ್ಷರು ಇಲ್ಲಿನ ಸರ್ವ ಸದಸ್ಯರ ಹಕ್ಕನ್ನು ಕಿತ್ತುಕೊಂಡಿದ್ದಾರೆ, ಯಾವ ಗೌರವ ಮನ್ನಣೆ ನೀಡುತ್ತಿಲ್ಲ ಎಂದು ಉಪಾಧ್ಯಕ್ಷ ಮಹೇಶರಾಜ್ ಪೂಜಾರಿ ಆರೋಪಿಸಿದರು. ನಾಲ್ಕು ತಿಂಗಳುಗಳಿಂದಲೂ ಸಭೆ ಕರೆಯದ ಬಗ್ಗೆ ಉಪಾಧ್ಯಕ್ಷರ ಸಹಿತ ಸದಸ್ಯರು ಕುಂದಪುರ ತಾಲೂಕುಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ ಪರಿಣಾಮ ಮೇ.31 ಬುಧವಾರ ಸಾಮಾನ್ಯ ಸಭೆ ಕರೆಯಲಾಗಿತ್ತು.
ಪೊಲೀಸರನ್ನು ಕರೆಯಿಸಿ ಸಾಮಾನ್ಯಸಭೆ..!
ನಾಲ್ಕು ತಿಂಗಳಿಂದ ಸಾಮಾನ್ಯಸಭೆ ಕರೆಯಲಾಗಿಲ್ಲ ಎಂದು ದೂರಿದ ಹಿನ್ನೆಲೆ ಮಂಗಳವಾರ ಸಾಮಾನ್ಯಸಭೆ ಕರೆಯಲಾಗಿತ್ತು. ಆದರೇ ಬೆಳಿಗ್ಗೆ ಬಂದ ಪಂಚಾಯತಿ ಸದಸ್ಯರಿಗೆ ಪಂಚಾಯತಿ ಎದುರು ನಿಲ್ಲಿಸಿದ್ದ ಪೊಲೀಸ್ ಡಿಎಆರ್ ವಾಹನಗಳು ಇಪ್ಪತ್ತಕೂ ಅಧಿಕ ಪೊಲೀಸರನ್ನು ನೋಡಿ ಗೊಂದಲವಾಗಿತ್ತು. ವಿಚಾರಣೆ ವೇಳೆ ಪಂಚಾಯತಿ ಅಧ್ಯಕ್ಷರು ಹಾಗೂ ಅಭಿವ್ರದ್ಧಿ ಅಧಿಕಾರಿಗಳ ಕೋರಿಕೆಯಂತೆ ಪೊಲೀಸರು ಭದ್ರತೆ ನೀಡಿರುವುದಾಗಿ ತಿಳಿದುಬಂದಿತ್ತೆನ್ನಲಾಗಿದೆ. ಸಾಮಾನ್ಯ ಸಭೆ ನಡೆಸಲು ಪೊಲೀಸರನ್ನು ಕರೆಯಿಸಿದ್ದು ಏಕೆ ಎನ್ನುವುದು ಬಹಿಷ್ಕಾರ ನಡೆಸಿದ ಉಪಾಧ್ಯಕ್ಷರ ಸಮೇತ ಸರ್ವ ಸದಸ್ಯರೆಲ್ಲರ ಆರೋಪ. ನಿರ್ಣಯ ಇಲ್ಲದೇ ಬಿಲ್ ಪಾಸ್ ಮಾಡಿದ್ದಕ್ಕೆ ಹೆದರಿ ಪೊಲೀಸ್ ಭದ್ರತೆ ಇಟ್ಟಿದ್ದಾರೆಂದು ಕೂಡ ಆರೋಪವನ್ನು ಇವರು ಮಾಡಿದರು.
ನಿರ್ಣಯ ಮಾಡದೇ ಬಿಲ್ ಮಾಡಿದರೇ ಅಧ್ಯಕ್ಷರು?
ಇನ್ನು ಪಂಚಾಯತಿ ಸದಸ್ಯರೇ ಆರೋಪಿಸುವ ಹಾಗೆ ಯಾವ ವಿಚಾರವನ್ನು ಸದಸ್ಯರ ಗಮನಕ್ಕೆ ತಾರದೇ, ಸಾಮಾನ್ಯ ಸಭೆ ಹಾಗೂ ತುರ್ತು ಸಭೆ ಕರೆಯದೇ ಮೇ ತಿಂಗಳ ಹತ್ತನೇ ತಾರೀಖಿನಂದು ಗಂಗೊಳ್ಳಿ ಗ್ರಾಮಪಂಚಯತಿಯ ನೂತನ ಕಟ್ಟಡವನ್ನು ಅಧ್ಯಕ್ಷರು ಸ್ವಹಿತಾಸಕ್ತಿಯಿಂದಾಗಿ ಉದ್ಘಾಟನೆ ನಡೆಸಿದರು. ಆ ಕಾರ್ಯಕ್ರಮದ ಖರ್ಚಿನ ವೆಚ್ಚವನ್ನು ಯಾವ ಸದಸ್ಯರ ಗಮನಕ್ಕೆ ತಾರದೇ ನಿರ್ಣಯ ಮಾಡದೇ ಕಾನೂನು ಬಾಹಿರವಾಗಿ ಬಿಲ್ ಪಾವತಿ ಮಾಡಿದ್ದಾರೆ. ಇದೆಲ್ಲವೂ ನೋಡಿದರೇ ಇವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದು ಕಂಡುಬರುತ್ತಿದೆ ಎಂದು ಅರೋಪಿಸಿದ್ದಾರೆ.
ಅಧ್ಯಕ್ಷರ ಮೇಲೆ ಟಾರ್ಗೇಟ್?
ಕೆಲವು ಸದಸ್ಯರು ಅಧ್ಯಕ್ಷರ ಮೇಲೆ ಟಾರ್ಗೇಟ್ ಮಾಡಿ, ಅಧ್ಯಕ್ಷರನ್ನು ಬಿಡೊಲ್ಲ ಎಂದು ಹೇಳಿದ ಬಗ್ಗೆ ಮಾಹಿತಿ ಬಂದ ಕಾರಣ ಮುಂಜಾಗ್ರತೆಯ ನಿಟ್ಟಿನಲ್ಲಿ ಪೊಲೀಸರನ್ನು ನಾವೇ ಕರೆಯಿಸಿದ್ದೇವೆ. ಪೊಲೀಸರು ಕೆಳಗೆ ಇರುತ್ತಾರೆ. ನಾವು ಸಭೆ ನಡೆಸುವುದು ಮೇಲೆ. ಅಷ್ಟಕ್ಕೂ ಪೊಲೀಸರು ಬಂದಿದ್ದು ಇವರಿಗೇಕೆ ಭಯ? ಸಭೆಯಲ್ಲಿ ಚರ್ಚೆ ನಡೆಸಲು ಬರುವುದೇ ಆದರೇ ಬರಬಹುದಿತ್ತಲ್ಲವಾ? ಎನ್ನುವುದು ಗಂಗೊಳ್ಳಿ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಖಾರ್ವಿ ನೀಡುವ ಸ್ಪಷ್ಟನೆ.
ಬಿಜೆಪಿಯಿಂದ ಉಚ್ಚಾಟನೆಯಾದ ಬಗ್ಗೆ ಮಾಹಿತಿಯಿಲ್ಲ…
ಬಿಜೆಪಿ ಪಕ್ಷದಿಂದ ಉಚ್ಚಾಟಿಸಿಲ್ಪಟ್ಟ ಬಗ್ಗೆ ಪತ್ರಿಕೆಗಳಲ್ಲಿ ನೋಡಿ ತಿಳಿದಿರುವೆ ಹೊರತು ಅಧೀಕ್ರತವಾಗಿ ಯಾವುದೇ ನೋಟಿಸ್ ಬಂದಿಲ್ಲ. ನಾನು ಪಕ್ಷವಿರೋಧಿ ಎನ್ನುವುದೇ ಹೌದಾದರೇ ಅದನ್ನು ಏನೆಂದು ಸ್ಪಷ್ಟಪಡಿಸಲಿ ಎಂದು ಅಧ್ಯಕ್ಷೆ ಹೇಳಿದರು.
Comments are closed.