ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ದುಬೈ: ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಮುನ್ನುಗ್ಗುತ್ತಿರುವ ಭಾರತವನ್ನು ಇನ್ನಷ್ಟು ಸದೃಢಗೊಳಿಸಲು ವಿದೇಶಗಳಲ್ಲಿರುವ ಭಾರತೀಯರು ಕೈಜೋಡಿಸಬೇಕು ಎಂದು ಅಂಕಣಕಾರ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮನವಿ ಮಾಡಿದ್ದಾರೆ.
ಕನ್ನಡಿಗರು ದುಬೈ ಬಳಗದವರು ಶುಕ್ರವಾರದಂದು ದುಬೈಯ ಜಿಎಸ್ಎಸ್ ಸ್ಕೂಲ್ನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಗೀತ ಸೌರಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತದ ಸ್ಥಿತಿಗತಿ ನೋಡಿದರೆ ಹಿಂದಿನಂತಿಲ್ಲ. ಕ್ಷಿಪ್ರಗತಿಯಲ್ಲಿ ಭಾರತ ಬೆಳವಣಿಗೆಯನ್ನು ಕಾಣುವ ಮೂಲಕ ವಿಶ್ವದ ಇತರ ದೇಶಗಳನ್ನು ನಿಬ್ಬೆರಗುಗೊಳಿಸಿದೆ. ಭಾರತದ ಅಭಿವೃದ್ಧಿ, ಬೆಳವಣಿಗೆಯನ್ನು ನೋಡಿದರೆ ಮುಂದೆ ಭಾರತ ಉತ್ತುಂಗದ ಶಿಖರವನೇರುವುದು ಖಚಿತ. ಇಂಥ ಸಂದರ್ಭದಲ್ಲಿ ದುಬೈ, ಗಲ್ಫ್ ರಾಷ್ಟ್ರ ಸೇರಿದಂತೆ ವಿದೇಶಗಳಲ್ಲಿ ನೆಲೆಯೂರಿರುವ ಭಾರತೀಯರು ತಮ್ಮ ದೇಶದ ಒಳಿತಿಗಾಗಿ ತಮ್ಮ್ಮ ತಮ್ಮ ಹಳ್ಳಿ, ಊರಿನ ಅಭಿವೃದ್ಧಿಯ ದಿಸೆಯಲ್ಲಿ ಕೈಯಲ್ಲಾದಷ್ಟು ಸಹಾಯ, ಸಹಕಾರವನ್ನು ನೀಡಬೇಕು. ಇದು ನಮ್ಮ ದೇಶ ಪ್ರೇಮದ ಭಾಗವೂ ಆಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕನ್ನಡ ಭಾಷೆ ನಮ್ಮ ತಾಯಿ ಭಾಷೆ. ಬೇರು ಭಾಷೆಯನ್ನು ಗಟ್ಟಿಗೊಳಿಸಲು, ಸಂಸ್ಕೃತಿಯನ್ನು ಉಳಿಸಲು ತಮ್ಮ ಮಕ್ಕಳಿಗೆ ಮನೆಯಲ್ಲಿ ಕನ್ನಡ ಭಾಷೆಯನ್ನು ಕಲಿಸಬೇಕು. ಇದರಿಂದ ಭಾಷೆಯ ಉಳಿವಿನ ಜೊತೆಗೆ ನಮ್ಮ ಸಂಬಂಧ ಕೂಡ ಗಟ್ಟಿಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆಯವರನ್ನು ಮೈಸೂರು ಪೇಟ, ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜೊತೆಗೆ ದುಬೈಯಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಈರಣ್ಣ ಮೂಲಿಮಣಿ, ಸದನ್ದಾಸ್ರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಸಂಗೀತ ಸೌರಭ ಕಾರ್ಯಕ್ರಮದ ಮೂಲಕ ಎಲ್ಲರ ಮನರಂಜಿಸಿದ ಖ್ಯಾತ ಗಾಯಕಿ ಇಂಚರ ರಾವ್ ಹಾಗೂ ಅವರ ತಂಡದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಇದಕ್ಕೂ ಮೊದಲು ನಡೆದ ಉದ್ಘಾಟನಾ ಸಮಾರಂಭವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಕನ್ನಡಿಗರು ದುಬೈಯ ಅಧ್ಯಕ್ಷೆ ಉಮಾ ವಿದ್ಯಾಧರ್, ಸದನ್ದಾಸ್, ವಿರೇಂದ್ರ ಬಾಬು, ಡಾ.ಶಿವಕುಮಾರ್, ಪ್ರೇಮನಾಥ್ ಶೆಟ್ಟಿ, ಮಲ್ಲಿಕಾರ್ಜುನ ಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು. ಮಾಧವಿ ಪ್ರಸಾದ್ ಹಾಗೂ ಗೌತಮ್ ಕಾರ್ಯಕ್ರಮವನ್ನು ನಿರೂಪಿಸಿದರು.