ಕುವೈತ್ ಕನ್ನಡ ಕೂಟ (ಕು.ಕ.ಕೂ.) ನವೆಂಬರ್ 6, ಶುಕ್ರವಾರದಂದು ವಾರ್ಷಿಕ ಕಾರ್ಯಕ್ರಮವಾದ ’ಕರ್ನಾಟಕ ರಾಜ್ಯೋತ್ಸವ-2015’ ವನ್ನು ಕೇಂಬ್ರಿಜ್ ಸ್ಕೂಲ್, ಮಂಗಾಫ್, ಕುವೈತ್ ನಲ್ಲಿ ಸಂಭ್ರಮ, ಸಡಗರದಿಂದ ಆಚರಿಸಿದರು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ದೇಶದ ದಂತಕಥೆ ಖ್ಯಾತಿಯ ಪದ್ಮಶ್ರೀ ಶ್ರೀಮತಿ ಸುಧಾ ನಾರಾಯಣ ಮೂರ್ತಿ ಮತ್ತು ಕಾರ್ಯಕಾರಿ ಸಮಿತಿಯವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಕೂಟದ ಅಧ್ಯಕ್ಷ ಸುದೀರ್ ಶೆಣೈಯವರು ತಮ್ಮ ಅಧ್ಯಕ್ಷರ ಭಾಷಣದಲ್ಲಿ ಕೂಟ ನೆಡೆದು ಬಂದ ಹಾದಿ ಮತ್ತು ಬೆಳವಣಿಗೆ, ಸರ್ವತೋಮುಖ ಅಭಿವೃದ್ಧಿ, ಸದಸ್ಯರ ಸರ್ವ ಸಹಕಾರವನ್ನು ಶ್ಲಾಘಿಸಿದರು. ಉಪಾಧ್ಯಕ್ಷ ಗಿರೀಶ್ ಶೆಣೈ, ಕಾರ್ಯದರ್ಶಿ ದೀಪಕ್ ಕಟ್ಟಿ, ಮತ್ತು ಖಜಾಂಚಿ ಕಿರಣ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ನೆಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ವಿಘ್ನ ನಿವಾರಕನಾದ ಗಣಪತಿ ಸ್ತುತಿಯ ಪ್ರಾರ್ಥನಾ ನೃತ್ಯ, ಮಕ್ಕಳು, ಮಹಿಳೆಯರು ಹಾಗೂ ಸದಸ್ಯರಿಂದ ಹಾಡು, ನೃತ್ಯ, ಪ್ರಹಸನ, ಕಿರು ನಾಟಕಗಳ ವಿವಿಧ ವಿನೋದಾವಳಿಗಳನ್ನು ಪ್ರದರ್ಶಿಸಿ ನೆರೆದವರ ಮನರಂಜಿಸಿದರು. ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಹಾಗೂ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ವೀರರ ಬಗ್ಗೆ, ಕನ್ನಡ ನಾಡಿನ ಅಭಿವೃದ್ಧಿಯ ಬಗ್ಗೆ ದುಡಿದ ಮಹನೀಯರು ಹಾಗೂ ಮಹಿಳೆಯರಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸ್ಮರಿಸಿ ನಮನ ಸಲ್ಲಿಸಲಾಯಿತು. ಸುಧಾ ಮೂರ್ತಿಯವರ ಈ ಹಿಂದಿನ ಭಾಷಣದಿಂದ ಸ್ಫೂರ್ತಿಗೊಂಡು ಅವರಿಗೆ ಅರ್ಪಣೆಗೊಳಿಸಿದ, ಮಹಿಳೆಯರಿಂದ ನೆಡೆದ ಹೆಣ್ಣು ಭ್ರೂಣ ಹತ್ಯೆಯ ವಿರೋಧ, ಹೆಣ್ಣು ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯದ ಖಂಡನೆ, ಹೆಣ್ಣು ಮಕ್ಕಳು, ಮಹಿಳೆಯರ ಸಶಕ್ತೀಕರಣದ ಬಗ್ಗೆ, ಮಹಿಳೆಯರ ಪ್ರಾಮುಖ್ಯತೆ ಚಿತ್ರಿಸುವ ನಾಟಕವು ಸಮಾಜಕ್ಕೆ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.
ತಮ್ಮ ಭಾಷಣದಲ್ಲಿ, ಸುಧಾ ಮೂರ್ತಿಯವರು ತಮ್ಮ ಜೀವನದ ಹಲವಾರು ಅನುಭವಗಳನ್ನು ಉಲ್ಲೇಖಿಸಿದರು ಮತ್ತು ನಿರ್ದಿಷ್ಟವಾಗಿ ಕರ್ನಾಟಕದ ಇತಿಹಾಸದ ಬಗ್ಗೆ ವಿವರಿಸಿದರು. ಕಂಪ್ಯೂಟರ್ ತಂತ್ರಾಂಶ ತನ್ನ ಉದ್ಯೋಗವಾದರೂ ತನ್ನ ನೆಚ್ಚಿನ ವಿಷಯ ಇತಿಹಾಸ ಮತ್ತು ಈ ಭೂಮಿಯ ಉದ್ದಗಲಗಳಲ್ಲೂ ಪ್ರಯಾಣಿಸುತ್ತಾ ಐತಿಹಾಸಿಕ, ಭೌಗೋಳಿಕ ಅನುಭವಗಳನ್ನು ಇಷ್ಟಪಡುತ್ತೇನೆ, ರಾಜರುಗಳ ಕಾಲದಲ್ಲೆ ಕರ್ನಾಟಕದ ಹಲವಾರು ಅರಸರು, ಸೇನಾನಿಗಳು, ಇತರ ಜನರು ಬೇರೆ ರಾಜ್ಯಗಳಲ್ಲಿ ತಳವೂರಿ ಅಲ್ಲಿ ಆಡಳಿತ ನೆಡೆಸಿದ್ದನ್ನು, ಜೀವನ ಮಾಡಿದ್ದನ್ನು ಅವರವರ ಉಪನಾಮಗಳ ಸಮೇತ ಉಲ್ಲೇಖಿಸಿದರು. ನಮ್ಮ ’ಬಾಲಿವುಡ್’ ವಿಶ್ವದಾದ್ಯಂತ ಹೇಗೆ ಜನಪ್ರಿಯವಾಗಿದೆ ಆ ಮೂಲಕ ವಿವಿಧ ದೇಶದ ಜನರ ಸಂಪರ್ಕದ ಕೊಂಡಿಯಾಗಿದೆ ಎಂಬುದನ್ನು ವಿವರಿಸಿದರು. ಭಾರತದ ಹೊರಗೆ ಕರ್ನಾಟಕ ರಾಜ್ಯೋತ್ಸವ ದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ ಎಂಬುದನ್ನು ಒತ್ತಿ ಹೇಳಿದರು.
ಕಾರ್ಯಕ್ರಮದ ಪ್ರಾಯೋಜಕರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವು ಕಾರ್ಯದರ್ಶಿ ದೀಪಕ್ ಕಟ್ಟಿಯವರ ಧನ್ಯವಾದ ಸಮರ್ಪಣೆ ಯೊಂದಿಗೆ ನಂತರ ಓರಿಯಂಟಲ್ ರೆಸ್ಟೋರೆಂಟ್ ರವರ ಸೊಗಸಾದ ಭೋಜನದೊಂದಿಗೆ ಸಮಾಪನಗೊಂಡಿತು.
ಚಿತ್ರ ಮತ್ತು ವರದಿ: ಸುರೇಶ್ ನೇರಂಬಳ್ಳಿ, ಕುವೈತ್.