ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ದುಬೈ, ನ.15: ಪ್ರಸಕ್ತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತನಿಖಾ ವರದಿಗಾರಿಕೆ ಎಂಬುದು ಒಂದು ಬಹುದೊಡ್ಡ ಸವಾಲು. ವಿವಿಧ ರೀತಿಯ ಅಡೆ-ತಡೆಗಳ ಮಧ್ಯೆ ಎದೆಗಾರಿಕೆಯಿಂದ ಮುನ್ನುಗ್ಗಿ ಎಂಥ ಸನ್ನಿವೇಶದಲ್ಲೂ ಎದೆಗುಂದದೆ ಭ್ರಷ್ಟ ರಾಜಕಾರಣಿ-ಅಧಿಕಾರಿಗಳನ್ನು, ಕಳ್ಳ-ಪೋಕರಿಗಳ ದಂದೆಯನ್ನು ಬಯಲಿಗೆಳೆಯುವುದು ಸಾಹಸದ ಕಾರ್ಯವೇ ಸರಿ. ತನ್ನ ಇಂಥ ಕಾರ್ಯಾಚರಣೆಯಿಂದ ಆತ್ಮತೃಪ್ತಿಯ ಜೊತೆ ಸಾಮಾಜಿಕ ಕಳಕಳಿಯೂ ಅಡಕವಾಗಿದೆ ಎಂದು ಸುವರ್ಣ ಸುದ್ದಿ ವಾಹಿನಿಯ ತನಿಖಾ ವರದಿ ವಿಭಾಗದ ಮುಖ್ಯಸ್ಥೆಯಾಗಿರುವ ವಿಜಯಲಕ್ಷ್ಮಿ ಶಿಬರೂರು ಹೇಳಿದ್ದಾರೆ.
ದುಬೈಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯುಎಇ ಹವ್ಯಾಸಿ ಹಾಗೂ ವೃತ್ತಿನಿರತ ಕರ್ನಾಟಕ ಪತ್ರಕರ್ತರ ಬಳಗ ಕಿಸೆಸ್ನ ಫೋರ್ಚುನ್ ಪ್ಲಾಝಾ ಹೊಟೇಲ್ನ ಸಭಾಂಗಣದಲ್ಲಿ ಶುಕ್ರವಾರದಂದು ಯುಎಇಯಲ್ಲಿರುವ ಹವ್ಯಾಸಿ ಹಾಗೂ ವೃತ್ತಿನಿರತ ಪತ್ರಕರ್ತರಿಗಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಪತ್ರಿಕೋದ್ಯ ಹಾಗೂ ತನಿಖಾ ವರದಿಗಾರಿಕೆ ಕುರಿತು ಮಾತನಾಡುತ್ತಿದ್ದರು.
ತನಿಖಾ ವರದಿಗಾರಿಕೆಯ ವೇಳೆ ಭ್ರಷ್ಟರು, ಮೋಸಗಾರರನ್ನು ಬಯಲಿಗೆಳೆಯುವ ಸಂದರ್ಭದಲ್ಲಿ ಎದುರಿಸಿದಂಥ ಸನ್ನಿವೇಶ, ತನಿಖೆಯ ವೇಳೆ ಅವರಿಂದ ತಪ್ಪಿಸಿಕೊಂಡು ಬಚಾವಾದ ರೀತಿಯನ್ನು ವಿಜಯಲಕ್ಷ್ಮಿ ಶಿಬರೂರು ಮೆಲುಕುಹಾಕಿದರು.
ಪತ್ರಕರ್ತರು ಯಾವುದೇ ರೀತಿಯ ಒತ್ತಾಸೆಗೆ ಬಲಿಯಾಗದೆ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಇಡೀ ಸಮಾಜವನ್ನೇ ಬದಲಿಸಬಹುದು. ಅವರು ನಡೆಯುವ ಪ್ರತಿಯೊಂದು ಹೆಜ್ಜೆಯನ್ನು ಇತರರು ಗುರುತಿಸುವುದರೊಂದಿಗೆ ಕಿರಿಯ ಪತ್ರಕರ್ತರು ಅದನ್ನು ನೋಡಿಕೊಂಡು ಮುಂದೆ ಸಾಗುವಂತಾಗಬೇಕು ಎಂದು ಕಿವಿ ಮಾತೇಳಿದರು.
ಈ ವೇಳೆ ನೆರೆದ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ವಿಜಯಲಕ್ಷ್ಮಿ, ಪ್ರಸಕ್ತ ಪತ್ರಿಕೋದ್ಯಮ ಅಧಃಪತನದಂಚಿನಲ್ಲಿದೆ. ಕೆಲವು ಪತ್ರಕರ್ತರು ಹಣದ ವ್ಯಾಮೋಹಕ್ಕೆ ಬಲಿಯಾಗಿ ತಮ್ಮತನವನ್ನೆ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಜನರು ಪತ್ರಕರ್ತರೆಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯಲ್ಲಿದ್ದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ ಹಾಗೂ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಮಾಲಕ ಪ್ರವೀಣ್ ಶೆಟ್ಟಿಯವರು ಯುಎಇಯಲ್ಲಿನ ಪತ್ರಕರ್ತರ ಕುರಿತು ಮಾತನಾಡಿದರು. ಇದೇ ವೇಳೆ ಯುಎಇ ಪತ್ರಿಕೋದ್ಯಮದ ಕುರಿತು ಶೋಧನ್ ಪ್ರಸಾದ್, ಮನೋಹರ್ ತೋನ್ಸೆ, ಹರ್ಮನ್ ಲೂಯಿಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕವಿ, ಲೇಖಕ ಇರ್ಷಾದ್ ಮೂಡಬಿದ್ರೆಯವರು ವಿಜಯಲಕ್ಷ್ಮಿ ಶಿಬರೂರು ಕುರಿತು ಬರೆದ ತಮ್ಮ ಕವಿತೆಯನ್ನು ವಾಚಿಸಿದರು. ಲೇಖಕ ಗಣೇಶ್ ರೈ ಅವರು ವಿಜಯಲಕ್ಷ್ಮಿ ಶಿಬರೂರುರ ಸನ್ಮಾನದ ವೇಳೆ ಅವರ ಪರಿಚಯ ಹಾಗೂ ನಿರೂಪಣೆ ಮಾಡಿದರು. ಕಾರ್ಯಕ್ರಮದ ಸಂಘಟಕ ಹಾಗೂ ಯುಎಇ ಹವ್ಯಾಸಿ ಹಾಗೂ ವೃತ್ತಿನಿರತ ಕರ್ನಾಟಕ ಪತ್ರಕರ್ತರ ಬಳಗದ ವಿನಯ್ ನಾಯಕ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಿವೇಕ್ ಧನ್ಯವಾದ ಸಮರ್ಪಿಸಿದರು.