ಕೊಣಾಜೆ, ನ.15: ಮಂಗಳೂರಿನಿಂದ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನೊಬ್ಬನಿಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಕೊಣಾಜೆ ಸಮೀಪದ ಬಬ್ಬುಕಟ್ಟೆ ಬಳಿ ಶನಿವಾರ ರಾತ್ರಿ ನಡೆದಿದೆ.
ಇರಿತಕ್ಕೊಳಗಾದ ಯುವಕನನ್ನು ಪಾವೂರು ಇನೋಳಿ ನಿವಾಸಿ ಧೀರಜ್ (24) ಎನ್ನಲಾಗಿದೆ. ಇವರು ಎಂದಿನಂತೆ ಕೆಲಸ ಮುಗಿಸಿಕೊಂಡು ಮಂಗಳೂರಿನಿಂದ ಮಿತ್ರ ಶಿತೇಶ್ ಜೊತೆಗೆ ಬೈಕ್ನಲ್ಲಿ ಮನೆ ಕಡೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಇವರ ಬೈಕ್ ಬಬ್ಬುಕಟ್ಟೆ ಬಳಿ ತಲುಪಿದಾಗ ಕಪ್ಪು ಬಣ್ಣದ ಪಲ್ಸರ್ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳಿಬ್ಬರು ಹಿಂಬದಿ ಸವಾರರಾಗಿದ್ದ ಧೀರಜ್ಗೆ ಚೂರಿಯಿಂದ ಇರಿಯಲು ಯತ್ನಿಸಿದ್ದಾರೆ. ಇದನ್ನು ತಪ್ಪಿಸುವ ಪ್ರಯತ್ನದಲ್ಲಿ ಧೀರಜ್ರ ಕೈಗೆ ತೀವ್ರ ಗಾಯಗಳಾಗಿವೆ. ದುಷ್ಕರ್ಮಿಗಳು ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ.
ಗಾಯಾಳುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂದುವರಿದ ನಿಷೇಧಾಜ್ಞೆ:
ಮಂಗಳೂರು : ದ.ಕ. ಜಿಲ್ಲಾದ್ಯಂತ ಶುಕ್ರವಾರದಿಂದ ವಿಧಿಸಲಾಗಿರುವ ನಿಷೇಧಾಜ್ಞೆ ರವಿವಾರ ರಾತ್ರಿಯವರೆಗೆ ಮುಂದುವರಿಯಲಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಹಿಂದೂಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ದ.ಕ. ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವೆಡೆ ಚೂರಿ ಇರಿತ, ಕಲ್ಲು ತೂರಾಟಗಳ ಸಹಿತ ಹಿಂಸಾಚಾರ ನಡೆದಿದ್ದು, ಶನಿವಾರ ಕೂಡ ಕೆಲವೆಡೆ ಅಹಿತಕರ ಘಟನೆಗಳು ವರದಿಯಾಗಿವೆ.
ಈ ನಡುವೆ ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗೃತಾ ಕ್ರಮವಾಗಿ ರಾತ್ರಿ 8:30ರೊಳಗೆ ಅಂಗಡಿಗಳನ್ನು ಮುಚ್ಚುವಂತೆ ಸಂಜೆಯೇ ಸೂಚಿಸಿದ್ದರು.
ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ನಡೆಯುತ್ತಿರುವ ಹಿಂಸಾಚಾರ ಕಾರಣ ಜನರಲ್ಲಿ ಆತಂಕ ಮನೆ ಮಾಡಿದೆ. ಸಂಜೆಯ ಬಳಿಕ ನಗರದಲ್ಲಿ ಜನಸಂಖ್ಯೆ ವಿರಳವಾಗಿತ್ತು. ಅಲ್ಲದೆ, ಮಂಗಳೂರಿನಿಂದ ಹೊರಡುವ ಕೆಲವು ಸಿಟಿ ಬಸ್ಗಳು ಸಂಜೆಯೇ ಸಂಚಾರ ಸ್ಥಗಿತಗೊಳಿಸಿದ್ದವು. ಇದರಿಂದ ಸಂಜೆ ನಗರದಲ್ಲಿ ಉಳಿದ ಪ್ರಯಾಣಿಕರು ಪರದಾಡಿದರು. ರಾತ್ರಿ 8ರೊಳಗೆ ಹೆಚ್ಚಿನ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಒಟ್ಟಾರೆ ನಿಷೇಧಾಜ್ಞೆ ಜನರ ಭೀತಿಯನ್ನು ಹೆಚ್ಚಿಸಿದೆ.
ಫೆಸ್ಬುಕ್, ವಾಟ್ಸಪ್ಗಳ ಮೂಲಕ ಸುಳ್ಳು ವದಂತಿಹಬ್ಬಿಸುವವರ ವಿರುದ್ಧ ಕಠಿಣ ಕ್ರಮ : ಎಸ್ಪಿ ಎಚ್ಚರಿಕೆ
ಪುತ್ತೂರು: ಸಾಮಾಜಿಕ ಜಾಲತಾಣಗಳ ಮೂಲಕ ಅಶಾಂತಿ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದ್ದು, ವಾಟ್ಸಪ್ ಮತ್ತು ಫೇಸ್ಬುಕ್ಗಳ ಮೂಲಕ ಕಪೋಲಕಲ್ಪಿತ ವದಂತಿಗಳನ್ನು ರವಾನಿಸಿ ಸಾರ್ವಜನಿಕರಿಗೆ ತಪ್ಪುಸಂದೇಶ ಕಳುಹಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಎಸ್.ಡಿ.ಶರಣಪ್ಪಹೇಳಿದ್ದಾರೆ.
ಶುಕ್ರವಾರ ಅಹಿತಕರ ಘಟನೆಗಳು ನಡೆದ ಗೋಳಿತೊಟ್ಟು, ಸವಣೂರು ಮತ್ತಿತರ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆ ಶಾಂತ ಸ್ಥಿತಿಗೆ ಮರಳುತ್ತಿದೆ. ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರ ತನಿಖಾ ಕ್ರಮ ಆರಂಭಗೊಂಡಿದೆ ಎಂದರು.