ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾಜಿ ಸಿಎಂ ಯಡಿಯೂರಪ್ಪ-ಶೋಭಾ ಕರಂದ್ಲಾಜೆ: ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿಯಿಂದ ಪ್ರವಚನ
ದುಬೈ, ಸೆ.13: ಯುಎಇಯ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ನೇತೃತ್ವದಲ್ಲಿ ದುಬೈಯಲ್ಲಿ ಪ್ರಥಮ ಬಾರಿಗೆ ಕನ್ನಡಪರ ಸಾರ್ವಜನಿಕ ಶ್ರೀ ಗಣೇಶ ಉತ್ಸವ ಸೆ.18ರ ಶುಕ್ರವಾರದಂದು ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ಅಲ್ ಬರ್ಶಾದಲ್ಲಿರುವ ಜೆಎಸ್ಎಸ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಜರಗಲಿದೆ.
ಸಾರ್ವಜನಿಕ ಶ್ರೀ ಗಣೇಶ ಉತ್ಸವದ ಕುರಿತು ಶನಿವಾರ ರಾತ್ರಿ ದುಬೈ ಗೀಸೆಸ್ನ ದುಬೈ ಗ್ರಾಂಡ್ ಹೊಟೇಲ್ನಲ್ಲಿ ನಡೆದ ವಿವಿಧ ಕನ್ನಡ-ತುಳು ಸಂಘಟನೆಗಳ ಪದಾಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಂಘಟಕರು ತಿಳಿಸಿದರು.
ಪ್ರತಿಷ್ಠಾಪನೆ, ಮಹಾ ಮಂಗಳಾರತಿ, ಮಹಾಪ್ರಸಾದ ವಿತರಣೆ, ಭಕ್ತಿಗೀತೆ-ಪ್ರವಚನ, ಸಭಾ ಕಾರ್ಯಕ್ರಮ, ವಿಸರ್ಜನೆ ಪೂಜೆ ನಡೆಯಲಿದೆ. ಪೂಜೆಯಲ್ಲಿ ಶ್ರೀ ಕ್ಷೇತ್ರ ಮರಕಡದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಪ್ರವಚನಗೈಯ್ಯಲಿದ್ದಾರೆ.
ಪೂಜಾ ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವೆ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಹಾಗೂ ಉದಯವಾಣಿ ಪತ್ರಿಕೆಯ ನ್ಯೂಸ್ ಬ್ಯೂರೋ ಮುಖ್ಯಸ್ಥ ಮನೋಹರ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದುಬೈ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಚೇರ್ಮೆನ್ ಹಾಗೂ ಸಾರ್ವಜನಿಕ ಶ್ರೀ ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರವೀಣ್ ಶೆಟ್ಟಿ, ದುಬೈ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಚಿಲ್ಲಿವಿಲಿಯ ಸತೀಶ್ ವೆಂಕಟರಮಣ ಹಾಗೂಸಾರ್ವಜನಿಕ ಶ್ರೀ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಅಂಬಲತೆರೆ ಹಾಗೂ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ ಹಾಜರಿದ್ದರು.
ಇದಕ್ಕೂ ಮೊದಲು ನಡೆದ ಪೂರ್ವಭಾವಿ ಸಭೆಯನ್ನು ದೀಪ ಬೆಳಗಿಸುವ ಮೂಲಕ ಅತಿಥಿಗಳು ಉದ್ಘಾಟಿಸಿದರು. ಸಭೆಯಲ್ಲಿ ಸಾರ್ವಜನಿಕ ಶ್ರೀ ಗಣೇಶ ಉತ್ಸವ ಆಚರಣೆ ಮಾಡುವ ಕುರಿತು ಚರ್ಚಿಸಲಾಯಿತು.
ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್, ಸತೀಶ್ ವೆಂಕಟರಮಣ, ಪ್ರಭಾಕರ ಅಂಬಲತೆರೆ ಹಾಗೂ ಸರ್ವೋತಮ ಶೆಟ್ಟಿ ಮಾತನಾಡಿ, ಗಣೇಶೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸುವ ಕುರಿತು ಹಾಗೂ ಪೂಜಾ ವಿಧಿವಿಧಾನಗಳು ಹಾಗೂ ಕಾರ್ಯಕ್ರಮವನ್ನು ಸಂಘಟಿಸುವ ಕುರಿತು ಸಮಾಲೋಚನೆ ನಡೆಸಿದರು. ಈ ವೇಳೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ವಿವಿಧ ಕನ್ನಡಪರ, ತುಳು ಸಂಘಟನೆಗಳ ಪದಾಧಿಕಾರಿಗಳು ಕೂಡಾ ಸಲಹೆ-ಸೂಚನೆಗಳನ್ನು ನೀಡಿದರು. ಬರಹಗಾರ, ಲೇಖಕ ಹಾಗೂ ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಗಣೇಶ್ ರೈ, ರೇಡಿಯೋ ಸ್ಪೈಸ್ನ ಹರ್ಮನ್ ಲೂಯಿಸ್ ಸೇರಿದಂತೆ ಮತ್ತಿತರರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.