ಕರಾವಳಿ

ಚಾಕುವಿನಿಂದ ಇರಿತ: ಮಂಗಳೂರು ಮೂಲದ ಕಾಲ್‌ಸೆಂಟರ್ ಉದ್ಯೋಗಿಯ ಕೊಲೆ

Pinterest LinkedIn Tumblr

choori

ಬೆಂಗಳೂರು,ಆ.31: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಗಳ ಕಾಲ್‌ಸೆಂಟರ್ ಉದ್ಯೋಗಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಮಂಗಳೂರಿನ ಶಶಾಂಕ್(26) ಕೊಲೆಯಾದ ದುರ್ದೈವಿ. ರಾಮಮೂರ್ತಿನಗರದಲ್ಲಿ ವಾಸವಾಗಿದ್ದ ಶಶಾಂಕ್ ಕಾಲ್‌ಸೆಂಟರ್ ಉದ್ಯೋಗಿಯಾಗಿದ್ದು , ಇಂದು ಮುಂಜಾನೆ 2.30ರಲ್ಲಿ ಸ್ನೇಹಿತರೊಂದಿಗೆ ಮನೆ ಸಮೀಪದ ಸಿಗ್ನಲ್ ಬಳಿಯ ಅಂಗಡಿಯಲ್ಲಿ ಟೀ ಕುಡಿಯಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಟೀ ಅಂಗಡಿ ಬಳಿ ನಾಲ್ವರು ಯುವಕರು ಟೀ ಕುಡಿಯುತ್ತಾ ಸಿಗರೇಟ್ ಸೇದುತ್ತಿದ್ದರು. ಶಶಾಂಕ್ ಸ್ನೇಹಿತರು ಟೀ ಕುಡಿಯುತ್ತಿದ್ದ ವೇಳೆ ಸಿಗರೇಟ್ ಹೊಗೆ ಇವರ ಬಳಿ ಬರುತ್ತಿದ್ದುದನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಎರಡೂ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದಾಗ ಶಶಾಂಕ್ ಸ್ನೇಹಿತ ಒಬ್ಬಾತನಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಎದುರು ಗುಂಪಿನವರೂ ಇವರ ಕಡೆಯವರಿಗೆ ಹೊಡೆದು ತದನಂತರ ಚಾಕುವಿನಿಂದ ಶಶಾಂಕ್ ಹೊಟ್ಟೆಗೆ ಇರಿದಿದ್ದಾರೆ. ತಕ್ಷಣ ಶಶಾಂಕ್‌ನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು , ಪರಾರಿಯಾಗಿರುವ ಇನ್ನಿಬ್ಬರಿಗಾಗಿ ತನಿಖೆ ಮುಂದುವರೆದಿದೆ. ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

Write A Comment