ಅಂತರಾಷ್ಟ್ರೀಯ

ವಿಶ್ವ ವಿಸ್ಮಿತಗೊಂಡ ವಿಶಿಷ್ಠ ಮೇದಾವಿ ಡಾ. ಅಬ್ದುಲ್ ಕಲಾಂಗೆ ವಿಶ್ವ ಭಾರತೀಯರ ಅಂತಿಮ ಸಲಾಂ

Pinterest LinkedIn Tumblr

Abdul kalam-July 28_2015-006

ಭವ್ಯ ಭಾರತದ 11 ನೇ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ನಿವೃತ್ತಿಯ ನಂತರವೂ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಾ ತನ್ನ ಕೊನೆ ಉಸಿರಿನವರೆಗೂ ಕರ್ತವ್ಯನಿರತರಾಗಿದ್ದು 2015 ಜುಲೈ 27 ರಂದು ಇಹಲೋಕವನ್ನು ತ್ಯಜಿಸಿದ್ದಾರೆ. ಭಾರತ ಕಂಡ ಮಹಾನ್ ದಿವ್ಯ ಚೇತನಕ್ಕೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಸಾಧನೆಯ ಹೆಜ್ಜೆಗುರುತನ್ನು ಅವಲೋಕಿಸುವ ಒಂದು ಗೌರವಪೂರ್ವ ಲೇಖನ…

ದಕ್ಷಿಣ ಭಾರತದ ರಾಮೇಶ್ವರದ ಕಡಲ ಕಿನಾರೆಯ ಪಕ್ಕದ ಹಳ್ಳಿಯೊಂದರಲ್ಲಿ 1931 ರಲ್ಲಿ ಜನಿಸಿದ ಅಬ್ದುಲ್ ಕಲಾಂ ಮುಗ್ದತೆಯಲ್ಲಿ ಅರಳಿದ ಅಪ್ರತಿಮ ಪ್ರತಿಭೆ. ಪ್ರಶಾಂತ ಕಡಲು, ತಂಪು ತಂಗಾಳಿ ಸಾಗರದ ಅಲೆಗಳ ನಿನಾದದ ನಡುವೆ ಏಕಾಂಗಿಯಾಗಿ ಮರಳ ದಂಡೆಯ ಮೇಲೆ ಕುಳಿತು ಕನಸು ಕಾಣುತ್ತಲೇ ಬೆಳೆದ ಕಲಾಂ ಮದ್ರಾಸಿನ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಎರೋನಾಟಿಕ್ಸ್ ಇಂಜಿನೀಯರಿಂಗ್ ಮುಗಿಸಿ ಉದ್ಯೋಗಾಕಾಂಕ್ಷಿಯಾಗಿದ್ದ ಇವರಿಗೆ ಏಕ ಕಾಲದಲ್ಲಿ ಎರಡು ಕಡೆಗೆ ಉದ್ಯೋಗಕ್ಕೆ ಸಂದರ್ಶನಕ್ಕೆ ಹೋಗುವ ಅವಕಾಶ ಲಭ್ಯವಾಯಿತು.

Abdul kalam-July 28_2015-016

ತಮ್ಮ ನೆಚ್ಚಿನ ಭಾರತೀಯ ವಾಯು ಪಡೆಯ ಪೈಲೆಟ್ ಆಗಲು ಇನ್ನೊಂದು ರಕ್ಷಣಾ ಇಲಾಖೆಯಲ್ಲಿ ಸಹಾಯಕ ಸಂಶೋಧಕರಾಗಲು. ರಕ್ಷಣಾ ಇಲಾಖೆಗೆ ದೆಹಲಿ, ಪೈಲೆಟಿಗಾಗಿ ಡೆಹರಡೂನಿನಿಗೆ ಸಂದರ್ಶನಕ್ಕಾಗಿ ಮದ್ರಾಸಿನಿಂದ ಗ್ರಾಂಡ್ ಟ್ರಂಕ್ ಎಕ್ಸ್ ಪ್ರೆಸ್ಸ್ ರೈಲಿನಲ್ಲಿ ದೆಹಲಿಗೆ ಪ್ರಯಾಣ, ದೆಹದ ತುಂಬಾ ಪುಳಕ,ಕಾತರ, ಭಯ, ಹಳ್ಳಿಗಾಡಿನಲ್ಲಿ ಬೆಳೆದು ಮೊದಲ ಬಾರಿಗೆ ದೆಹಲಿಯಂತ ಮಹಾನಗರಕ್ಕೆ ಹೋಗುವಾಗ ಕೀಳರಿಮೆ, ಮುಜುಗರಗಳ ಸಂಘರ್ಷಕ್ಕೆ ಸಿಕ್ಕಿ ಕಂಪಿಸುವ ಅನುಭವ, ಇದ್ಯಾವುದರ ಪರಿವೆ ಇಲ್ಲದ ರೈಲು ಚಲಿಸುತಿತ್ತು. ರೈಲಿನ ತೆರೆದ ಕಿಟಕಿಗಳ ಮೂಲಕ ಹೊರಗಿನ ದೃಶ್ಯಗಳನ್ನು ನೋಡುತ್ತಾ ನೋಡುತ್ತಾ ಕಲಾಂರು ಕಲ್ಪನೆಯಲ್ಲಿ ಮುಳುಗಿಹೋಗಿದ್ದರು. ತನ್ನ ಮನೆ, ಊರು, ಗೆಳೆಯರನ್ನು, ಕಡಲು, ಕಾಡು ಬಿಟ್ಟು ಹೊರಟಿದ್ದ ಕಲಾಂಗೆ ಮೊದಲ ಬಾರಿಗೆ ದಕ್ಷಿಣದಿಂದ ಉತ್ತರದವರೆಗೆ ಹಬ್ಬಿರುವ ತಾಯಿನಾಡಿನ ಅಗಾಧತೆಯ ಪರಿಚಯವಾಗಿತ್ತು. ಜಾತಿ, ಧರ್ಮ ಬೇರೆ ಬೇರೆ ಭಾಷೆ, ಬಣ್ಣ ಬೇರೆ ಬೇರೆಯದರೂ ದೇಶದ ಮಣ್ಣೆಲ್ಲಾ ಒಂದೇ ತರವಾಗಿತ್ತು. ಅಲ್ಲಿ ಕಾಣುವ ಜನರ ಬವಣೆ ಬಡತನ ಅನಕ್ಷರತೆ, ನೋವು ನಿರಾಸೆಗಳನ್ನು ಕಂಡರು, ಆದರೆ ಸ್ವತಂತ್ರ ಭಾರತದ ಎಲ್ಲಾ ಭಾರತೀಯರ ಕಣ್ಣಲ್ಲಿ ಹೊಂಗನಸುಗಳ ಬೆಳಕಿತ್ತು. ಅಂತಹ ಹೊಂಗನಸುಗಳನ್ನು ನನಸು ಮಾಡಬೇಕೆಂಬ ಛಲ ಭಾವನಾ ಜೀವಿ ಅಬ್ದುಲ್ ಕಲಾಂಗೆ ತುಂಬಿ ಕೊಂಡಿತ್ತು.

Abdul kalam-July 28_2015-001

Abdul kalam-July 28_2015-002

ರಕ್ಷಣಾ ಇಲಾಖೆಯ ಸಂದರ್ಶನ ಮೊದಲಿಗೆ ದೆಹಲಿಯಲ್ಲಿತ್ತು. ಅಬ್ದುಲ್ ಕಲಾಂಗೆ ಈ ಉದ್ಯೋಗದಲ್ಲಿ ಒಲವು ಕಡಿಮೆ ಇದ್ದರೂ ಉತ್ತಮ ರೀತಿಯಲ್ಲಿ ಸಂದರ್ಶನ ನೀಡಿ, ತಮ್ಮ ಕನಸಿನ ಉದ್ಯೋಗ ಡೆಹರಡೂನ್ನಲ್ಲಿ ಪೈಲೆಟ್ ಸಂದರ್ಶನಕ್ಕೆ ತೆರಳಿದರು. ಭಾರತೀಯ ವಾಯುಪಡೆ ಪ್ರತಿಭಾವಂತ 25 ಮಂದಿ ವೈಮಾನಿಕ ಇಂಜಿನೀಯರುಗಳನ್ನು ಆಯ್ದು ಸಂದರ್ಶನ ನಡೆಸಿತ್ತು. ಕಲಾಂರು 9ನೇ ಯವರಾಗಿ ಆಯ್ಕೆಯಾದರು. ದುರಾದೃಷ್ಟವೆಂದರೆ ಕೇವಲ ಎಂಟು ಮಂದಿ ಪೈಲೆಟ್ ಗಳಿ ಗೆ ಮಾತ್ರ ಅವಕಾಶವಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಅದಕ್ಕೂ ಮಿಗಿಲಾಗಿ ತಾನು ಎಂದೂ ಜೀವನದಲ್ಲಿ ಪೈಲೆಟ್ ಆಗಲಾರೆ ಎನ್ನುವ ಕಟು ಸತ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಹಳ್ಳಿಗಾಡಿನ ಮುಗ್ದ ಯುವಕ ಕಲಾಂರಲ್ಲಿ ಇರಲಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ವೈಪಲ್ಯದ ಬಂಡೆಯನ್ನು ತಲೆಯ ಮೇಲೆ ಹೊತ್ತಂತೆ ಖಿನ್ನ ಮನಸ್ಕರಾಗಿ ದೇಹವೆಲ್ಲಾ ಭಾರವಾದಂತೆ ಕೆಳಗೆ ನೋಡಿದರು. ಡೆಹರಾಡೂನಿನ ಗಿರಿಪಂಕ್ತಿಯ ಕೆಳಗೆ ಲೋಕಪಾವನೆ ಗಂಗೆ ತಣ್ಣನೆ ನಿರ್ಮಲವಾಗಿ ಹರಿಯುತಿದ್ದಳು. ಅಲ್ಲಿಂದ ಮುಂದೆ ಹೃಷಿಕೇಶದ ಪವಿತ್ರ ಯಾತ್ರಾ ಕ್ಷೇತ್ರವಿತ್ತು. ಭಾರವಾದ ಹೆಜ್ಜೆಯನಿಟ್ಟು ಗಂಗೆಯನ್ನು ಕಂಡೊಡನೆ, ತಾಯಿಯ ಮಡಿಲಲ್ಲಿ ಅಸಾಯಕ ಕಂದ ತಲೆಯಿಟ್ಟು ಅಳುವಂತೆ, ಗಂಗೆಯಲ್ಲಿ ಮಿಂದರು. ಸೋತ ಶರೀರಕ್ಕೆ ಚೈತನ್ಯ ಬಂದಂತಾಗಿ ಹೃಷಿಕೇಶದ ಆಶ್ರಮಕ್ಕೆ ನಡೆದು ಸ್ವಾಮಿ ಶಿವಾನಂದರ ಮುಂದೆ ಮೊರೆಹೊಕ್ಕರು. ಸ್ವಾಮಿಜಿಯ ಪ್ರಶಾಂತ ಮುಖ, ಅವರ ಸ್ವಾಂತನ ತುಂಬಿದ ಭರವಸೆಯ ಧ್ವನಿ ಅಬ್ದುಲ್ ಕಲಾಂರನ್ನು ಪೂರ್ಣ ಬದಲಾಯಿಸಿತ್ತು. ವೈಪಲ್ಯದಿಂದ ನಲುಗಿ ಹೋಗಿದ್ದ ಕಲಾಂ ತಾನೆಂದು ಆಕಾಶದಲ್ಲಿ ಪೈಲೆಟ್ ಆಗಿ ಹಕ್ಕಿಯಂತೆ ರೆಕ್ಕೆಬಿಚ್ಚಿ ಹಾರಲಾರದ ಅಳಲು ತೋಡಿಕೊಂಡಾಗ ವಾಸ್ತವ ಎಂಬುದು ನಿತ್ಯದ ಸತ್ಯವೆಂದು ಬದುಕನ್ನು ಬಂದಂತೆ ಸ್ವೀಕರಿಸುವುದೇ ಬದುಕೆಂದು ಸ್ವಾಮಿಜಿಯವರು ಭೋಧಿಸಿದರು. ಕಲಾಂ ಗೆ ಅವರ ಮಾತುಗಳು ಮನವರಿಕೆಯಾಗಿ ಅವರ ದೃಷ್ಟಿ ಕೋನವೇ ಬದಲಾಗಿತ್ತು. ಒಂದು ವೇಳೆ ಕಲಾಂ ರ ಇಚ್ಚೆಯಂತೆ ಅವರು ಪೈಲೆಟ್ ಆಗಿದಲ್ಲಿ ಇಂದು ನಮ್ಮ ಮುಂದಿರುವ ಅಗಾಧ ಸಾಧನೆಗಳ ಮೂಲಕ ಸದೃಡ ಭಾರತವನ್ನು ಕಟ್ಟಿದ ಮಹಾನ್ ವಿಜ್ಞಾನಿ ಭಾರತ ರತ್ನ ರೂಪುಗೊಳ್ಳದೆ ಭಾರತ ವಂಚಿತವಾಗುತಿತ್ತೇನೊ !

Abdul kalam-July 28_2015-004

Abdul kalam-July 28_2015-003

ಪೈಲೆಟ್ ಹುದ್ದೆಯಿಂದ ಕನಸು ಭಸ್ಮವಾಗಿ ವಂಚಿತರಾದ ಅಬ್ದುಲ್ ಕಲಾಂಗೆ ರಕ್ಷಣಾ ಇಲಾಖೆಯಿಂದ ಕರ್ತವ್ಯಕ್ಕೆ ಕರೆ ಬಂದು 1958 ರಲ್ಲಿ ಸೇವೆಗೆ ಸೇರ್ಪಡೆಯಾದರು. ನಂತರ 1963 ರಿಂದ 1982 ರ ವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದಲ್ಲಿ 19 ವರ್ಷಗಳ ಸುಧೀರ್ಘ ಸೇವೆ ಗೈದರು. ಡಾ. ಅಬ್ದುಲ್ ಕಲಾಂ ರಲ್ಲಿದ್ದ ಮಹಾನ್ ವಿಜ್ಞಾನಿಯ ಬಹು ಮುಖದ ದೈತ್ಯ ಶಕ್ತಿಯ ದರ್ಶನ ಇಸ್ರೋದಲ್ಲಾಯಿತು. ಪ್ರಾಕೃತಿಕ ಸಂಪತ್ತು, ಜನ ಸಂಪತ್ತಿನಿಂದ ಭಾರತ ಮುಂದುವರಿದ ರಾಷ್ಟ್ರಗಳಂತೆ ಸದೃಡವಾಗಿ ಬೆಳೆಯಬೇಕಾಗಿತ್ತು. ಇದನ್ನು ಮನಗಂಡ ಕಲಾಂರ ವಿಜ್ಞಾನಿ ತಂಡ, ಶಿಕ್ಷಣ, ಮಾಹಿತಿ, ಹವಮಾನ, ಕೃಷಿ ಎಲ್ಲಾ ವಿಷಯಗಳ ಬಗ್ಗೆ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ಛಲ ತೊಟ್ಟರು. ಈ ನಿಟ್ಟಿನಲ್ಲಿ ಭಾರತವು ಸದೃಡವಾಗಿ ಬೆಳೆಯುವುದು ಮುಂದುವರಿದ ರಾಷ್ಟ್ರಗಳಿಗೆ ಬೇಕಿರಲಿಲ್ಲ. ಕಾರಣ ಜಗತ್ತಿನ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾರತವು ಸಮಗ್ರವಾಗಿ ತಂತ್ರಜ್ಞಾನದಲ್ಲಿ ವಿಶ್ವದಲ್ಲಿ ಬೆಳೆಯುವುದೆಂಬ ಭಯ, ಅಸೂಯೆ ಅವುಗಳಿಗಿತ್ತು.

Abdul kalam-July 28_2015-005

Abdul kalam-July 28_2015-008

ಭಾರತವು ಎಲ್ಲ ರೀತಿಯ ಸಂಪತ್ತು, ಪ್ರತಿಭೆಗಳಿದ್ದರೂ ಅವುಗಳನ್ನು ಬಳಸಿಕೊಳ್ಳುವ ಸೌಲಭ್ಯ ನಮ್ಮಲಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಅಪ್ಪಟ ದೇಶೀಯ ಪ್ರತಿಭೆಯ ಅಬ್ದುಲ್ ಕಲಾಂರ ತಂಡದಲ್ಲಿ ದೇಶ ಪ್ರೇಮದ ಛಲ ಮೂಡಿಸಿತ್ತು. ದೇಶವನ್ನು ನಮ್ಮದೆ ಸಂಪನ್ಮೂಲ, ನಮ್ಮದೆ ಶ್ರಮ ಶಕ್ತಿ, ನಮ್ಮದೆ ಜ್ಞಾನ ಸಂಪತ್ತು, ನಮ್ಮದೆ ಸವಾಲು, ಸಾಧನೆಗಳ ಮೇಲೆ ಹಂತ ಹಂತವಾಗಿ ಬಲಾಡ್ಯವಾಗಿ ಕಟ್ಟಬೇಕೆಂಬ ದೀಕ್ಷೆ ತೆಗೆದುಕೊಂಡ ಫಲವಾಗಿ ಭಾರತದ ಮೊಟ್ಟ ಮೊದಲ ದೇಶಿ ನಿರ್ಮಿತ ಉಪಗ್ರಹ ಉಡಾವಣಾ ವಾಹಕ ಎಸ್. ಎಲ್. ವಿ.-3 ನಿರ್ಮಾಣದ ಮಹತ್ವದ ಯೋಜನೆಗೆ ಕಲಾಂ ನಿರ್ಧೇಶಕರಾದರು. ಎಸ್.ಎಲ್.ವಿ-3 ರ ವಿನ್ಯಾಸ ಅಭಿವೃದ್ದಿ ಆರ್ಹತೆ ಮತ್ತು ಉಡಾವಣಾ ಪ್ರಯೋಗ ಇವಿಷ್ಟು ಕ್ಷೇತ್ರದಲ್ಲಿ ತೊಡಗಿಸಿಕೊಂಡ ನೂರಾರು ವಿಜ್ಞಾನಿಗಳ ಅನುಭವ, ಸಾಧನೆ, ಒಗ್ಗಟ್ಟು ಇವುಗಳ ಅಂತಿಮ ಯಶಸ್ಸನ್ನು ಪರಾಮರ್ಷಿಸುವ ನಾಯಕರಾಗಿದ್ದರು ಅಬ್ದುಲ್ ಕಲಾಂ.

Abdul kalam-July 28_2015-007

Abdul kalam-July 28_2015-011

ಭಾರತದಲ್ಲಿ ತಂತ್ರಜ್ಞಾನ, ಅಭಿವೃದ್ದಿ, ರಕ್ಷಣಾ ಸಾಮರ್ಥ್ಯ, ರಾಕೇಟುಗಳ ಅಭಿವೃದ್ದಿ ಯೋಜನೆಗಳಿಗೆ ಭಾರತದ ಪ್ರಥಮ ಪ್ರಧಾನಿ ಕನಸುಗಾರ ಜವಹರ್ ಲಾಲ್ ನೆಹರೂ ಅದ್ಯತೆ ನೀಡಿ ಪೋಷಿಸಿದರು. ನೆರೆ ರಾಷ್ಟ್ರಗಳ ಯುದ್ದದ ಅನುಭವದಿಂದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಎಲ್ಲ ಯೋಜನೆಗಳಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮುಕ್ತ ನೆರವು , ಪ್ರೋತ್ಸಾಹ ನೀಡಿದರು. ಭಾರತದ ಆರು ಮಂದಿ ಪ್ರಧಾನಿಗಳಿಗೆ ವೈಜ್ಞಾನಿಕ ಸಲಹೆಗಾರರಾಗಿ ಅಪಾರ ಅನುಭವದ ಅಪ್ಪಟ ದೇಶಪ್ರೇಮಿ 1970-80 ರ ಅವಧಿಯ ಎಸ್.ಎಲ್.ವಿ.-3 ಯಶಸ್ವಿಯಾಗಿ ಉಡಾವಣೆಯಾಗುವ ತನಕ ತಮ್ಮನ್ನು ತಾವೇ ತೊಡಗಿಸಿಕೊಂಡು, ಜೊತೆಗೆ ಅರ್ಪಣಾ ಮೊನೋಭಾವದ ವಿಜ್ಞಾನಿಗಳ ಶ್ರಮದ ಫಲವಾಗಿ ಕೆಲವೇ ವರ್ಷಗಳಲ್ಲಿ ಪ್ರಯೋಗಾರ್ಥ ಪ್ರಯೋಗಾರ್ಥ ಉಪಗ್ರಹಗಳಾದ ಅರ್ಯಭಟ, ಭಾಸ್ಕರಗಳ ಯಶಸ್ವಿ ಉಡಾವಣೆ. 1980 ರ ಜುಲೈ 18 ರಂದು ಎಸ್. ಎಲ್.ವಿ.-3 ಯಶಸ್ವಿಯಾಗಿ ಉಡಾವಣೆಯಾಯಿತು.

Abdul kalam-July 28_2015-009

Abdul kalam-July 28_2015-010

ಭಾಹ್ಯಕಾಶ ತಂತ್ರಜ್ಞಾನದ ಪಿತಾಮಹಾ ಡಾ. ವಿಕ್ರಂ ಸಾರಾಬಾಯ್, ಅವರ ನಂತರ ಅವರ ಸ್ಥಾನ ತುಂಬಿದ ಭಾಹ್ಯಕಾಶ ವಿಜ್ಞಾನಿ ಡಾ. ಸತೀಶ್ ಧಾವನ್, ಭಾರತದ ಅಣ್ವಸ್ತ್ರ ಸಾಮಗ್ರಿಗಳ ಜನಕ ಬ್ರಹ್ಮಪ್ರಕಾಶ್ ಈ ಮೂವರು ಮಹಾನ್ ಚೇತನಗಳೊಂದಿಗೆ ದುಡಿದ ಡಾ. ಅಬ್ದುಲ್ ಕಲಾಂ ರು ಇವರ ಶಿಸ್ತು, ದಕ್ಷತೆ, ಕಾರ್ಯವೈಖರಿ, ದೇಶಪ್ರೇಮ, ನಾಯಕತ್ವದ ಗುಣಗಳನ್ನು ಇನ್ನಷ್ಟು ಮೈಗೂಡಿಸಿಕೊಂಡರು.

Abdul kalam-July 28_2015-012

Abdul kalam-July 28_2015-013

ಭಾರತ ಕ್ಷಿಪಣಿ ಅಭಿವೃದ್ದಿ ಕಾರ್ಯಯೋಜನೆಗೆ ಕಲಾಂರನ್ನು ಮುಖ್ಯಸ್ಥರನ್ನಾಗಿ ನೇಮಿಸಿದ ನಂತರ ಭಾರತ ರಕ್ಷಣಾ ವ್ಯವಸ್ಥೆಯ ದಿಕ್ಕು ಬದಲಾಯಿತು. ನೆಲದಿಂದ ನೆಲಕ್ಕೆ ನಿಗದಿತ ಗುರಿಯತ್ತ ನೆಗೆಯುವ ಅಣ್ವಸ್ಥ್ರಗಳಂತಹ ಸಿಡಿತಲೆಗಳನ್ನು ಹೊತ್ತು ಆರ್ಭಟಿಸುತ್ತಾ ಶತ್ರು ಪಾಳ್ಯವನ್ನು ಧ್ವಂಸ ಮಾಡಬಲ್ಲ ಕ್ಷಿಪಣಿಗಳು ನಿರ್ಮಾಣವಾಯಿತು. ಕ್ಷಿಪಣಿಗಳಾದ ಪ್ರಥ್ವಿ, ಆಕಾಶ್, ನಾಗ್, ಅಗ್ನಿ, ತ್ರಿಶೂಲ್ ಗಳನ್ನು ನಿರ್ಮಿಸಿ, ಭಾರತದ ಕ್ಷಿಪಣಿಗಳ ಪಿತಾಮಹಾನೆಂದು ಡಾ. ಅಬ್ದುಲ್ ಕಲಾಂ ರನ್ನು ದೇಶ ಹೆಮ್ಮೆಯಿಂದ ಕೊಂಡಾಡಿದೆ.

Abdul kalam-July 28_2015-014

Abdul kalam-July 28_2015-015

24 ವರ್ಷಗಳ ಸುದೀರ್ಘ ಸಹನೆಯ ನಂತರ 1998 ಮೇ 11 ರಂದು ಪೊಕ್ರಾನ್ ನಲ್ಲಿ 2ನೇ ಬಾರಿಗೆ ಅಣ್ವಸ್ತ್ರ ಪ್ರಯೋಗಾರ್ಥ ಸ್ಪೋಟಕ ನಡೆಸಿ, ಅಣ್ವಸ್ತ್ರ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಯಿತು. ದೇಶದ ಹೆಮ್ಮೆಯ ಮಗ ಅಪ್ರತಿಮ ಸಾಧಕ ಮಹಾನ್ ವಿಜ್ಞಾನಿ ಮೊದಲ ಬಾರಿಗೆ ಭಾರತದ ರಾಷ್ಟ್ರಪತಿಯಾಗಿದ್ದು, ದೇಶದ ಭಾಗ್ಯ, ವಿಶ್ವದಲ್ಲಿ ವಿಶೇಷ ತಂತ್ರಜ್ಞಾನ ಪಡೆದಿರುವ ಭಾರತ ಧನ್ಯ. ದೇಶದ ಯಾವುದೇ ಭಾಗದಲ್ಲಿ ಮಕ್ಕಳ ಕಾರ್ಯಕ್ರಮವಿದ್ದರೆ, ಅಲ್ಲಿ ತೆರಳಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮುಂದಿನ ಭವಿಷ್ಯದ ತಂತ್ರಜ್ಞಾನಿ ಶಿಲ್ಪಿಗಳಾಗಿ ದೇಶಭಿಮಾನಿಗಳಾಗಿ ರೂಪಿಸಿಕೊಳ್ಳುವಂತೆ ಮಕ್ಕಳಲ್ಲಿ ಅತ್ಮವಿಶ್ವಾಸ ತುಂಬುತ್ತಿರುವ ಹಸನ್ಮುಖಿ ಡಾ. ಅಬ್ದುಲ್ ಕಲಾಂ ನಮ್ಮೆಲ್ಲರ ದೇಶದ ಆಸ್ಥಿಯಾಗಿದ್ದರು.

Abdul kalam-July 28_2015-017

ಡಾ. ಅಬ್ದುಲ್ ಕಲಾಂ ವಿಶ್ವಕ್ಕೆ ಸಾಹಿತ್ಯದ ಮೂಲಕ ನೀಡಿದ ಕೊಡುಗೆ, ‘ವಿಂಗ್ಸ್ ಆಪ್ ಫ಼ೈರ್ ‘, ಇಂಡಿಯಾ 20.20 ಎ ವಿಶನ್ ಪಾರ್ ದಿ ನ್ಯೂ ಮಿಲ್ಲೆನ್ನಿಯಂ’, ‘ಮೈ ಜರ್ನಿ’, ‘ಇಗ್ನೆಟೆಡ್ ಮೈಂಡ್ಸ್ ಆನ್ ಲೀಸಿಂಗ್ ಪವರ್ ವಿತ್ ಇನ್ ಇಂಡಿಯಾ’ ಗ್ರಂಥಗಳು ಮುಂದಿನ ಪೀಳಿಗೆಗೆ ಸಂಶೊಧನಾ ಗ್ರಂಥಗಳಾಗಿವೆ.

ಭಾರತೀಯರು ತಿಳಿದುಕೊಳ್ಳಬೇಕಾದ 5 ಸತ್ಯಗಳು.
1. 1988 ರ ಭಾರತದ ಅಣು ಅಸ್ತ್ರ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಡಾ. ಅಬ್ದುಲ್ ಕಲಾಂ. ಈ ಐತಿಹಾಸಿಕ ಸಾಧನೆಯಿಂದ ಏಕಾಏಕಿ ಪ್ರಸಿದ್ದರಾದ ಮಹಾನ್ ವಿಜ್ಞಾನಿ ಡಾ. ಅಬ್ದುಲ್ ಕಲಾಂ.
2. ರಾಷ್ಟ್ರಪತಿ ಆಗುವುದಕಿಂತ ಮುನ್ನ ಸರ್ಕಾರಿ ಸಂಸ್ಥೆಗಳಾದ ಡಿ ಆರ್ ಡಿ ಓ ಮತ್ತು ಇಸ್ರೊದಲ್ಲಿ ಏರೊಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಡಾ. ಅಬ್ದುಲ್ ಕಲಾಂ ಅಲ್ಲಿ ಅತ್ಯಾಧುನಿಕ ಕ್ಷಿಪಣಿ ಮತ್ತು ಉಡ್ಡಯನ ವಾಹನವನ್ನು ಅಭಿವೃದ್ಧಿಪಡಿಸಿದ್ದರು. ಹಿಗಾಗಿಯೇ ಡಾ. ಅಬ್ದುಲ್ ಕಲಾಂ “ಮಿಸೈಲ್ ಮ್ಯಾನ್” ಎಂದೇ ಖ್ಯಾತರಾಗಿದ್ದರು.
3. ಶಾಲಾ ದಿನಗಳಲ್ಲಿ ಡಾ. ಅಬ್ದುಲ್ ಕಲಾಂ ಅತ್ಯಂತ ಬುದ್ದಿವಂತ ವಿದ್ಯಾರ್ಥಿ ಆಗಿರಲಿಲ್ಲ
4. ಶಾಲೆ ಮುಗಿದ ಬಳಿಕ ನ್ಯೂಸ್ ಪೇಪರ್ ಮಾರಾಟ ಮಾಡಿ ಬಂದ ಹಣವನ್ನು ತಂದೆಗೆ ನೀಡಿ ಅವರ ಖರ್ಚಿನ ಭಾರ ತಗ್ಗಿಸುತ್ತಿದ್ದ ಬಾಲಕ ಅಬ್ದುಲ್ ಕಲಾಂ.
5. 1998 ರಲ್ಲಿ ಹೃದಯ ತಜ್ಞ ಸೋಮರಾಜು ರವರ ಸಹಕಾರ ಪಡೆದು ಕಡಿಮೆ ಖರ್ಚಿನ ಕರೋನರಿ ಸ್ಟೆಂಟ್ (ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ ನಿವಾರಣೆಗೆ ಬಳಸುವ ಉಪಕರಣ) ಅನ್ನು ಅಭಿವೃದ್ಧಿ ಪಡಿಸಿದ ಸಾಧನೆ ಡಾ. ಅಬ್ದುಲ್ ಕಲಾಂ ಅವರದ್ದು, ಜೊತೆಗೆ ಇಬ್ಬರೂ ಸೇರಿ ಆರೋಗ್ಯ ತಪಾಸಣೆ ನಡೆಸಬಲ್ಲ ಸುಲಭ ಸಾಧನ ಟ್ಯಾಬ್ಲೆಟ್ ಪಿಸಿಯನ್ನು ಅಭಿವೃದ್ಧಿ ಪಡಿಸಿದ್ದರು. ಈ ಟ್ಯಾಬ್ಲೆಟ್ ಗೆ ಕಲಾಮ್ ರಾಜು ಟ್ಯಾಬ್ಲೆಟ್ ಎಂದೇ ಹೆಸರು ನೀಡಲಾಗಿದೆ.
ವಿಶ್ವದ ವಿವಿಧ 30 ವಿಶ್ವ ವಿಧ್ಯಾಲಯಗಳಿಂದ ಗೌರವ ಡಾಕ್ಟರೇಟ್, 1981 ರಲ್ಲಿ ಪದ್ಮಭೂಷಣ. 1990ರಲ್ಲಿ ಪದ್ಮವಿಭೂಷಣ, 1997 ರಲ್ಲಿ ಭಾರತ ರತ್ನ ಪಡೆದಿರುವ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ರಿಗೆ, ವಿಶ್ವ ಭಾರತೀಯರ ಗೌರವಪೂರ್ವಕ ಅಂತಿಮ ನಮನಗಳು.
‘ಜೈ ಹಿಂದ್’

Ganesh-Rai-pict
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

Write A Comment