ಮಂಗಳೂರು,ಫೆ.20:ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ 12ನೇ ವಾರ್ಷಿಕ ಶ್ರೀ ಕೃಷ್ಣ – ಬಲರಾಮ ರಥಯಾತ್ರಾ ಉತ್ಸವು ನಗರದ ಡಾ| ಟಿ.ಎಂ.ಎ. ಪೈ ಸಭಾಂಗಣದಲ್ಲಿ ಫೆ .21 ರಂದು ಸಂಜೇ 5.30 ನಡೆಯಲಿದೆ ಎಂದು ಮಂಗಳೂರು ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಕಾರುಣ್ಯ ಸಾಗರ ದಾಸ ಸ್ವಾಮೀಜಿಯವರು ತಿಳಿಸಿದ್ದಾರೆ.
ಗುರುವಾರ ನಗರದ ಪತ್ರಿಕಾಭವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತಾನಾಡಿದ ಅವರು, ಬೆಂಗಳೂರಿನ ಇಸ್ಕಾನ್ ಸಂಸ್ಥೆ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ ಅಧ್ಯಕ್ಷತೆ ವಹಿಸುವರು. ರಥಯಾತ್ರೆ ಉತ್ಸವದಲ್ಲಿ ಕೃಷ್ಣ – ಬಲರಾಮರು ದ್ವಾಪರ ಯುಗದಲ್ಲಿ ಮಧುರ ನಗರವನ್ನು ರಥದಲ್ಲಿ ಅಸೀನರಾಗಿ ಭಕ್ತಭಿಮಾನಿಗಳಿಗೆ ದರ್ಶನ ನೀಡಿದ ಸನ್ನಿವೇಶವನ್ನು ಪುನಃ ರಚಿಸಲಾಗುವುದು ಅಲ್ಲದೇ ಜಗನ್ನಾಥ ಪುರಿ ದೇವಾಲಯದ ರಥಯಾತ್ರೆಯನ್ನು ಅನುಕರಿಸಲಾಗುವುದು ಎಂದು ಹೇಳಿದರು.
ಈ ಭವ್ಯ ರಥಯಾತ್ರೆಯ ಮೆರವಣಿಗೆಯ ಚಾಲನೆಯು ಸಂಜೆ 5.30ಕ್ಕೆ ಮಹಾಪೂಜಾ ವಿಧಿ-ವಿಧಾನಗಳ ಮೂಲಕ ಡಾ| ಟಿ.ಎಂ.ಎ. ಪೈ ಸಭಾಂಗಣದಿಂದ ಆರಂಭಗೊಳ್ಳುವುದು. ಶ್ರೀ ಶ್ರೀ ಕೃಷ್ಣ ಬಲರಾಮರ ವಿಗ್ರಹ/ಮೂರ್ತಿಗಳನ್ನು ಹೊತ್ತ ವೈವಿಧ್ಯಮಯ ಪುಷ್ಪಗಳಿಂದ ಅಲಂಕೃತಗೊಂಡ ದೀಪಗಳಿಂದ ಶೃಂಗಾರಿತ ರಥದ ಮೆರವಣಿಗೆಯು ಎಂ.ಜಿ. ರಸ್ತೆ, ಪಿ.ವಿ.ಎಸ್. ವೃತ್ತ, ನವಭಾರತ ವೃತ್ತ, ಕೆ.ಎಸ್. ರಾವ್. ರಸ್ತೆ, ಹಂಪನಕಟ್ಟೆ, ಮಾರ್ಕೆಟ್ ರಸ್ತೆ, ಜಿ.ಎಚ್.ಎಸ್. ರಸ್ತೆ, ಪಿ.ಎಂ. ರಾವ್. ರಸ್ತೆ, ಕೆ.ಎಸ್.ರಾವ್. ರಸ್ತೆ, ನವಭಾರತ ವೃತ್ತ, ಪಿ.ವಿ.ಎಸ್. ವೃತ್ತವಾಗಿ ಎಂ.ಜಿ. ರಸ್ತೆಯ ಮೂಲಕ ರಾತ್ರಿ 8.30ಕ್ಕೆ ಡಾ| ಟಿ.ಎಂ.ಎ. ಪೈ ಸಭಾಂಗಣದ ಆವರಣದಲ್ಲಿ ಸಮಾಪನಗೊಳ್ಳಲಿರುವುದು. ನಂತರ ವೈಭವಯುತ ಸಂಕೀರ್ತನೆ, ಮಹಾಮಂಗಳ ಆರತಿಯೊಂದಿಗೆ ರಥಯಾತ್ರೋತ್ಸವವು ಅಂತ್ಯಗೊಳ್ಳುವುದು. ಮೆರವಣಿಗೆಯಲ್ಲಿ ಭಜನೆ ,ಸಾಂಸ್ಕೃತಿಕ ಸಂಗೀತದ ತಂಡಗಳು ಭಾಗವಹಿಸಲಿವೆ ಎಂದು ಅವರು ವಿವರಿಸಿದರು
ಪ್ರತಿಷ್ಟಿತ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ ವಿಶ್ವದಾದ್ಯಂತ ಖ್ಯಾತಿ ಪಡೆದ ಆಧ್ಯಾತ್ಮಿಕ ಮತ್ತು ದಾನಪೂರ್ಣವಾದ ಧಾರ್ಮಿಕ ಸಂಸ್ಥೆ. ಈ ಸಂಸ್ಥೆಯು ವಿಶ್ವದಾದ್ಯಂತ ೪೦೦ ಶಾಖೆಗಳನ್ನೊಳಗೊಂಡು ಲಕ್ಷಾಂತರ ಅನುಯಾಯಿ ಮತ್ತು ಭಕ್ತಾಧಿಗಳನ್ನು ಹೊಂದಿದೆ. ಈ ಸಂಸ್ಥೆಯ ಸಂಸ್ಥಾಪಕರಾದ ಪವಿತ್ರಮಯ ಧಾರ್ಮಿಕ ಶ್ರೇಷ್ಟ ದಿವ್ಯಮಯ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರವರ ನೇತ್ರತ್ವದಲ್ಲಿ ವೇದಾಂತ ಜ್ಞಾನವನ್ನು, ಶಾಂತಿ, ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚಾರ ಕೈಗೊಳಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಪ್ರಜ್ಞಾ ಸಂಘದ ಕಾರ್ಯದರ್ಶಿ ಸನಂದನ ದಾಸ, ಸದಸ್ಯ ರಾಧ ಗೋವಿಂದ ದಾಸ, ಮಾಧ್ಯಮ ಸಲಹೆಗಾರ ಎಂ.ವಿ.ಮಲ್ಯ ಉಪಸ್ಥಿತರಿದ್ಧರು.