ಮಂಗಳೂರು, ನ.13: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ರಚಿಸಲ್ಪಡುವ ಬ್ಯಾರಿ-ಕನ್ನಡ- ಇಂಗ್ಲಿಷ್ ತ್ರಿಭಾಷಾ ಶಬ್ದಕೋಶಕ್ಕೆ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಕಾಡಮಿಯ ಕಚೇರಿಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಶಿಸಿ ಹೋಗುವ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯು ಶಬ್ದಕೋಶ ರಚನೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು. ಸ್ವಾಭಿಮಾನದ ದೃಷ್ಟಿಯಿಂದಲಾದರೂ ಸರಿ, ಬ್ಯಾರಿ ಭಾಷೆಗೆ ನಿಘಂಟಿನ ಅಗತ್ಯವಿದೆ. ಬದಲಾವಣೆಯ ಸ್ತಿತ್ಯಂತರದ ಈ ಸಂದರ್ಭ ರಚಿಸಲ್ಪಡುವ ತ್ರಿಭಾಷಾ ನಿಘಂಟು ಕೇವಲ ಬ್ಯಾರಿ ಭಾಷೆಗೆ ಸೀಮಿತವಾಗದೆ ಕನ್ನಡ ಭಾಷೆ ಮತ್ತು ಸಂಸ್ಕೃತಿಗೂ ಕೊಡುಗೆಯಾಗಲಿದೆ. ಬ್ಯಾರಿ ಭಾಷೆಯ ಮೇಲೆ ತುಳು, ಮಲಯಾಳಂ, ಅರಬಿಕ್ ಭಾಷೆಯ ಪ್ರಭಾವವಿದ್ದಂತೆ ಈ ಭಾಷೆಗಳ ಮೇಲೂ ಬ್ಯಾರಿ ಭಾಷೆಯ ಛಾಯೆ ಇರುವ ಸಾಧ್ಯತೆ ಇದೆ. ಈ ಕುರಿತು ಸಂಶೋಧನೆಯಾಗಬೇಕು ಎಂದು ವಿದ್ವಾಂಸ ಪ್ರೊ.ಎ.ವಿ.ನಾವಡ ಅಭಿಪ್ರಾಯಪಟ್ಟರು.
ಪ್ರಸ್ತುತ ಇಂಗ್ಲಿಷ್ನಲ್ಲಿ ಬಳಸಲಾಗುವ ‘ಕರಿ’ ಎಂಬ ಶಬ್ದ ಕನ್ನಡದ ‘ಕರಿಯುವುದು’ ಎಂಬುದರ ಮೂಲೋತ್ಪತ್ತಿಯಾಗಿದ್ದು, 1598ರ ಬಳಿಕ ಆಂಗ್ಲ ಭಾಷೆಯಲ್ಲಿ ಪದ ಪ್ರಯೋಗ ಕಾಣಬಹುದಾಗಿದೆ. ಭಾರತಕ್ಕೆ ಆಗಮಿಸಿದ ಪೋರ್ಚುಗೀಸರು ಈ ಶಬ್ದವನ್ನು ಆಂಗ್ಲ ಭಾಷೆಗೆ ಸೇರಿಸಿದ್ದು, ಅದರ ಭಾವಾರ್ಥ ‘ಮಸಾಲೆಯನ್ನು ಮಿಶ್ರ ಮಾಡಿದ ದ್ರವ್ಯ’ ಎಂಬುದಾಗಿದೆ ಎಂದು ಪ್ರೊ.ನಾವಡ ವಿವರಿಸಿದರು.
ಜಾಗತೀಕರಣದ ಹಾವಳಿ ಇದೆ ಎಂದು ಹತಾಶ ರಾಗದೆ ಎಲ್ಲ ರೀತಿಯ ಅತಿಕ್ರಮಣ, ಪ್ರಭಾವ, ಒತ್ತಡದಿಂದ ಹೊರಬರುವುದರೊಂದಿಗೆ ಬ್ಯಾರಿ ಭಾಷೆಯನ್ನು ಶಾಸ್ತ್ರೀಯ ಭಾಷೆಯಾಗಿ ರೂಪುಗೊಳಿ ಸಬೇಕು ಎಂದು ಪ್ರೊ.ಎ.ವಿ.ನಾವಡ ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ‘ಕನಿಷ್ಠ 30 ಸಾವಿರ ಶಬ್ದಗಳನ್ನೊಳಗೊಂಡ ನಿಘಂಟು ರಚಿಸುವ ಉದ್ದೇಶವಿದೆ’ ಎಂದರು. ಸರ್ವ ಬ್ಯಾರಿಗಳ ಸಹಕಾರ ಸಿಕ್ಕಿದರೆ 30 ಸಾವಿರವಲ್ಲ, 50 ಸಾವಿರ ಶಬ್ದಗಳನ್ನು ಒಳಗೊಂಡ ನಿಘಂಟು ರಚಿಸಿ ಕೊಡುವ ವಿಶ್ವಾಸವನ್ನು ನಿಘಂಟು ಸಂಪಾದಕ ಮಂಡಳಿಯ ಸಂಪಾದಕ ಪ್ರೊ.ಬಿ.ಎಂ.ಇಚ್ಲಂಗೋಡು ವ್ಯಕ್ತಪಡಿಸಿದರು. ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಲಿಪಿತಜ್ಞ ಕೆ.ಪಿ.ರಾವ್ ಶುಭ ಹಾರೈಸಿ ದರು. ಉಪ ಸಂಪಾದಕ ಡಾ.ಎನ್.ಇಸ್ಮಾಯೀಲ್ ಉಪಸ್ಥಿತರಿದ್ದರು.
ಅಕಾಡಮಿಯ ಸದಸ್ಯ ಯೂಸುಫ್ ವಕ್ತಾರ್ ಸ್ವಾಗತಿ ಸಿದರು. ರಿಜಿಸ್ಟ್ರಾರ್ ಉಮರಬ್ಬ ಪ್ರಾಸ್ತಾವಿಸಿದರು. ಸದಸ್ಯ ಇದಿನಬ್ಬ ವಂದಿಸಿದರು. ಸದಸ್ಯ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.