ಮಂಗಳೂರು,ನ.13 : ಗ್ರಾಪಂ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಕಾರ್ಯವೈಖರಿಯಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದ್ದಾರೆ. ಬಿ.ಸಿ. ರೋಡಿನ ತಾಪಂ ಎಸ್ಜೆಎಸ್ವೈ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ವಿಶೇಷ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದ ಅವರು ಕರ್ತವ್ಯಲೋಪವೆಸಗಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸರ್ವೆಯರ್ಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಮಹತ್ತರವಾದುದು. ಅವರು ಪ್ರಾಮಾಣಿಕವಾಗಿ ಇಚ್ಛಾಶಕ್ತಿ ಯಿಂದ ಕೆಲಸ ಮಾಡುವ ಮೂಲಕ ಸರಕಾರಿ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕು. ಈ ಮೂಲಕ ತಮ್ಮ ಸೇವೆಯಲ್ಲಿ ಆತ್ಮತೃಪ್ತಿಯನ್ನು ಕಾಣಬೇಕು ಎಂದರು.
ಜಿಪಂ ಉಪಾಧ್ಯಕ್ಷ ಸತೀಶ ಕುಂಪಲ ಕೆಲವು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಡವರಿಗೆ ನಿವೇಶನ ದೊರಕಿಸಿಕೊಡುವಲ್ಲಿ ಉದಾಸೀನತೆ ಮಾಡಬಾರದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿಎಗಳು ನಿವೇಶನ ಗುರುತಿಸಿಕೊಂಡು ನಿವೇಶನ ರಹಿತರು ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡಬೇಕು. ನಿವೇಶನಕ್ಕಾಗಿ ಕೇವಲ ತಾಲೂಕು ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಅಧಿಕಾರಿಗಳು ಮತ್ತೆ ಅದರ ಬೆನ್ನು ಬಿದ್ದು ಕೆಲಸ ಮಾಡಬೇಕು. ತಮ್ಮ ಇಲಾಖೆ ವ್ಯಾಪ್ತಿಯ ಹಿರಿಯ ಅಧಿಕಾರಿಗಳೊಡನೆ ಪರಸ್ಪರ ಮಾತಾಡಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಉಮೇಶ್ ಅವರು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸರಕಾರಿ ನಿವೇಶನದ ಬಗ್ಗೆ ಪಿಡಿಒಗಳಿಂದ ವಿವರಣೆ ಪಡೆದರು. ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು ಶೀಘ್ರ ತಮ್ಮ ಗ್ರಾ ಪಂ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗದ ಸರ್ವೆ ನಡೆಸಿ ಅದನ್ನು ಗ್ರಾಪಂಗಳ ವಶಕ್ಕೆ ಪಡೆಯುವಂತೆ ಸೂಚಿಸಿದರು. ಸರಕಾರಿ ಜಮೀನನ್ನು ಕಡ್ಡಾಯ ಗುರುತಿಸಿ ಬಡವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆ ಉಪಕಾರ್ಯದರ್ಶಿ ಸೂಚಿಸಿದರು.
ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಜಮೀನನ್ನು ಖಾಜಗಿ ಜಮೀನ್ದಾರರು ಅತಿಕ್ರಮಿಸಿಕೊಂಡಿರುವ ಬಗ್ಗೆ ಚರ್ಚೆ ನಡೆಯಿತು. ಇಂತಹ ಜಮೀನುಗಳನ್ನು ಮುಲಾಜಿಲ್ಲದೆ ಸರ್ವೆ ನಡೆಸಿ ವರದಿ ನೀಡುವಂತೆ ತಹಸೀಲ್ದಾರ್ ಮಲ್ಲೇಸ್ವಾಮಿ ಅವರು ಸರ್ವೆ ಅಧಿಕಾರಿಗಳಿಗೆ ಸೂಚಿಸಿದರು. ಪಿಡಿಒಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರಕಾರಿ ಜಮೀನಿನ ಬಗ್ಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಗುರುತಿಸಿ ನಿವೇಶನ ಇಲ್ಲವೇ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬಹುದು. ಈ ಬಗ್ಗೆ ಹಲವು ಸಭೆಯಲ್ಲಿ ಹೇಳಿದರೂ ಪಿಡಿಒಗಳು ಈ ಬಗ್ಗೆ ಸ್ಪಂದಿಸಿಲ್ಲ ಎಂದು ತಹಸೀಲ್ದಾರ್ ಹೇಳಿದರು. ಪಿಡಿಒಗಳು ನಿವೇಶನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ನಿರ್ವಹಿಸುವಂತೆ ಅಧ್ಯಕ್ಷರು, ಉಪಾಧ್ಯಕ್ಷರು ಸೂಚಿಸಿದರು.
ಬೆಳೆಯುತ್ತಿರುವ ಮುಡಿಪು ಪೇಟೆಯಲ್ಲಿ ದ್ರವ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮಂಜೂರುಗೊಂಡು ವರ್ಷಗಳೇ ಕಳೆದಿದೆ. ಅನುದಾನವೂ ಮಂಜೂರಾಗಿದೆ. ಖಾಸಗಿ ವ್ಯಕ್ತಿಗಳು ಇದಕ್ಕಾಗಿ ಬೆಲೆ ಬಾಳುವ ಜಾಗವನ್ನೂ ಬಿಟ್ಟುಕೊಟ್ಟಿದ್ದಾರೆ. ಆದರೆ ಯೋಜನೆ ಯಾಕೆ ಅನುಷ್ಠಾನಗೊಂಡಿಲ್ಲ ಎಂದು ಜಿಪಂ ಸದಸ್ಯ ಸಂತೋಷ್ ಕುಮಾರ್ ರೈ ಪ್ರಶ್ನಿಸಿದರು.
ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂಬ ಉತ್ತರ ದೊರೆತಾಗ, ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರದಲ್ಲಿ ಟೆಂಡರ್ ಕರೆದು ಒಂದೆರೆಡು ದಿನಗಳಲ್ಲಿ ಕಾಮಗಾರಿ ಆರಂಭಿಸುವ ಬಗ್ಗೆ ಎನ್ಬಿಎ ಅಧಿಕಾರಿ ಹಾಗೂ ಉಪ ಕಾರ್ಯದರ್ಶಿಯವರಿಂದ ಭರವಸೆ ದೊರೆತ ಹಿನ್ನೆಲೆಯಲ್ಲಿ ಚರ್ಚೆಗೆ ತೆರೆ ಬಿತ್ತು. ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ನಿವೇಶನ ಹಾಗೂ ಅನುದಾನ ಮಂಜೂಗಿರುವ ಬಗ್ಗೆ ಹಾಗೂ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಬಿಪಿಎಲ್ ಪಲಾನುಭವಿಗಳು ಶೌಚಾಲಯ ನಿರ್ಮಸುವ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು.
ಜಿಪಂ ಸದಸ್ಯರಾದ ನಳಿನಿ ಬಿ. ಶೆಟ್ಟಿ, ಜಯಶ್ರೀ, ಚೆನ್ನಪ್ಪ ಕೋಟ್ಯಾನ್, ಸಂತೋಷ್ ಕುಮಾರ್ ರೈ, ತಾಪಂ ಅಧ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಕಾರ್ಯನಿರ್ವ ಹಣಾಧಿಕಾರಿ ಸಿಪ್ರಿಯನ್ ಮಿರಾಂದ ಮತ್ತಿತರರಿದ್ದರು.