ಮಂಗಳೂರು, ನ. 10: ಭಾರತೀಯ ತಟ ರಕ್ಷಣಾ ಪಡೆಯಿಂದ ಕರ್ನಾಟಕ ಕರಾವಳಿಗೆ ಹೊಸದಾಗಿ ಸೇರ್ಪಡೆಯಾಗಿರುವ ಹೋವರ್ಕ್ರಾಫ್ಟ್ 196, 198 ಹಾಗೂ ಕಾವಲು ಹಡಗು ಸಾಮರ್ಥ್ಯವನ್ನು ರಾಜ್ಯಪಾಲ ವಾಜುಭಾಯಿ ವಾಲಾ ಅವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ.
ಪಣಂಬೂರಿನ ಕರಾವಳಿ ತಟ ರಕ್ಷಣಾ ಪಡೆಯ ಕಚೇರಿ ಬಳಿಯ ಸಮುದ್ರ ಕಿನಾರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಾ೯ಟಕದ ಪಾಲಿಗೆ ಇಂದು ಶುಭ ದಿನ. ಭಯೋತ್ಪಾದಾಕರು ಜಲ ಮಾರ್ಗವಾಗಿ ಬಂದು ದೇಶದ ಭದ್ರತೆಗೆ ಆತಂಕವೊಡ್ಡುತ್ತಿದ್ದು, ಇಂತಹ ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ಭಾರತೀಯ ತಟ ರಕ್ಷಣಾ ಪಡೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ಸಮುದ್ರದ ಮೂಲಕ ದೇಶದೊಳಗೆ ನುಗ್ಗಲು ಯತ್ನಿಸುವ ಆಂತಕವಾದಿಗಳ ನಿಗ್ರಹದ ಜತೆಯಲ್ಲೇ ಸಮುದ್ರದಲ್ಲಿ ಸಂಕಷ್ಟಕ್ಕೀಡಾಗುವ ಮೀನುಗಾರರ ರಕ್ಷಣೆಯಲ್ಲಿ ತಟ ರಕ್ಷಣಾ ಪಡೆಯ ಈ ನೂತನ ಅತ್ಯಾಧುನಿಕ ವಾಹನಗಳು ಪ್ರಮುಖ ಪಾತ್ರ ವಹಿಸಲಿವೆ ಎಂದವರು ಹೇಳಿದರು.
ಯಾವುದೇ ರೀತಿಯ ಅಪಾಯಗಳಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ಕಾಯುತ್ತಿರುವುದರಿಂದ ನಾವಿಂದು ನಿಶ್ಚಿಂತೆಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ. ಹಾಗಾಗಿ ರಾಷ್ಟ್ರ, ರಾಜ್ಯದ ಜನತೆಯ ಪರವಾಗಿ ದೇಶದ ಎಲ್ಲಾ ಸೇನಾನಿಗಳಿಗೆ ವಂದನೆ ಸಲ್ಲಿಸುವುದಾಗಿ ಹೇಳಿದ ಅವರು, ದೇಶದ ನೂತನ ರಕ್ಷಣಾ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಮನೋಹರ್ ಪಾರಿಕ್ಕಾರ್ಗೆ ಈ ಸಂದರ್ಭ ಅಭಿನಂದನೆ ಸಲ್ಲಿಸಿದರು.
ಕರ್ನಾಟಕ ಕರಾವಳಿ ತಟ ರಕ್ಷಣಾ ಪಡೆಗೆ ಈಗಾಗಲೇ ಸುಸಜ್ಜಿತ ಶಸ್ತ್ರಾಸ್ತ್ರ ಹೊಂದಿರುವ ಕಣ್ಗಾವಲು ಹಡಗು ಅಮರ್ತ್ಯ ಮಂಗಳೂರಿಗೆ ಆಗಮಿಸಿದೆ. ಇದರ ಜತೆಗೆ ಗೋವಾದಲ್ಲಿ ಕಣ್ಗಾವಲು ಹಡಗು ಅಮಲ್ ಹಾಗೂ ಏರ್ಕ್ರಾಫ್ಟ್ ಚಾರ್ಲಿ- 150 ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರಿಗೆ ಇಂಟರ್ಸೆಪ್ಟರ್ ಏರ್ಕ್ರಾಫ್ಟ್ ಸೇರಲಿದ್ದು ಕರಾವಳಿಯಲ್ಲಿ ಭದ್ರತೆಗೆ ಮತ್ತಷ್ಟು ಬಲ ಬರಲಿದೆ .
ಕಾರ್ಯಕ್ರಮದಲ್ಲಿ ಕೋಸ್ಟ್ ಗಾಡ್೯ ರೀಜನ್ (ಪಶ್ಚಿಮ)ನ ಇನ್ಸ್ಪೆಕ್ಟರ್ ಜನರಲ್ ಎಸ್.ಪಿ.ಎಸ್. ಬಸ್ರಾ, ಕರಾವಳಿ ತಟರಕ್ಷಣಾ ಪಡೆಯ ಕರ್ನಾಟಕ ಕಮಾಂಡರ್ ಹಾಗೂ ಡಿಐಜಿ ರಾಜಮಣಿ ಶರ್ಮ, ಎಸಿವಿ -ಎಚ್ 196ನ ಕಮಾಂಡಿಂಗ್ ಅಫೀಸರ್ ಗುಲ್ವಿಂದರ್ ಸಿಂಗ್, ಎಸಿವಿ -ಎಚ್ 198ನ ಕಮಾಂಡಿಂಗ್ ಅಫೀಸರ್ ಅಮಿತಾಬ್ ಬ್ಯಾನಜಿ೯, ಕರಾವಳಿ ತಟ ರಕ್ಷಣಾ ಪಡೆಯ ಕಮಾಂಡೆಂಟ್ ರಾಜೇಂದರ್ ಸಿಂಗ್ ಸಪಲ್ , ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯ್ದಿನ್ ಬಾವ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮಂಗಳೂರು ಪೊಲೀಸ್ ಆಯುಕ್ತ ಆರ್. ಹಿತೇಂದ್ರ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಉಪಸ್ಥಿತರಿದ್ದರು.