ಮಂಗಳೂರು : ಆರ್ಎಸ್ಎಸ್ ಪ್ರಚಾರಕ್, ಭಾರತೀಯ ಜನಶಕ್ತಿ ಪಕ್ಷದ ಮಾಜಿ ಕಾರ್ಯದರ್ಶಿ, ಪಂಜಾಬ್ ವಿಶ್ವನಾಥ್ ಎಂದೆ ಪ್ರಸಿದ್ದರಾಗಿದ್ದ ವಿಶ್ವನಾಥ್ ಸುವರ್ಣ ಅವರು ಶುಕ್ರವಾರ ನಿಧನ ಹೊಂದಿದ್ದಾರೆ.
ನಗರದ ಪಾಂಡೇಶ್ವರ ಸಮೀಪದ ಫೋರಮ್ ಫಿಜಾ ಮಾಲ್ನ ಬಳಿ ಇರುವ ವಸತಿ ಸಮುಚ್ಛಯದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 67 ವರ್ಷ ಪ್ರಾಯವಾಗಿತ್ತು.
ಪಾರ್ಶ್ವವಾಯು ಪೀಡಿತರಾಗಿದ್ದ ವಿಶ್ವನಾಥ್ ಅವರು ಧೀರ್ಘ ಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದರು. 1990ರ ವೇಳೆಗೆ ಆರ್ಎಸ್ಎಸ್ನ ಪ್ರಚಾರಕರಾಗಿದ್ದ ಪ್ರಧಾನಿ ಮೋದಿ ಅವರೊಂದಿಗೆ ಸುಮಾರು ನಾಲ್ಕು ವರ್ಷಗಳ ಕಾಲ ವಿಶ್ವನಾಥ್ ಒಟ್ಟಾಗಿ ಸಂಘದ ಕೆಲಸ ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ.
15 ದಿನಗಳಹಿಂದೆ ವಿಶ್ವನಾಥ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿಗಿತ್ತು, ಅಲ್ಲಿ ವೈದ್ಯರ ಚಿಕಿತ್ಸೆಗೆ ಇವರು ಸ್ಪಂದಿಸದ ಕಾರಣ ಇವರನ್ನು ಮನೆಗೆ ವಾಪಾಸ್ ಕರೆತರಲಾಗಿತ್ತು.
ಮೃತರು ಪತ್ನಿ ,ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ವಿಶ್ವನಾಥ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಸಾವಿರಾರು ಅಭಿಮಾನಿಗಳು ಹಾಗೂ ಬಂಧು, ಬಾಂದವರ ಸಮ್ಮುಖದಲ್ಲಿ ನೆರವೇರಿತು.